ಅರ್ಧಕ್ಕೆ ನಿಂತ ರಾಷ್ಟ್ರೀಯ ಹೆದ್ದಾರಿ; ನೋಟಿಸ್ ಜಾರಿ
ಗ್ಯಾಮನ್ ಇಂಡಿಯಾ ಕಂಪನಿಗೆ ಎನ್ಎಚ್ಎಐ ನೋಟಿಸ್
Team Udayavani, Sep 28, 2019, 11:10 AM IST
ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಜಿಲ್ಲೆಯ ಹೊಸಪೇಟೆಯಿಂದ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರ ನಿರ್ಮಾಣದ ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳ್ಳದೆ ಸ್ಥಗಿತಗೊಂಡಿದ್ದು, ಗುತ್ತಿಗೆ ಪಡೆದ ಗ್ಯಾಮನ್ ಇಂಡಿಯಾ ಕಂಪನಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾ ಧಿಕಾರ ನೋಟಿಸ್ ನೀಡಿದ್ದು 60 ದಿನಗಳೊಳಗಾಗಿ ಕಾಮಗಾರಿ ಆರಂಭಿಸಲು ಗಡುವು ನೀಡಿದೆ.
ಜಿಲ್ಲೆಯ ಹೊಸಪೇಟೆಯಿಂದ ಬಳ್ಳಾರಿ ಮೂಲಕ ನೆರೆಯ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 63ರ ಅಭಿವೃದ್ಧಿ ಕಾರ್ಯಕ್ಕೆ 2017ರಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆಗ ಕೇಂದ್ರದ ಸಾರಿಗೆ ಸಚಿವರಾಗಿದ್ದ ನಿತಿನ್ ಗಡ್ಕರಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಆರಂಭದಲ್ಲಿ ಅತ್ಯಂತ ವೇಗವಾಗಿ ನಡೆದ ಕಾಮಗಾರಿ ಕಳೆದ ಒಂದು ವರ್ಷದಿಂದ ವಿಳಂಬವಾಗಿದೆ.
ಎರಡು ವರ್ಷಗಳ ಅವ ಧಿಯ ಹೆದ್ದಾರಿ ನಿರ್ಮಾಣ ಕಾಮಗಾರಿ 2019 ಮಾರ್ಚ್ ತಿಂಗಳಾಂತ್ಯಕ್ಕೆ ಪೂರ್ಣಗೊಂಡು ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಆದರೆ, ಅವಧಿ ಮುಗಿದರೂ ಕಾಮಗಾರಿ ಪೂರ್ಣಗೊಳ್ಳದೆ ಸ್ಥಗಿತಗೊಂಡಿದೆ.
870 ಕೋಟಿ ರೂ. ವೆಚ್ಚ: 95 ಕಿಮೀ ಉದ್ದದ ಈ ರಾಷ್ಟ್ರೀಯ ಹೆದ್ದಾರಿಗಾಗಿ ಕೇಂದ್ರ ಸರ್ಕಾರ 870 ಕೋಟಿ ರೂ. ವೆಚ್ಚ ಮಾಡುತ್ತಿದೆ. ರಸ್ತೆ ನಿರ್ಮಾಣಕ್ಕಾಗಿ 60 ಮೀಟರ್ ಅಗಲ ಜಾಗವನ್ನು ಮೀಸಲಿರಿಸಲಾಗಿದೆ. ಎಡ ಮತ್ತು ಬಲಕ್ಕೆ ತಲಾ 9 ಮೀಟರ್ ಅಗಲ ರಸ್ತೆ ನಿರ್ಮಿಸಿ, ಮಧ್ಯದಲ್ಲಿ 4 ಮೀಟರ್ ಜಾಗದಲ್ಲಿ ರಸ್ತೆ ವಿಭಜಕವನ್ನು ನಿರ್ಮಿಸಲಾಗುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಗ್ಯಾಮನ್ ಇಂಡಿಯಾ ಕಂಪನಿಯವರು ನಿರ್ವಹಿಸಿದ ಹಳ್ಳ-ಕೊಳ್ಳಗಳ ಮೇಲೆ ಸೇತುವೆ ಇನ್ನಿತರೆ ಕಾಮಗಾರಿಯನ್ನು ಗಮನಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎನಿಸುತ್ತಾದರೂ ಈವರೆಗೂ ಕೇವಲ ಶೇ.30ರಷ್ಟು ಕಾಮಗಾರಿ ಮಾತ್ರ ಮುಗಿದಿದೆ.
ಇನ್ನು ಶೇ.70ರಷ್ಟು ಕಾಮಗಾರಿ ಬಾಕಿ ಉಳಿದಿದೆ. ಇದನ್ನೂ ಪೂರ್ಣಗೊಳಿಸಿ ಹೆದ್ದಾರಿಯನ್ನು ನಿರ್ಮಿಸಲು ಇನ್ನು ಎರಡು ವರ್ಷಗಳ ಅವಧಿ ಬೇಕಾಗಲಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸ್ಥಾನಿಕ ಎಂಜಿನಿಯರ್ ರವಿ.ಕಾಮಗಾರಿ ವೆಚ್ಚ ಹೆಚ್ಚಳ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ನೋಟಿಸ್ಗೆ ಗ್ಯಾಮನ್ ಇಂಡಿಯಾ ಕಂಪನಿ ಪ್ರತಿಕ್ರಿಯೆ ನೀಡದಿದ್ದರೂ, 60 ದಿನಗಳ ಗಡುವಿನ ಒಳಗೆ ಕಾಮಗಾರಿ ಆರಂಭಿಸಬೇಕು. ಸದ್ಯ ಕಾಮಗಾರಿಯನ್ನು ಆರಂಭಿಸಿದರೆ ಇದೇ ವೆಚ್ಚದಲ್ಲಿ ಇನ್ನೆರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬಹುದು.
ಒಂದು ವೇಳೆ 60 ದಿನಗಳ ಒಳಗೆ ಕಾಮಗಾರಿ ಆರಂಭಿಸದಿದ್ದಲ್ಲಿ ಪ್ರಾಧಿಕಾರವು ಕಂಪನಿ ವಿರುದ್ಧ ಕ್ರಮ ಕೈಗೊಂಡು ಹೊಸದಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಿದರೆ ಕಾಮಗಾರಿ ವೆಚ್ಚ ಮತ್ತಷ್ಟು ಹೆಚ್ಚಲಿದ್ದು, ಸರ್ಕಾರಕ್ಕೆ ನಷ್ಟವಾಗಲಿದೆ. ಅಲ್ಲದೆ ಅರ್ಧಕ್ಕೆ ಬಿಟ್ಟ ಕಾಮಗಾರಿಗಳನ್ನು ಮುಂದುವರಿಸಲು ಬೇರೆ ಕಂಪನಿಗಳು ಹೆಚ್ಚಿನ ಅನುದಾನ ನಿರೀಕ್ಷಿಸುತ್ತವೆ. ಹಾಗಾಗಿ ಗ್ಯಾಮನ್ ಇಂಡಿಯಾ ಕಂಪನಿಯವರೇ ಕಾಮಗಾರಿ ಆರಂಭಿಸುವ ಸಾಧ್ಯತೆಯಿದೆ. ಈ ಹೆದ್ದಾರಿ ಕಾಮಗಾರಿ ಪೂರ್ಣಗೊಂಡರೆ ಬಳ್ಳಾರಿಯಿಂದ ಹೊಸಪೇಟೆಗೆ 2 ಗಂಟೆ ಬದಲು 45 ನಿಮಿಷಗಳಲ್ಲಿ ಸಂಚರಿಸಬಹುದು. ಆಗ ದ್ವಿಚಕ್ರ ವಾಹನಗಳಲ್ಲೂ ಹೊಸಪೇಟೆಗೆ ತೆರಳಿ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳಬಹುದು ಎಂಬುದು ಈ ಭಾಗದ ಜನರ ನಿರೀಕ್ಷೆಯಾಗಿತ್ತು. ಆದರೆ ಎರಡು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳ್ಳದೆ ಬಳ್ಳಾರಿ-ಹೊಸಪೇಟೆ ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಈಗ ನೋಟಿಸ್ ನೀಡಿದ ಬಳಿಕ ಕಾಮಗಾರಿ ಮತ್ತೆ ಆರಂಭವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ