“ಪಿಎಸ್ಐ ಅಕ್ರಮದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡ’: ಬಸನಗೌಡ ಪಾಟೀಲ್ ಯತ್ನಾಳ್
Team Udayavani, Oct 3, 2022, 11:35 PM IST
ವಿಜಯಪುರ: ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಮಾಜಿ ಸಿಎಂ ಓರ್ವರ ಪುತ್ರನ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಅಕ್ರಮವನ್ನು ಸಿಬಿಐಗೆ ವಹಿಸಬೇಕು. ಸಿಬಿಐ ತನಿಖೆಗೆ ವಹಿಸಿದರೆ ಕಳ್ಳರು ಹೊರಗೆ ಬರುತ್ತಾರೆ. ಮಾಜಿ ಸಿಎಂ ಪುತ್ರ ಯಾರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ನನ್ನನ್ನು 10 ಬಾರಿ ಕೇಳಿದ್ದಾರೆ. ಆದರೆ ನಾನು ಸಿಬಿಐ ತನಿಖೆಗೆ ವಹಿಸಿದರೆ ಎಲ್ಲ ಸತ್ಯ ಹೊರ ಬರಲಿದೆ ಎಂದು ತಿಳಿಸಿದ್ದೇನೆ.
ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಇಡೀ ಪ್ರಕರಣದಲ್ಲಿ ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದೇ ಹೇಳಿದ್ದಾರೆ. ಎಡಿಜಿಪಿ ಒಬ್ಬರನ್ನೇ ಅರೆಸ್ಟ್ ಮಾಡಿ ಎಫ್ಐಆರ್ ಮಾಡಿದ್ದಾರೆ. ಕೇವಲ ಎಡಿಜಿಪಿ ಮಾತ್ರ ಇದರಲ್ಲಿ ಶಾಮೀಲಾಗಿಲ್ಲ. ಇದರ ಹಿಂದೆ ದೊಡ್ಡ ಕಳ್ಳರಿದ್ದಾರೆ.
ಈ ಹಗರಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನವರೂ ಇದ್ದಾರೆ. ಪಿಎಸ್ಐ ಹುದ್ದೆಗಾಗಿ 70ರಿಂದ 80 ಲಕ್ಷ ರೂ. ಕೊಟ್ಟಿದ್ದಾರೆ. ಅವರ ಕುಟುಂಬವೇ ಹಾಳಾಗಿ ಹೋಗುತ್ತವೆ. 70-80 ಲಕ್ಷ ರೂ. ಕೊಟ್ಟವರ ಹಣವನ್ನು ವಾಪಸ್ ಕೊಡಿಸಬೇಕು. ಅಲ್ಲದೇ ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಬೇಕು ಎಂದು ಆಗ್ರಹಿಸಿದರು.