ಪ್ರಾಣಿಗಳ ದಾಹ ತಣಿಸಲು ಟ್ಯಾಂಕರ್ ನೀರು
, Mar 25, 2019, 3:27 PM IST
ಕೂಡ್ಲಿಗಿ: ಕಾಡಿನ ಪ್ರಾಣಿ, ಪಕ್ಷಿಗಳ ನೀರಿನ ದಾಹ ತೀರಿಸಲು ಇಲ್ಲಿಯ ಯುವಕರ ಗುಂಪೊಂದು ಮುಂದಾಗಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಗ್ರಾಪಂ ಅಧ್ಯಕ್ಷರಿಂದ ಮೊದಲ ದಿನ ನೀರಿನ ಟ್ಯಾಂಕರ್ ಸೇವೆ ಗಜಾಪುರ ಗ್ರಾಮದ ಯುವಕ
ತಳವಾರ ಶಿವರಾಜ, ಅಂಗಡಿ ಕೊಟ್ರಪ್ಪ, ಗಂಟೆನಪ್ಪರ ಮೂರ್ತಿ, ಕುರುಬರ ಕುಡ್ಡ, ಬಣಕಾರ ಗುರುವ, ಕೈವಲ್ಯಾಪುರ ಆನಂದ, ಪವನ್ ಮುಂತಾದ ಯುವಕರು ಮೊದಲು ಗಜಾಪುರ ಗ್ರಾಮದ ವಿಶಾಲ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಪುಟ್ಟಿಗಳಲ್ಲಿ ನೀರು ಇಟ್ಟು ಬರಲು ಶುರು ಮಾಡಿದರು. ನಂತರ ನೀರು ಖಾಲಿಯಾಗುತ್ತಾ ಬಂದಿದ್ದರಿಂದ ಈಗ ಟ್ಯಾಂಕರ್ ಮೂಲಕ ನೀರನ್ನು ಹುಲ್ಲುಮರಡಿ ಹತ್ತಿರ ಅಂಕನಡೋಣಿ ಬಂಡೆಯ ಮೇಲೆ ನೀರು ಇಡಲು ಶುರು ಮಾಡಿದ್ದಾರೆ. ಯುವಕರು ಸೇವೆ ಮಾಡಿದರೆ ಕಂದಗಲ್ಲು ಗ್ರಾಪಂ ಅಧ್ಯಕ್ಷೆ ಗಜಾಪುರ ಗ್ರಾಮದ ತಳವಾರ ನೀಲಮ್ಮ ಚಂದ್ರಪ್ಪ ಅವರು ಮೊದಲ ದಿನದ ಟ್ಯಾಂಕರ್ ಖರ್ಚನ್ನು ನೀಡಲು ಮುಂದೆ ಬಂದು ಯುವಕರ ಪ್ರಾಣಿ, ಪಕ್ಷಿಗಳ ರಕ್ಷಣೆ ಕಾರ್ಯಕ್ಕೆ ಸಹಕಾರ ನೀಡಿದ್ದಾರೆ. ಗ್ರಾಪಂ ಸದಸ್ಯ ಬೆಳದೇರಿ ಮಲ್ಲಿಕಾರ್ಜುನ ಅವರು ರವಿವಾರದ ನೀರಿನ ಟ್ಯಾಂಕರ್ ಸೇವೆ ಮಾಡಲು ಸ್ವಯಂ ಮುಂದೆ ಬಂದಿದ್ದಾರೆ.
ಹತ್ತು ಚದುರ ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಗಜಾಪುರ ಸಮೀಪದ ಚಿರಿಬಿ ಅರಣ್ಯ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರಿಲ್ಲ. ಹೀಗಾಗಿ ಗಜಾಪುರ ಗ್ರಾಮದ ಯುವಕರು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ಇಂಗಿಸಲು ಮುಂದಾಗಿದ್ದು, ಮಳೆ ಬರುವ ತನಕ ಇದೇ ರೀತಿ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲು ಮುಂದಾಗಿದ್ದಾರೆ. ಈ ಯುವಕರ ಸಾಹಸಕ್ಕೆ ಜನಪ್ರತಿನಿಧಿಗಳು, ಗ್ರಾಮಸ್ಥರು ಸಹಕಾರ ನೀಡಿರುವುದು ಯುವಕರಲ್ಲಿ ಸಮಾಜ ಸೇವೆ ಮಾಡಲು ಸಂತಸ ತರಿಸಿದೆ.
ಬಂಡೆಯ ಮೇಲೆ 1 ಟ್ಯಾಂಕರ್ ನೀರು ನಿಲ್ಲುತ್ತಿದ್ದು, 2 ದಿನಕ್ಕೊಮ್ಮೆ ನೀರು ಖಾಲಿಯಾಗಬಹುದು ಎಂದು ಗ್ರಾಮದ ಹಿರಿಯರು ಅಂದಾಜಿಸಿದ್ದಾರೆ. ಹೀಗಾಗಿ 2 ದಿನಕ್ಕೊಮ್ಮೆ ಒಬ್ಬರು ಟ್ಯಾಂಕರ್ ನೀರಿನ ಖರ್ಚು 800 ರೂ. ನೀಡಲು ಮುಂದಾಗುತ್ತಿದ್ದಾರೆ. ಈ ಕಾರ್ಯ ಇದೇ ರೀತಿ ಮುಂದುವರಿದಲ್ಲಿ ಕಾಡಿನಲ್ಲಿರುವ ಕಾಡು ಹಂದಿ, ಚಿರತೆ, ಕರಡಿ, ಮೊಲ ಮುಂತಾದ ಪ್ರಾಣಿಗಳು ಹಾಗೂ ಅಸಂಖ್ಯಾತ ಪಕ್ಷಿಗಳಿಗೆ ಕುಡಿಯುವ ನೀರಿನ ದಾಹ ತೀರಿಸಿದಂತಾಗುತ್ತದೆ.
ಕೆ.ನಾಗರಾಜ್