ಪ್ರತಿಭಾನ್ವಿತರಿಗೆ 7.50 ಲಕ್ಷ ರೂ. ಪುರಸ್ಕಾರ ವಿತರಣೆ
Team Udayavani, Feb 12, 2020, 6:18 PM IST
ಬೀದರ: ನಗರದ ಶ್ರೀ ಮಾತೆ ಮಾಣಿಕೇಶ್ವರಿ ವಿಜ್ಞಾನ ಪದವಿಪೂರ್ವ ಕಾಲೇಜು ಹಾಗೂ ಬೆಂಗಳೂರಿನ ಅಟೋಮಿಕ್ ಅಕಾಡೆಮಿ ಸಹಭಾಗಿತ್ವದಲ್ಲಿ ಜಿಲ್ಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಒಟ್ಟು 7.50 ಲಕ್ಷ ರೂ. ನಗದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ನಗರದ ಎಕೆ ಕ್ಯಾಂಟಿನೆಂಟಲ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಪ್ರೋತ್ಸಾಹಿಸಲಾಯಿತು. ಆಂಗ್ಲ ಹಾಗೂ ಕನ್ನಡ ಮಾಧ್ಯಮದಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ನಾಲ್ವರು ಹಾಗೂ ಕನ್ನಡ ಮಾಧ್ಯಮದಲ್ಲಿ ಐವರು ರ್ಯಾಂಕ್ ಗಳಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಗುರುನಾನಕ ಶಾಲೆಯ ಅಪ್ಪು ಗಣೇಶ ಪ್ರಥಮ ರ್ಯಾಂಕ್ ಗಳಿಸಿದ್ದು, 20 ಸಾವಿರ ರೂ. ಚೆಕ್, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು. ಶ್ರೀಯಾ ಸ್ವಾಮಿ ದ್ವಿತೀಯ (15 ಸಾವಿರ ರೂ.), ಸುಜಲ್ ಬಿರಾದಾರ ಹಾಗೂ ಶ್ರದ್ಧಾ ತೃತೀಯ (ತಲಾ 10 ಸಾವಿರ ರೂ.) ಪುರಸ್ಕಾರ ಪಡೆದರು.
ಕನ್ನಡ ಮಾಧ್ಯಮದಲ್ಲಿ ಮೇಘಾ ಬಸವರಾಜ ಪ್ರಥಮ ರ್ಯಾಂಕ್ ಗಳಿಸಿ 20 ಸಾವಿರ ರೂ. ಪುರಸ್ಕಾರಕ್ಕೆ ಭಾಜನಳಾದಳು. ವೈಷ್ಣವಿ ಸ್ವಾಮಿ ದ್ವಿತೀಯ (15 ಸಾವಿರ ರೂ.) ಸಂಗಮೇಶ, ಅಂಬರೀಶ್, ಸಂಗಮೇಶ ಕಲ್ಲಪ್ಪ ಅವರು ಸಮಾನ ಅಂಕಗಳನ್ನು ಗಳಿಸಿ ತೃತೀಯ ಸ್ಥಾನ ಹಂಚಿಕೊಂಡು 10 ಸಾವಿರ ರೂ. ಪುರಸ್ಕಾರ ತಮ್ಮದಾಗಿಸಿಕೊಂಡರು. ಕನ್ನಡ ಮಾಧ್ಯಮದ ಎಲ್ಲ ವಿದ್ಯಾರ್ಥಿಗಳು ನಗರದ ವಿದ್ಯಾರಣ್ಯ ಪ್ರೌಢ ಶಾಲೆಯವರಿದ್ದಾರೆ.
ಆಂಗ್ಲ ಹಾಗೂ ಕನ್ನಡ ಮಾಧ್ಯಮದ ಎಲ್ಲ 9 ರ್ಯಾಂಕ್ ಗಳಿಸಿದ
ವಿದ್ಯಾರ್ಥಿಗಳು ಸೇರಿ ಒಟ್ಟು 20 ಸಾಧಕ ಪ್ರತಿಭೆಗಳಿಗೆ ಮಾತೆ ಮಾಣಿಕೇಶ್ವರಿ ಕಾಲೇಜಿನಲ್ಲಿ ಪಿಯುಸಿ ಉಚಿತ ಪ್ರವೇಶ ನೀಡುವ ಘೋಷಣೆ ಮಾಡಲಾಯಿತು. ಟೆಸ್ಟ್ನಲ್ಲಿ ಉತ್ತಮ ಸಾಧನೆ ಮಾಡಿದ 85 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂ. ಚೆಕ್ ಸಹ ನೀಡಿ ಬೆನ್ನು ತಟ್ಟಲಾಯಿತು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಅವರು ಮಕ್ಕಳಿಗೆ ಪುರಸ್ಕಾರ ನೀಡಿ ಮಾತನಾಡಿ, ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಷ್ಟೊಂದು ದೊಡ್ಡ ಮೊತ್ತದ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಮೂಲಕ ಮಾತೆ ಮಾಣಿಕೇಶ್ವರಿ ಕಾಲೇಜು ಹಾಗೂ ಅಟೋಮಿಕ್ ಅಕಾಡೆಮಿ ಮಾದರಿ ಕೆಲಸ ಮಾಡಿದೆ. ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ ಅವರಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹದ ಕೊರತೆಯಿದೆ. ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಅವರು ಪಿಯುಸಿ ವಿದ್ಯಾರ್ಥಿಗಳ ಸಾಧನೆಗೆ ನಿರಂತರ ವಿವಿಧ ಚಟುವಟಿಕೆಗಳು ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಕಾಲೇಜು ಅಧ್ಯಕ್ಷ ರಮೇಶ ಕುಲಕರ್ಣಿ ಮಾತನಾಡಿ, ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಹಾಗೂ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಎಸ್ಎಸ್ ಎಲ್ಸಿ ವಿದ್ಯಾರ್ಥಿಗಳಿಗಾಗಿ ಕಳೆದ ತಿಂಗಳ 19 ರಂದು ಆ್ಯಪ್ಟಿಟ್ಯೂಡ್ ಟೆಸ್ಟ್ ನಡೆಸಲಾಗಿತ್ತು. ಇದರಲ್ಲಿ ಕನ್ನಡ ಮಾಧ್ಯಮದ 1100 ಹಾಗೂ ಆಂಗ್ಲ ಮಾಧ್ಯಮದ 700 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲೆಯ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಪಿಯುಸಿ ಶಿಕ್ಷಣ ಒದಗಿಸುವುದಕ್ಕಾಗಿ ಬೆಂಗಳೂರಿನ ಪ್ರತಿಷ್ಠಿತ ಅಟೋಮಿಕ್ ಅಕಾಡೆಮಿಯೊಂದಿಗೆ ಕೈ ಜೋಡಿಸಲಾಗಿದೆ. ನೀಟ್, ಐಐಟಿ, ಎನ್ಐಟಿ ಸೇರಿ ಇತರೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲು ಪರಿಣಿತ ಬೋಧಕ ವೃಂದವಿದೆ ಎಂದರು.
ಅಕಾಡೆಮಿ ನಿರ್ದೇಶಕರಾದ ಪ್ರೊ| ಶ್ರೀಧರ್, ಪ್ರೊ| ರಾಜೇಂದ್ರ ಬಾಬು, ಶಿಕ್ಷಣ ತಜ್ಞ ಪ್ರತಾಪ ದೊಡ್ಮನೆ ಮಾತನಾಡಿದರು. ಅಟೋಮಿಕ್ ಅಕಾಡೆಮಿ ಕೋಶಾಧ್ಯಕ್ಷ ವಿಜಯ್ ಮಾನೆ, ರಘುನಂದನ್, ಉದ್ಯಮಿ ಕಿಶೋರ ಬೆಮಳಖೇಡಕರ್, ತ್ರಿಲೋಕ್, ಪ್ರಾಚಾರ್ಯ ಸುರೇಶ ಕುಲಕರ್ಣಿ ಇದ್ದರು. ಆಡಳಿತಾದಿ ಕಾರಿ ಲೋಕೇಶ ಉಡಬಾಳೆ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ