ಗಡಿ ಜಿಲ್ಲೆ ಜನರಿಗೆ ಭಾರಿ ನಿರಾಸೆ
Team Udayavani, Jul 6, 2018, 12:01 PM IST
ಬೀದರ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ಗೆ ಮಿಶ್ರ ಪ್ರತಿಕಿಯೆ ವ್ಯಕ್ತವಾಗಿದ್ದು, ರೈತರ 2 ಲಕ್ಷ ರೂ. ವರೆಗಿನ ಬೆಳೆ ಸಾಲ ಮನ್ನಾ, ಕೃಷಿ ಯಂತ್ರೋಪಕರಣ ಉತ್ಪಾದನ ಘಟಕ ಬಿಟ್ಟು ಪ್ರಮುಖ ಯೋಜನೆಗಳ ಬಗ್ಗೆ ಪ್ರಸ್ತಾಪವೇ ಆಗದಿರುವುದು ಜಿಲ್ಲೆಯ ಜನರಿಗೆ ಭಾರಿ ನಿರಾಸೆ ಮೂಡಿಸಿದೆ.
ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಸಹಕಾರಿ ಸ್ವಾಮ್ಯದ ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕುಮಾರ ಸ್ವಾಮಿ ಬಜೆಟ್ನಲ್ಲಿ ಆರ್ಥಿಕ ನೆರವು ಒದಗಿಸುವ ನಿರೀಕ್ಷೆ ಇತ್ತು. ಚುನಾವಣಾ ಪೂರ್ವದಲ್ಲಿ ಜಿಲ್ಲೆಗೆ ಆಗಮಿಸಿ ಕುಮಾರಸ್ವಾಮಿ ಅವರು ನೂರು ಕೋಟಿ ವಿಶೇಷ ಅನುದಾನ ನೀಡಿ ಕಾರ್ಖಾನೆ ಪ್ರಾರಂಭಕ್ಕೆ ಒತ್ತು ನೀಡುವ ಭರವಸೆ ನೀಡಿದ್ದರು. ಜಿಲ್ಲೆಯವರೇ ಆದ ಸಹಕಾರ ಸಚಿವ ಬಂಡೆಪ್ಪಾ ಖಾಶೆಂಪುರ ಹಾಗೂ ಭೂ-ಗಣಿ ಇಲಾಖೆ ಸಚಿವ ಹಾಗೂ ಕಾರ್ಖಾನೆ ನಿರ್ದೇಶಕರೂ ಆಗಿರುವ ರಾಜಶೇಖರ ಪಾಟೀಲ ಈ ಬಗ್ಗೆ ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಭರವಸೆ ಕೂಡ ನೀಡಿದ್ದರು.
ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ಕಬ್ಬು ಬೆಳೆಗಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಸಾವಿರಾರು ಕಾರ್ಮಿಕರು, ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ, ಬಜೆಟ್ನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ, ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದಿರುವುದು ಜಿಲ್ಲೆಯ ಕಬ್ಬು ಬೆಳೆಗಾರರಿಗೆ ತೀವ್ರ ನಿರಾಸೆ ತಂದಿದೆ.
ಹೊಸ ಯೋಜನೆ: ವಿದೇಶಗಳಿಂದ ದೇಶಕ್ಕೆ ಬರುತ್ತಿರುವ ಕೃಷಿ ಯಂತ್ರೋಪಕರಣಗಳನ್ನು ಕರ್ನಾಟದಲ್ಲಿಯೇ ಉತ್ಪಾದಿಸುವ ನಿಟ್ಟಿನಲ್ಲಿ ಬೀದರ ಜಿಲ್ಲೆಯಲ್ಲಿ ಕೃಷಿ ಉಪಕರಣ ಯಂತ್ರಗಳನ್ನು ಉತ್ಪಾದಿಸುವ ಘಟಕ ಸ್ಥಾಪನೆ ಕುರಿತು ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಘೋಷಿಸಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಕೃಷಿ ಉಪಕರಣ ಯಂತ್ರಗಳನ್ನು ತಯಾರಿಸಲು ಮುಂದೆ ಬರುವಂತಹ ಕಂಪನಿಗಳಿಗೆ 2000 ಕೋಟಿ ರೂ. ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ.
ಈ ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಯಲ್ಲಿಯೇ ತರಬೇತಿ ಕೇಂದ್ರ ಸ್ಥಾಪಿಸಿ ಆರು ತಿಂಗಳು ಹಾಗೂ ಎರಡು ವರ್ಷಗಳ ತರಬೇತಿ ನೀಡುವ ಮೂಲಕ ಯುವ ಜನರಿಗೆ ಕೃಷಿ ಉಪಕರಣ ಉತ್ಪಾದನಾ ಘಟಕದಲ್ಲಿ ಉದ್ಯೋಗ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿರುವುದು ಸದ್ಯ ಜಿಲ್ಲೆಯ ಯುವಕರಿಗೆ ಸಂತಸ ಮೂಡಿಸಿದೆ.
ಹೂಸ ತಾಲೂಕು: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಮೂರು ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬಂದಿದ್ದು, ಬಜೆಟ್ನಲ್ಲಿ ವಿಶೇಷ ಅನುದಾನ ಬರುತ್ತದೆ ಎಂದು ನಿರೀಕ್ಷೆಯನ್ನು ಚಿಟ್ಟಗುಪ್ಪಾ, ಕಮಲನಗರ ಹಾಗೂ ಹುಲಸೂರು ತಾಲೂಕಿನ ಜನರು ಹೊಂದಿದ್ದರು.
ಹೊಸ ತಾಲೂಕುಗಳು ರಚನೆಯಾದರೂ ಕಟ್ಟಡ ನಿರ್ಮಾಣ, ಮೂಲಭೂತ ಸೌಕರ್ಯಗಳ ಕೊರತೆ ಇದೆ. ಆದರೆ, ಹೊಸ ತಾಲೂಕುಗಳ ಬಗ್ಗೆ ಬಜೆಟ್ನಲ್ಲಿ ಕುಮಾರಸ್ವಾಮಿ ಪ್ರಸ್ತಾಪವನ್ನೇ ಮಾಡಿಲ್ಲದಿರುವುದು ಹೊಸ ತಾಲೂಕುಗಳ ಅಸ್ತಿತ್ವವನ್ನೇ ಪ್ರಶ್ನಿಸುವಂತಿದೆ.
ಪ್ರವಾಸೋದ್ಯಮ: ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಬಗ್ಗೆ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿದೆ. ಆದರೆ, ಶರಣರ ಕರ್ಮಭೂಮಿ ಎಂದೇ ಗುರುತಿಸಿಕೊಂಡಿರುವ ಬಸವಕಲ್ಯಾಣ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಕುರಿತು ಪ್ರಸ್ತಾಪಿಸದಿರುವುದು ಈ ಭಾಗದ ಜನರಿಗೆ ತೀವ್ರ ನಿರಾಸೆ ತಂದಿದೆ. ಸವಕಲ್ಯಾಣವನ್ನು ಐತಿಹಾಸಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ಮಾಡಲಾಗುವುದು ಎಂಬುದು ಬರೀ ಘೋಷಣೆಗಷ್ಟೇ ಸೀಮಿತವಾಗಿದೆ. ವಿಶ್ವಕ್ಕೆ ಶಾಂತಿ, ಸಮಾನತೆ ಸಾರಿದ ನಾಡನ್ನು ಕಡೆಗಣಿಸಲಾಗಿದೆ ಎಂದು ಇಲ್ಲಿನ ಜನರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟ ಮಾತಿಗೆ ತಪ್ಪಿದ ಸಿಎಂ
ರೈತರ ಸಂಪೂರ್ಣ ಸಾಲಮನ್ನಾ ಮಾಡಿ ದೇಶದ ಮಾದರಿ ಮುಖ್ಯಮಂತ್ರಿ ಎಂದು ಗುರುತಿಸಿಕೊಳ್ಳುತ್ತಾರೆ ಎಂದು ರೈತರು ನಂಬಿದ್ದರು. ಆದರೆ, ಎರಡು ಲಕ್ಷದ ವರೆಗಿನ ಸಾಲಮನ್ನಾ ಮಾಡುವ ಮೂಲಕ ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಿದ್ದಾರೆ. ರಾಜ್ಯದ ರೈತರೊಂದಿಗೆ ನಡೆದ ಸಭೆಯಲ್ಲಿ ಕೂಡ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಮನೆ ಬಾಗಿಲಿಗೆ ಋಣಮುಕ್ತ ಪ್ರಮಾಣ ಪತ್ರ ಕಳುಹಿಸುವುದಾಗಿ ಭರವಸೆ ನೀಡಿದ್ದರು. ಎರಡು ಲಕ್ಷದ
ಮೀತಿಯಿಂದ ಹೇಗೆ ಎಲ್ಲಾ ರೈತರು ಋಣಮುಕ್ತ ಮಾಡಲು ಸಾಧ್ಯ. ಅಲ್ಲದೇ ಬೀದರ ಜಿಲ್ಲೆಯ ಕಬ್ಬು ಬೆಳೆಗಾರರ ಜೀವನಾಡಿ ಬಿಎಸ್ ಎಸ್ಕೆ ಕಾರ್ಖಾನೆಗೆ ವಿಶೇಷ ಅನುದಾನ ನೀಡುವ ಭರವಸೆಯನ್ನು ಕೂಡ ಮುಖ್ಯಮಂತ್ರಿಗಳು ಈಡೇರಿಸಿಲ್ಲ.
ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾ ರೈತ ಸಂಘದ ಅಧ್ಯಕ್ಷೆ
ಕಾರ್ಖಾನೆ ಪುನಶ್ಚೇತನಕ್ಕೆ ಮನವರಿಕೆ
ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ರೈತಪರವಾಗಿದೆ. ರೈತರ ಸಾಲಮನ್ನಾ ದೊಡ್ಡ ಕೊಡುಗೆಯಾಗಿದೆ. ಬೀದರ ಸಹಕಾರ ಸಕ್ಕರೆ ಕಾರ್ಖಾನೆಗೆ ಸೂಕ್ತ ಅನುದಾನ ನೀಡುವ ಮೂಲಕ ಕಾರ್ಖಾನೆ ಪುನಶ್ಚೇತನ ಕುರಿತು ಸಹಕಾರ ಸಚಿವ ಬಂಡೆಪ್ಪ ಖಾಶೆಂಪುರ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಮುಜುರಾಯಿ ಸಚಿವ ರಾಜಶೇಖರ ಪಾಟೀಲ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡಲಾಗುವುದು. ಸರ್ಕಾರದಿಂದ ಸೂಕ್ತ ಸಹಕಾರ ದೊರೆಯುವ ಭರವಸೆ ಇದ್ದು, ಈ ವರ್ಷ ಕಾರ್ಖಾನೆ ಪ್ರಾರಂಭಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.
ಸಂಜಯ್ ಖೇಣಿ,ಬಿಎಸ್ಎಸ್ಕೆ ಅಧ್ಯಕ್ಷ
ಉದ್ಯೋಗ ಸೃಷ್ಟಿಗೆ ಅವಕಾಶ
ಎಚ್.ಡಿ. ಕುಮಾರಸ್ವಾಮಿ ನುಡಿದಂತೆ ನಾಡಿನ ರೈತರ 2ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಿ ಅನ್ನದಾತನ ಋಣ ತೀರಿಸಿದ್ದಾರೆ. ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಕುಮಾರಸ್ವಾಮಿ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ನ ಎಲ್ಲಾ ಪ್ರಮುಖ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಜಿಲ್ಲೆಗೆ 2 ಸಾವಿರ ಕೋಟಿ ರೂ. ಬಂಡವಾಳದಲ್ಲಿ ಕೃಷಿ ಉತ್ಪನ್ನಗಳನ್ನು ಸಂರಕ್ಷಿಸುವ ಯಂತ್ರಗಳ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆಯೂ ಬಜೆಟ್ನಲ್ಲಿ ಪ್ರಸ್ತಾಪಿಸಿದ್ದು. ಇದರಿಂದ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಗೂ ಅವಕಾಶ ದೊರೆಯಲಿದೆ.
ಸೋಮನಾಥ ಕಂದಗೂಳೆ ಜೆಡಿಎಸ್ ರಾಜ್ಯ ಕಾರ್ಯದರ್ಶಿ
ಸರ್ಕಾರಿ ಶಾಲೆ ಮುಚ್ಚಲು ಚಿಂತನೆ !’
ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮಂಡಿಸಿರುವ ರಾಜ್ಯ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರ ನಿರ್ಲಕ್ಷಿಸಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಗುರುತಿಸಿ ವಿಲೀನಗೊಳಿಸುವ ಹೆಸರಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬುದು ಈ ಬಜೆಟ್ನಲ್ಲಿ ಗೊತ್ತಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮಂಡಿಸಿರುವ ಬಜೆಟ್ನಲ್ಲಿ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆಯ ಘೋಷಣೆ ಮಾಡಲಾಗಿತ್ತು. ಆದರೆ ಕುಮಾರಸ್ವಾಮಿ ಅವರು ಬಸ್ ಪಾಸ್ ಬಗ್ಗೆ ಯಾವುದೇ ನಿರ್ಧಾರ ತಿಳಿಸದಿರುವುದು ರಾಜ್ಯದ ವಿದ್ಯಾರ್ಥಿಗಳ ನಿರೀಕ್ಷೆ
ಹುಸಿಯಾಗಿದೆ.
ಅರುಣ ಕೋಡಗೆ, ಎಸ್ಎಫ್ಐ ಜಿಲ್ಲಾಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ