ಪಂಚೇಂದ್ರಿಯಗಳಲ್ಲಿ ಕಣ್ಣಿಗೆ ಪ್ರಾಶಸ್ತ್ಯ
•80 ಜನರ ಕಣ್ಣಿನ ಶಸ್ತ್ರಚಿಕಿತ್ಸೆಗೆ ನೆರವು•ಚನ್ನವೀರ ಶರಣರ ಪುಣ್ಯಸ್ಮರಣೆ
Team Udayavani, Jul 22, 2019, 1:02 PM IST
ಬಳ್ಳಾರಿ: ಬಸವಭವನದಲ್ಲಿ ಚಿಕೇನಕೊಪ್ಪ ಚನ್ನವೀರ ಶರಣರ 24ನೇ ಪುಣ್ಯಸ್ಮರಣೆ ನಿಮಿತ್ತ ನಡೆದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರವನ್ನು ಶಿವಶಾಂತವೀರ ಶರಣರು ಉದ್ಘಾಟಿಸಿದರು.
ಬಳ್ಳಾರಿ: ಪಂಚೇಂದ್ರಿಯಗಳಲ್ಲಿ ಕಣ್ಣಿನ ಆರೋಗ್ಯ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಚಿಕೇನಕೊಪ್ಪದ ಚನ್ನವೀರ ಮಹಾಶರಣರ ಕರಸಂಜಾತ ಶಿವಶಾಂತವೀರ ಶರಣರು ತಿಳಿಸಿದರು.
ನಗರದ ಬಸವ ಭವನದಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ 24ನೇ ಪುಣ್ಯಸ್ಮರಣೆ ಅಂಗವಾಗಿ ಚಿಕೇನಕೊಪ್ಪದ ಚನ್ನವೀರ ಶರಣಬಳಗ, ರುದ್ರಮ್ಮ ತಾಳ್ಮೇರಪ್ಪ ರೂರಲ್ ಡೆವಲಪ್ಮೆಂಟ್ ಮತ್ತು ಎಜ್ಯುಕೇಷನ್ ಟ್ರಸ್ಟ್, ಡಾ| ವಿಜಯನಾಗರಾಜ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮತ್ತು ಜಿಲ್ಲಾ ಅಂಧತ್ವ ನಿಯಂತ್ರಣಾ ಸಂಸ್ಥೆ ಆಶ್ರಯದಲ್ಲಿ ನಡೆದ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಈ ಹಿಂದೆ ನೇತ್ರ ಚಿಕಿತ್ಸೆ ಮತ್ತು ದೃಷ್ಟಿ ದೋಷ ನಿವಾರಣೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಅನೇಕ ಸಂಕಷ್ಟಗಳಲ್ಲೇ ಹಲವರು ನೇತ್ರ ಚಿಕಿತ್ಸೆ ಪಡೆಯಲು ಸಂಕಷ್ಟಕ್ಕೆ ಒಳಗಾಗಿ, ಪರದಾಡುವಂತ ಸಂದರ್ಭಗಳು ಇದ್ದವು. ಅಂಥ ದಿನಗಳಲ್ಲಿ ಚನ್ನವೀರ ಶರಣರ ದಿವ್ಯ ಸಂಕಲ್ಪದಂತೆ ಭಕ್ತ ವೃಂದವು ನೇತ್ರ ಚಿಕಿತ್ಸೆ ಮತ್ತು ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸಿ, ಅನೇಕರಿಗೆ ನೆರವಾಗಿದೆ. ಈ ಸಂಕಲ್ಪವನ್ನು ಶರಣ ಭಕ್ತವೃಂದ ಸಂಪ್ರದಾಯದ ರೀತಿಯಲ್ಲಿ ಮುಂದುವರಿಸಿಕೊಂಡು ಬಂದಿದೆ. ಈ ನಿಟ್ಟಿನಲ್ಲಿ ಬಳ್ಳಾರಿಯ ಭಕ್ತರು ನೇತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಿರುವುದು ಸ್ವಾಗತಾರ್ಹ ಎಂದರು.
ಆಧುನಿಕ ತಂತ್ರಜ್ಞಾನದ ಬಳಕೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿ ಹಿನ್ನೆಲೆಯಲ್ಲಿ ನೇತ್ರ ಚಿಕಿತ್ಸೆ ಮತ್ತು ನೇತ್ರ ಶಸ್ತ್ರ ಚಿಕಿತ್ಸೆ ಸಾಕಷ್ಟು ಸರಳಿಕೃತಗೊಂಡಿದೆ. ಡಾ| ವಿಜಯ ನಾಗರಾಜ್ ಮತ್ತು ತಂಡ ನಮ್ಮ ಭಕ್ತವೃಂದದ ಮನವಿಗೆ ಸ್ಪಂದಿಸಿ, ಪ್ರತಿ ಶಿಬಿರವನ್ನು ಸೇವಾರ್ಥವಾಗಿ ನಿರ್ವಹಿಸುತ್ತಿರುವುದು ಅಭಿನಂದನೀಯ ಎಂದರು.
ಕೆ.ಎಂ. ಸಿದ್ಧಲಿಂಗಯ್ಯ ಸ್ವಾಮಿ ಮಾತನಾಡಿ, ಶಿಬಿರದಲ್ಲಿ 80 ಜನರಿಗೆ ನೇತ್ರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಭಕ್ತಾದಿಗಳು, ವೈದ್ಯರು ಮತ್ತು ಸೇವಾಕರ್ತ ದಾನಿಗಳ ನೆರವಿನಿಂದಾಗಿ ಚನ್ನವೀರ ಶರಣ ಹಾಗೂ ಶಿವಶಾಂತ ಶರಣರ ಸಂಕಲ್ಪವನ್ನು ಮುನ್ನಡೆಸಲಾಗಿದೆ ಎಂದರು. ನೇತ್ರತಜ್ಞ ಡಾ| ಎನ್. ವಿಜಯ್ ಅವರನ್ನು ಶಿವಶಾಂತವೀರ ಶರಣರು ಸನ್ಮಾನಿಸಿದರು.