Vijayapura; ಚುನಾವಣೆ ಕರ್ತವ್ಯ ಚ್ಯುತಿ: ಶಿಕ್ಷಕ ಮುಲ್ಲಾ ಸಸ್ಪೆಂಡ್
Team Udayavani, Mar 26, 2024, 8:45 PM IST
ವಿಜಯಪುರ: ಮತಗಟ್ಟೆ ಮಟ್ಟದ ಅಧಿಕಾರಿಯಾಗಿ (ಬಿಎಲ್ಓ) ಚುನಾವಣಾ ಕರ್ತವ್ಯ ನಿರ್ವಹಿಸುವಲ್ಲಿ ಕರ್ತವ್ಯ ಚ್ಯುತಿ ಎಸಗಿದ ಆರೋಪದಲ್ಲಿ ಓರ್ವ ಶಿಕ್ಷಕನನ್ನು ಮಂಗಳವಾರ ಸೇವೆಯಿಂದ ಅಮಾನತು ಮಾಡಲಾಗಿದೆ.
ತಿಕೋಟಾ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಅರಕೇರಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಮುಜಮ್ಮಿಲ್ ಮುಲ್ಲಾ ಇವರನ್ನು ಚುನಾವಣಾ ಕರ್ತವ್ಯ ಲೋಪದ ಆರೋಪದಲ್ಲಿ ಮುಜಮ್ಮಿಲ್ ಜಿಲ್ಲಾಧಿಕಾರಿಯೂ ಆಗಿರುವ ಜಿಲ್ಲಾ ಚುನಾವಣಾ ಅಧಿಕಾರಿ ಭೂಬಾಲನ್ ಆದೇಶಿದ್ದಾರೆ.
ಸಹ ಶಿಕ್ಷಕ ಮುಜಮ್ಮಿಲ್ ಮುಲ್ಲಾ ಇವರನ್ನು ಮತಗಟ್ಟೆ ಮಟ್ಟದ ಅಧಿಕಾರಿಯಾಗಿ (ಬಿಎಲ್ಓ) ಎಂದು ನೇಮಕ ಮಾ.14 ರಂದು ನೇಮಿಸಿ, ಆದೇಶಿಸಲಾಗಿತ್ತು. ಆದರೆ ಶಿಕ್ಷಕ ಮುಲ್ಲಾ ಇವರು ಜಿಲ್ಲಾಧಿಕಾರಿ ಕಛೇರಿ, ತಿಕೋಟಾ ತಹಶಿಲ್ದಾರ್ ಕಛೇರಿಯಿಂದ ಜಾರಿ ಮಾಡಿದ ಆದೇಶ ಪ್ರತಿಯನ್ನು ಸ್ವೀಕರಿಸಿರಲಿಲ್ಲ. ಸೆಕ್ಟರ್ ಅಧಿಕಾರಿ ಮೂಲಕ ತಿಳಿಸಿದರೂ ಬಿಎಲ್ಓ ಕರ್ತವ್ಯ ನಿರ್ವಹಿಸಲು ನಿರಾಕರಿಸಿದ್ದರು.
ಚುನಾವಣಾ ಕರ್ತವ್ಯ ನಿರ್ವಹಿಸಲು ನೋಟೀಸ್ ನೀಡಿದರೂ ಮುಜಮ್ಮಿಲ್ ಮುಲ್ಲಾ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಕರ್ತವ್ಯ ಚ್ಯುತಿ ಎಸಗಿದ ಕುರಿತು ಕ್ರಮ ಕೈಗೊಳ್ಳುವಂತೆ ತಿಕೋಟಾ ತಹಶಿಲ್ದಾರರ ಮಾ.18 ರಂದು ಜಿಲ್ಲಾಧಿಕಾರಿ ಕಛೇರಿಗೆ ವರದಿ ಸಲ್ಲಿಸಿದ್ದರು.
ತಹಶಿಲ್ದಾರರ ವರದಿ ಆಧರಿಸಿ ಜಿಲ್ಲಾಧಿಕಾರಿ ಭೂಬಾಲನ್ ಶಿಕ್ಷಕ ಮುಜಮ್ಮಿಲ್ ಮುಲ್ಲಾ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ ಸೇವೆಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.