ಪರಿಶಿಷ್ಟ ಜಾತಿಗೆ ಮೀಸಲಾದರೂ ಇತರರೇ ನಿರ್ಣಾಯಕರು; ಸತತ 5 ಬಾರಿ ಗೆದ್ದಿರುವ ಬಿಜೆಪಿ ಭದ್ರಕೋಟೆ
17 ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್ ಗೆಲುವು ಜನತಾ ಪರಿವಾರಕ್ಕೂ ಮಣೆ ಹಾಕಿದ್ದ ವಿಜಯಪುರ
Team Udayavani, Mar 7, 2024, 6:41 AM IST
ವಿಜಯಪುರ: ರಫ್ತು ದರ್ಜೆಯ ದ್ರಾಕ್ಷಿ, ಲಿಂಬೆ, ದಾಳಿಂಬೆ ಬೆಳೆಗೆ ಹೆಸರಾದ ಬಸವನಾಡು ರಾಜಕೀಯ ರಂಗದಲ್ಲೂ ವಿಶೇಷ ಕುತೂಹಲ ಹಾಗೂ ಪ್ರತಿಷ್ಠೆಯ ಕ್ಷೇತ್ರವೂ ಹೌದು. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಿಗಜಿಣಗಿ ಅವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಿರುವ ವಿಜಯಪುರ ಕ್ಷೇತ್ರ ಪ್ರಮುಖರಿಗೆ ರಾಜಕೀಯ ಜೀವನ ಕಲ್ಪಿಸಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಕಾಂಗ್ರೆಸೇತರ ಪಕ್ಷಗಳಿಗೂ ಮಣೆ ಹಾಕುವ ಮೂಲಕ ಸಮಾನ ಅವಕಾಶ ಕಲ್ಪಿಸಿರುವ ಕ್ಷೇತ್ರ.
ಕ್ಷೇತ್ರ ಪುನರ್ವಿಂಗಡಣೆ ಪರಿಣಾಮ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕ ಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳಿವೆ. ಕಾಂಗ್ರೆಸ್ ಆರು ಶಾಸಕರನ್ನು ಹೊಂದಿದ್ದರೆ, ಚುನಾವಣೆ ಪೂರ್ವ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ತಲಾ ಒಬ್ಬರು ಶಾಸಕರನ್ನು ಹೊಂದಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 3 ಹಾಗೂ ಜೆಡಿಎಸ್ 2 ಸ್ಥಾನಗಳನ್ನುಹೊಂದಿತ್ತು.
ಕ್ಷೇತ್ರದ ಇತಿಹಾಸ
1952ರಿಂದ 2019ರ ವರೆಗೆ ಒಟ್ಟು 17 ಚುನಾವಣೆ ಎದುರಿಸಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಟು ಬಾರಿ ಗೆದ್ದಿದೆ. ಬಿಜೆಪಿ ಐದು ಸಲ ಜಯ ಗಳಿಸಿದೆ. ಜನತಾ ಪರಿವಾರ ಎರಡು ಬಾರಿ ಗೆದ್ದಿದೆ. ಸ್ವತಂತ್ರವಾಗಿಯೂ ಇಬ್ಬರು ಗೆದ್ದಿರುವ ದಾಖಲೆ ಈ ಕ್ಷೇತ್ರದಲ್ಲಿದೆ. ನೆಹರೂ-ಗಾಂ ಧಿ ಕುಟುಂಬದ ಒಡನಾಡಿ ರಾಜರಾಮ ಗಿರಿಧರಲಾಲ್ ದುಬೆ ಮೂಲಕ 1952ರಲ್ಲಿ ಮೊದಲ ಚುನಾವಣೆ ಗೆದ್ದಿದ್ದ ಕಾಂಗ್ರೆಸ್ ಅನಂತರ 1957ರಲ್ಲಿ ನಡೆದ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಮುರಿಗೆಪ್ಪ ಸಿದ್ದಪ್ಪ ಸುಗಂಧಿ ಅವರಿಗೆ ಮಣೆ ಹಾಕಿತ್ತು. 1962ರಲ್ಲಿ ನಡೆದ ಚುನಾವಣೆಯಲ್ಲಿ ರಾಜರಾಮ ದುಬೆ ಮತ್ತೂಮ್ಮೆ ಆಯ್ಕೆಯಾಗಿದ್ದರು.
1984ರಲ್ಲಿ ಜನತಾ ಪಕ್ಷದ ಶಿವಶಂಕರಪ್ಪ ಗುರಡ್ಡಿ ಗೆದ್ದಿದ್ದರೆ, 1989, 1991ರ ಎರಡೂ ಚುನಾವಣೆಯಲ್ಲಿ ಬಿ.ಕೆ.ಗುಡದಿನ್ನಿ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್ ಪಕ್ಷದ ಬಸಗೊಂಡಪ್ಪ ಆಯ್ಕೆಯಾಗಿದ್ದರು. 1996ರಲ್ಲಿ ಕನಮಡಿ ಬಸನಗೌಡ ರುದ್ರಗೌಡ ಪಾಟೀಲ್ ಜನತಾದಳ ದಿಂದ ಗೆದ್ದಾಗ ಎದುರಾಳಿ ಆಗಿದ್ದವರು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್. ಮಾಜಿ ಕ್ರಿಕೆಟಿಗ ಪ್ರಕಾಶ ರಾಠೊಡ್ ಕಾಂಗ್ರೆಸ್ನಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು.
ಇದಾದ ಬಳಿಕ ನಡೆದ 1998ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಹಾಲಿ ಕೈಗಾರಿಕೆ ಸಚಿವರಾಗಿರುವ ಎಂ.ಬಿ.ಪಾಟೀಲ್ ಗೆದ್ದಿದ್ದರು. 1999ರಲ್ಲಿ ನಡೆದ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮೂಲಕ ಬಿಜೆಪಿ ಮೊದಲ ಬಾರಿಗೆ ಖಾತೆ ತೆರೆದಿದ್ದರೆ, ಕಾಂಗ್ರೆಸ್ನ ಪ್ರಕಾಶ ರಾಠೊಡ್ ಎರಡನೇ ಬಾರಿಗೆ ಸೋಲನುಭವಿಸಿದ್ದರು. 2004ರಲ್ಲೂ ಯತ್ನಾಳ್ ಪುನರಾಯ್ಕೆಯಾಗಿ, ವಾಜಪೇಯಿ ಸರಕಾರದಲ್ಲಿ ರೈಲ್ವೆ, ಜವಳಿ ಸಚಿವರಾಗಿ ಜಿಲ್ಲೆಗೆ ಮೊದಲ ಬಾರಿಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಅವಕಾಶದ ಕೀರ್ತಿ ಸಂಪಾದಿಸಿದ್ದರು.
ಕ್ಷೇತ್ರಗಳ ಮರು ವಿಂಗಡಣೆ ಪರಿಣಾಮ ಪರಿಶಿಷ್ಟ ಜಾತಿಗೆ ಮೀಸಲಾದ ಈ ಕ್ಷೇತ್ರದಿಂದ 2009, 2014, 2019 ಹೀಗೆ ಸತತ ಮೂರು ಬಾರಿ ರಮೇಶ ಜಿಗಜಿಣಗಿ ಗೆದ್ದಿದ್ದು, ಈ ಮೂಲಕ ಬಿಜೆಪಿ ಸತತ ಐದನೇ ಬಾರಿಗೆ ಗೆಲುವು ದಾಖಲಿಸಿಕೊಂಡಿದೆ. ಚಿಕ್ಕೋಡಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದ ರಮೇಶ ಜಿಗಜಿಣಗಿ, ವಿಜಯಪುರ ಕ್ಷೇತ್ರದಿಂದ ಆಯ್ಕೆಯಾದಾಗ ಬಿಜೆಪಿ ಹಾಗೂ ನರೇಂದ್ರ ಮೋದಿ ನೇತೃತ್ವದ ಮೊದಲ ಸರಕಾರದಲ್ಲಿ ಗ್ರಾಮೀಣ ಕುಡಿಯುವ ನೀರು ಖಾತೆ ಸಚಿವರಾಗಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಾರಣ ವಿಜಯಪುರ ಕ್ಷೇತ್ರದಲ್ಲಿ ಮೇಲ್ವರ್ಗದ ಮತಗಳೇ ನಿರ್ಣಾಯಕ. ದಲಿತ ಸಮುದಾಯದ ರಮೇಶ ಜಿಗಜಿಣಗಿ ಅವರು ಬಂಜಾರಾ ಸಮುದಾಯದ ಪ್ರಕಾಶ ರಾಠೊಡ್ ಅವರನ್ನು ಎರಡು ಬಾರಿ, ಸುನಿತಾ ಚೌವ್ಹಾಣ್ ಅವರನ್ನು ಒಂದು ಬಾರಿ ಸೋಲಿಸಿರುವುದು ವಿಶೇಷ.
-ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ