ಬಾಕಿ ಬಿಲ್ ಪಾವತಿಸದಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಆಸ್ಪ ತ್ರೆ ವಿರುದ್ಧ ಆಕ್ರೋಶ
Team Udayavani, Jun 14, 2021, 5:25 PM IST
ಬೆಳಗಾವಿ: ಬಾಕಿ ಬಿಲ್ ಪಾವತಿಸಿಲ್ಲ ಎಂಬ ನೆಪವೊಡ್ಡಿ ಖಾಸಗಿ ಆಸ್ಪತ್ರೆಯವರು ಮಾಜಿ ಸೈನಿಕನ ಮೃತದೇಹ ನೀಡದೇ ಅಮಾನವೀಯವಾಗಿ ವರ್ತಿಸಿದ ಘಟನೆ ರವಿವಾರ ನಡೆದಿದೆ.
ನಗರದ ಖಾಸಗಿ ಆಸ್ಪತ್ರೆಗೆ ಕಳೆದ 23 ದಿನಗಳ ಹಿಂದೆ ಕೋವಿಡ್ದಿಂದಾಗಿ ದಾಖಲಾಗಿದ್ದ ತಾಲೂಕಿನ ಉಚಗಾಂವ ಗ್ರಾಮದ ರಾಜೇಂದ್ರ ಮೆಣಸೆ(41) ಎಂಬ ನಿವೃತ್ತ ಯೋಧ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಗೆ ರವಿವಾರ ಮೃತದೇಹ ನೀಡಲು ಆಸ್ಪತ್ರೆಯವರು ಹಿಂದೇಟು ಹಾಕಿದ್ದಾರೆ. ಬಾಕಿ ಬಿಲ್ ಪಾವತಿಸುವವರೆಗೂ ಮೃತದೇಹ ಒಯ್ಯದಂತೆ ತಾಕೀತು ಮಾಡಿದ್ದಾರೆ.
ಮೊದಲೇ ಲಕ್ಷಾಂತರ ರೂ. ಬಿಲ್ ಕಟ್ಟಿದ್ದ ಕುಟುಂಬಸ್ಥರು ಆಸ್ಪತ್ರೆಯವರ ವರ್ತನೆಯಿಂದ ಬೇಸತ್ತಿದ್ದಾರೆ. ಆಸ್ಪತ್ರೆಗೆ ದಾಖಲಿಸಿದಾಗಿನಿಂದ 3.10 ಲಕ್ಷ ರೂ. ಪಾವತಿಸಿದ್ದೇವೆ. ಮತ್ತೆ 3.63 ಲಕ್ಷ ರೂ. ಬಾಕಿ ಬಿಲ್ ಪಾವತಿಸುವಂತೆ ಹೇಳಿದ್ದಾರೆ. ಹಣ ಕಟ್ಟಿದ ಮೇಲೆ ಮೃತದೇಹ ನೀಡುವುದಾಗಿ ತಾಕೀತು ಮಾಡಿದ್ದಾರೆ.
ದಿಕ್ಕು ತೋಚದೇ ಏನು ಮಾಡುವುದು ಎಂದು ತಿಳಿದಿಲ್ಲ. 23 ದಿನಗಳ ಕಾಲ ಎಂಥ ಚಿಕಿತ್ಸೆ ನೀಡಿದ್ದಾರೆ ಎಂಬುದಾಗಿ ಆಸ್ಪತ್ರೆಯವರು ಹೇಳಿಲ್ಲ. ಒಮ್ಮೇಲೆ ಇಷ್ಟೊಂದು ಬಿಲ್ ಕಟ್ಟುವಂತೆ ಹೇಳಿದರೆ ನಾವು ಏನು ಮಾಡುವುದು ಎಂದು ಕುಟುಂಬಸ್ಥರು ಹಾಗೂ ಮೃತ ಯೋಧನ ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದರು.