ಗುಳೆ ಹೋಗುತ್ತಿದ್ದ ಗ್ರಾಮಸ್ಥರಿಂದಲೇ ರಥ ನಿರ್ಮಾಣ
Team Udayavani, Apr 30, 2022, 3:27 PM IST
ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ (ಎಸ್.ಎಚ್) ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ರೈತರ ರಥ ಲೋಕಾರ್ಪಣೆಗೆ ಸಜ್ಜುಗೊಂಡಿದೆ.
ಚಂದ್ರಶೇಖರ ಶ್ರೀಗಳ ಪುಣ್ಯಾರಾಧನೆ, ಲಿಂ| ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಸಂದರ್ಭದಲ್ಲಿ ಮೇ 2ರಂದು ಶ್ರೀಮಠದ ಜಾತ್ರಾ ಮಹೋತ್ಸವಕ್ಕಾಗಿ ಇದೇ ಮೊದಲ ಬಾರಿಗೆ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ ಹಮ್ಮಿಕೊಳ್ಳಲಾಗಿದೆ.
ಸಾಮಾನ್ಯವಾಗಿ ರಥ ನಿರ್ಮಿಸಲು ಆ ಗ್ರಾಮದವರಷ್ಟೇ ಅಲ್ಲ ಬೇರೆ ಊರಿನ ಭಕ್ತರು, ಸಮಾಜ ಸೇವಕರು, ಉದ್ಯಮಿಗಳು ಹಾಗೂ ಜನಪ್ರತಿನಿಧಿಗಳಿಂದ ಗ್ರಾಮಸ್ಥರ ದೇಣಿಗೆ ಸಂಗ್ರಹಿಸುವುದು ಸಾಮಾನ್ಯ. ಆದರೆ ಸಂಗಾಪುರ ಎಸ್.ಎಚ್. ಗ್ರಾಮಸ್ಥರು ಮಾತ್ರ ರಥ ನಿರ್ಮಾಣಕ್ಕೆ ಬೇಕಾದ ಸಂಪೂರ್ಣ ರಥದ ನಿರ್ಮಾಣದ ವೆಚ್ಚ ಭರಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಕೊರೊನಾ ಆರಂಭಕ್ಕೂ ಮೊದಲು ನಡೆದ ಜಾತ್ರಾ ಮಹೋತ್ಸವದಲ್ಲಿ ಗ್ರಾಮದ ಪ್ರಮುಖರು ನೂತನ ರಥ ನಿರ್ಮಾಣದ ಘೋಷಣೆ ಮಾಡಿದ್ದರು. ಘೋಷಿತ ಸಮಯದಲ್ಲೇ ದಾನಿಗಳಿಂದ ಸ್ಥಳದಲ್ಲೇ 70 ಲಕ್ಷ ರೂ. ದೇಣಿಗೆ ಘೋಷಿತವಾಯಿತು. ಬಳ್ಳಾರಿ ಹರಪ್ಪನಹಳ್ಳಿ ರಥ ಶಿಲ್ಪಿಗಳಾದ ಮರಕುಂಬಿ ಕಾಶೀನಾಥ ಬಡಿಗೇರ, ಅಪ್ಪಣ್ಣ ಆಚಾರ್ಯ ಅವರಿಗೆ ರಥ ನಿರ್ಮಾಣದ ಜವಾಬ್ದಾರಿ ನೀಡಲಾಗಿತ್ತು ಎಂದು ರಮೇಶ ಬಡ್ರಿ ವಿವರಿಸಿದ್ದಾರೆ.
ಸಾಗುವಾನಿ ಕಟ್ಟಿಗೆಯಲ್ಲಿ ನಿರ್ಮಿಸಿರುವ ರಥದಲ್ಲಿ ಬಂಥನಾಳ ಪರಂಪರೆಯ ಎಲ್ಲಾ ಮಠಾಧೀಶರ ಚಿತ್ರಗಳು, ನವದುರ್ಗೆಯರು, ನವಗ್ರಹಗಳು, ಅಷ್ಟದಿಕ್ಪಾಲಕರು, ಬ್ರಹ್ಮ, ವಿಷ್ಣು, ಮಹೇಶ್ವರರ ಚಿತ್ರಗಳ ಕೆತ್ತನೆ ರಥದ ಆಕರ್ಷಣೆ ಎನಿಸಿದ್ದು, ಕಣ್ಮನ ಸೆಳೆಯುತ್ತಿವೆ. ಸಂಗಾಪುರ ಎಸ್.ಎಚ್.ಗ್ರಾಮದಲ್ಲಿ ದೇಣಿಗೆ ಸಂಗ್ರಹದ ವಿಶಿಷ್ಟ ಆಚರಣೆಯೊಂದಿದೆ.
ಪ್ರತಿವರ್ಷ ಜಾತ್ರೆ ಸಂದರ್ಭದಲ್ಲಿ ಎಲ್ಲ ಗ್ರಾಮಗಳಂತೆ ಮನೆಮನೆಗೆ ತೆರಳಿ ದೇಣಿಗೆ ಸಂಗ್ರಹಿಸುವ ಪದ್ಧತಿ ಇಲ್ಲಿ ಇಲ್ಲ. ಬದಲಾಗಿ ಜಾತ್ರೆ ಸಂದರ್ಭದಲ್ಲಿ ಮಠದ ಬಳಿ ಇರುವ ಆಲದ ಮರಕ್ಕೆ ಜೋಳಿಗೆಯೊಂದನ್ನು ಕಟ್ಟಿರುತ್ತಾರೆ. 4-5 ದಿನ ಕಟ್ಟಲಾಗುವ ಈ ಜೋಳಿಗೆಗೆ ಭಕ್ತರು ತಮ್ಮಿಷ್ಟದಂತೆ ದೇಣಿಗೆ ಹಾಕುವುದು ಇಲ್ಲಿಯ ವಾಡಿಕೆಯಾಗಿದೆ.
ಕೇವಲ 7-8 ವರ್ಷಗಳ ಹಿಂದಿನಿಂದ ಜಿಲ್ಲೆಯಲ್ಲಿ ಭೀಕರ ಬರ ಆವರಿಸಿದ್ದು, ಹಿಂದಿನಿಂದಲೂ ಈ ಗ್ರಾಮದಲ್ಲಿ ಬದುಕನ್ನು ಅರಸಿ ಗುಳೆ ಹೋಗುವುದು ಸಂಗಾಪುರ ಎಸ್.ಎಚ್. ಗ್ರಾಮಸ್ಥರಿಗೆ ಅನಿವಾರ್ಯವಾಗಿತ್ತು. ಪರಿಣಾಮ ರೈತರು ಕೂಡ ಆರ್ಥಿಕ ಸಂಕಷ್ಟದಿಂದ ಸಾಲದ ಸುಳಿಗೂ ಸಿಲುಕಿದ್ದರು. ಆದರೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಎಂ.ಬಿ.ಪಾಟೀಲ ಅವರು ನೀರಾವರಿ ಯೋಜನೆ ಕಲ್ಪಿಸಿದ್ದರಿಂದ ಇದೀಗ ಈ ಭಾಗದಲ್ಲಿ ನೀರಾವರಿ ಸಮೃದ್ಧಿಯಾಗಿದೆ.
ಕೃಷಿಯಿಂದ ಆರ್ಥಿಕ ಶಕ್ತಿ ವೃದ್ಧಿಸಿಕೊಂಡಿರುವ ರೈತರು ಸಂತಸದಿಂಧ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ತಮ್ಮೂರಿಗೆ ಬರದ ಅಪಕೀರ್ತಿ ಅಳಿಸಿ ಹಾಕಿ, ಸಮೃದ್ಧ ಜೀವನ ಕಟ್ಟಿಕೊಳ್ಳಲು ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಅವರನ್ನು ಗ್ರಾಮದಲ್ಲಿ ಎಳೆಯುವ ಮೊದಲ ರಥೋತ್ಸವಕ್ಕೆ ಆಹ್ವಾನಿಸಿದ್ದು, ಅವರಿಂದಲೇ ಚಾಲನೆ ಕೊಡಿಸಲು ನಿರ್ಧರಿಸಿದ್ದಾರೆ.
ಅನ್ಯ ಊರಿನವರಿಂದ 1 ರೂ. ದೇಣಿಗೆ ಪಡೆಯದೇ ಗ್ರಾಮಸ್ಥರೇ ಸ್ವಯಂ ಪ್ರೇರಿತವಾಗಿ ಸಂಗ್ರಹಿಸಿರುವ ದೇಣಿಗೆ ಹಣದಲ್ಲಿ ರಥ ನಿರ್ಮಾಣಗೊಂಡಿದೆ. ಇದು ನಮ್ಮೂರ ಭಕ್ತರಲ್ಲಿ ಆತ್ಮವಿಶ್ವಾಸ, ದೈವಸಾಕ್ಷಾತ್ಕಾರದ ಪ್ರತೀಕ. ನಮ್ಮೂರ ಅನ್ನದಾತನ ನೆಲಕ್ಕೆ ಹರಿದ ಕೃಷ್ಣೆಯಿಂದ ಸ್ವಾಭಿಮಾನ ಮೈಗೂಡಿದ್ದು, ಸ್ವಾಭಿಮಾನದ ರಥದ ಮೂಲಕ ಗ್ರಾಮ ಸಮೃದ್ಧಿಯನ್ನು ಸಂಕೇತಿಸುತ್ತಿದ್ದಾರೆ. -ಅಭಿನವ ಸಿದ್ಧಲಿಂಗ ಶ್ರೀಗಳು, ಶ್ರೀಸಿದ್ಧಲಿಂಗೇಶ್ವರ ಕಮರಿಮಠ, ಸಂಗಾಪುರ ಎಸ್.ಎಚ್
ತಮ್ಮ ಸ್ವಾಭಿಮಾನದ ಜೀವನಕ್ಕೆ ನಾಂದಿ ಹಾಡಲು ತಮ್ಮೂರಿಗೆ ಗಂಗೆಯನ್ನು ಹರಿಸಿದ ಜನನಾಯಕರನ್ನು ಕರೆಸಿ, ಅವರಿಂದಲೇ ನೂತನ ರಥೋತ್ಸವಕ್ಕೆ ಚಾಲನೆ ಕೊಡಿಸುತ್ತಿದ್ದಾರೆ. ಅನ್ನದಾತ ಸದಾ ಕೃತಜ್ಞನಾ ಜೀವಿ ಹಾಗೂ ಉಪಕಾರ ಸ್ಮರಣೆಯ ವ್ಯಕ್ತಿ ಎಂಬುದರ ಪ್ರತೀಕ. -ಡಾ| ಮಹಾಂತೇಶ ಬಿರಾದಾರ, ವಿಜಯಪುರ
ಗುಳೆ ಹೋಗುತ್ತಿದ್ದ ನಮ್ಮೂರು ನೀರಾವರಿ ಕಂಡಿದ್ದು, ಸಮೃದ್ಧ ಲಕ್ಷ್ಮೀ ಮನೆ ಮಾಡಿದ್ದಾಳೆ. ಹೀಗಾಗಿ ನಮ್ಮೂರ ರಥಕ್ಕೆ ನಮ್ಮೂರಿನ ಜನ ಮಾತ್ರವೇ ದೇಣಿಗೆ ಸಂಗ್ರಹಿಸಿ ರಥ ನಿರ್ಮಿಸಿದ್ದೇವೆ. -ರಮೇಶ ಶಂಕ್ರೆಪ್ಪ, ರೈತ
-ಜಿ.ಎಸ್. ಕಮತರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ
Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
MUST WATCH
ಹೊಸ ಸೇರ್ಪಡೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ