ರಾಹುಲ್ ವಿರುದ್ಧ ಹಕ್ಕುಚ್ಯುತಿ ಮಂಡನೆ: ಸುರೇಶ ಅಂಗಡಿ
Team Udayavani, Jul 23, 2018, 7:00 AM IST
ಬೆಳಗಾವಿ: ಸಂಸತ್ನಲ್ಲಿ ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಸದನದ ಗಂಭೀರತೆಯೇ ಇಲ್ಲ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿ, ಪ್ರಧಾನಿ ಅವರನ್ನು ಬಯ್ದು ಹೋಗಿ ಬಿಡುವುದು. ನಿರಾಧಾರ ಟೀಕೆ ಮಾಡಿ ನಂತರ ಬಂದು ಅಪ್ಪಿಕೊಳ್ಳುವುದು. ಇದು ರಾಹುಲ್ ಗಾಂಧಿಗೆ ಇನ್ನೂ ರಾಜಕೀಯದಲ್ಲಿ ಅನುಭವ ಇಲ್ಲ ಎಂಬುದನ್ನು ತೋರಿಸುತ್ತದೆ. ಅವರು ಮಮ್ಮಿ ಮಗ, ತಾಯಿಯ ಮಗನಲ್ಲ. ಸದನದಲ್ಲಿ ಯಾವುದೇ ದಾಖಲೆ ಇಲ್ಲದೆ ಪ್ರಧಾನಿ ವಿರುದ್ಧ ಆರೋಪಗಳನ್ನು ಮಾಡಿದ ರಾಹುಲ್ ಗಾಂಧಿ ವಿರುದ್ಧ ಸಂಸದ ಪ್ರಹ್ಲಾದ ಜೋಶಿ ಹಕ್ಕುಚ್ಯುತಿ ಮಂಡಿಸಿದ್ದು, ಇದರ ವಿಚಾರಣೆ ಸೋಮವಾರ ಬರಲಿದೆ ಎಂದರು.
ಐಫೋನ್ನ್ನು ವಾಪಸ್ ಮಾಡುವೆ: ರಾಜ್ಯದ ಎಲ್ಲ ಸಂಸದರಿಗೆ ನೀಡಿರುವಂತೆ ನನಗೂ ಸೂಟ್ಕೇಸ್ ಜೊತೆಗೆ ಐಫೋನ್ ನೀಡಿದ್ದಾರೆ. ಸಂಪ್ರದಾಯದಂತೆ ಸರ್ಕಾರ ಸಂಸದರಿಗೆ ಸೂಟ್ಕೇಸ್ ನೀಡುತ್ತದೆ. ಅದರಲ್ಲಿ ರಾಜ್ಯದ ವಿವಿಧ ಯೋಜನೆಗಳು, ಕೇಂದ್ರದಲ್ಲಿ ಬಾಕಿ ಉಳಿದಿರುವ ಫೈಲ್ಗಳಿರುತ್ತವೆ. ಅದರ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಯೋಜನೆಗೆ ಮಂಜೂರಾತಿ ದೊರಕಿಸಿಕೊಡುವುದು ಹಾಗೂ ಅನುದಾನ ಬಿಡುಗಡೆಗೆ ಪ್ರಯತ್ನ ಮಾಡುವುದು ಸಂಸದರ ಜವಾಬ್ದಾರಿ. ಅಂತೆಯೇ ರಾಜ್ಯ ಸರ್ಕಾರ ಈ ಬಾರಿಯೂ ಸೂಟ್ಕೇಸ್ ನೀಡಿದೆ. ಆದರೆ, ಇದರಲ್ಲಿ ಐಫೋನ್ ಇರುವುದು ಗೊತ್ತಿರಲಿಲ್ಲ. ನಾನು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಸೂಟ್ಕೇಸ್ ನೀಡಲಾಗಿದೆ. ನಂತರ, ಅದರಲ್ಲಿ ಐಫೋನ್ ಇರುವುದು ಗಮನಕ್ಕೆ ಬಂದಿದೆ. ಆದರೆ, ಈ ಐಫೂನ್ ಪಡೆದುಕೊಳ್ಳಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹೀಗಾಗಿ, ಅದನ್ನು ಸೋಮವಾರ ವಾಪಸ್ ಮಾಡುತ್ತಿದ್ದೇನೆ ಎಂದರು.