ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ಸಿಗಲಿ: ಯತ್ನಾಳ್
Team Udayavani, Feb 5, 2020, 9:08 PM IST
ವಿಜಯಪುರ: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸಚಿವ ಸ್ಥಾನ ಕೊಡಲೇಬೇಕು. ಈ ವಿಷಯದಲ್ಲಿ ಕಲ್ಯಾಣ ಕರ್ನಾಟಕದ ನಾಯಕರ ಧ್ವನಿಗೆ ನನ್ನ ಬೆಂಬಲವಿದೆ ಎಂದು ವಿಜಯಪುರ ನಗರ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನಗಳ ಹಂಚಿಕೆಯಲ್ಲಿ ಪ್ರಾದೇಶಿಕ ಸಮಾನತೆ ಇರಬೇಕು. ಅವಕಾಶ ವಂಚಿತ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕು. ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಲು ಕಾರಣರಾದ ರಾಜುಗೌಡ, ದತ್ತಾತ್ರೇಯ ಪಾಟೀಲ ಭಾವನೆಗಳಿಗೆ ಸ್ಪಂದಿಸಬೇಕಿದೆ. ಪ್ರಾದೇಶಿಕ ಅಸಮಾನತೆ ಸರಿದೂಗಿಸಲು ಕೆಲವರ ತ್ಯಾಗ ಮಾಡಬೇಕಿದೆ ಎಂದರು.
ಸಚಿವ ಸ್ಥಾನಗಳ ಆಕಾಂಕ್ಷಿಗಳು ಒಂದೆಡೆ ಸೇರಿ ಮಾತನಾಡಿದ್ದು ಪ್ರತ್ಯೇಕ ಸಭೆ, ಭಿನ್ನಮತ ಅಲ್ಲ, ಅತೃಪ್ತಿಯೂ ಅಲ್ಲ. ಅವರ ಭಾವನೆಗಳ ಹಂಚಿಕೊಳ್ಳುತ್ತಿದ್ದಾರೆ. ಒಂದೆಡೆ ಸೇರಿ ಚರ್ಚೆ ಮಾಡುವುದು ತಪ್ಪಲ್ಲ. ಸಿಎಂ, ಪಕ್ಷದ ವರಿಷ್ಠರ ಮೇಲೆ ಒತ್ತಡ ತಂತ್ರ ಹೇರುವುದು, ಬೇಡಿಕೆ ಮುಂದಿಡುವುದು ಅವರ ಕರ್ತವ್ಯ ಎಂದರು.