ನಾನಂತೂ ಸಚಿವನಾಗೋದಿಲ್ಲ, ನ.25 ವರೆಗೆ ಕಾಯಿರಿ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
Team Udayavani, Nov 11, 2020, 3:51 PM IST
ವಿಜಯಪುರ: ನಾನಂತೂ ಸಚಿವನಾಗುವುದಿಲ್ಲ. ಅದಕ್ಕಾಗಿ ಯಾರ ಮನೆಗೆ ಹೋಗಿ ಕಾಲಿಗೂ ಬೀಳುವುದಿಲ್ಲ. ನವೆಂಬರ್ 25 ರವರೆಗೆ ಕಾಯಿರಿ. ಈ ದೀಪಾವಳಿ, ಸಿಹಿ ನೀಡುತ್ತದೆಯೋ, ಕಹಿ ನೀಡುತ್ತದೆಯೋ ಕಾದು ನೋಡಿ ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜಕೀಯವಾಗಿ ಮತ್ತೊಂದು ಕುತೂಹಲದ ಬಾಂಬ್ ಎಸೆದಿದ್ದಾರೆ.
ವಸತಿ ಸಚಿವ ವಿ.ಸೋಮಣ್ಣ ಅವರೊಂದಿಗೆ ನಗರದಲ್ಲಿ ವಸತಿ ಯೋಜನೆ ಸಮುಚ್ಛಯ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಭೀಮಾ ನದಿ ಪ್ರವಾಹ ಸಂತ್ರಸ್ತರಿಗೂ 25 ಸಾವಿರ ರೂ. ನೀಡುವ ಕುರಿತು ಸಿ.ಎಂ. ಯಡಿಯೂರಪ್ಪ ಸಚಿವ ಸೋಮಣ್ಣ ಅವರ ಮೂಲಕ ಸಂದೇಶ ಕಳಿಸಿದ್ದಾರೆ. ಹೀಗಾಗಿ ಪ್ರವಾಹ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ನಿವಾರಣೆ ನಿರೀಕ್ಷೆ ಇದೆ ಎಂದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಹಿಂದೆ ಸಚಿವ ಸೋಮಣ್ಣ ಹಾಗೂ ನನ್ನ ಮಧ್ಯೆ ಉಂಟಾಗಿದ್ದ ಸಮಸ್ಯೆಯನ್ನೇ ಕೆಲವರು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಒಂದೇ ಮನೆಯಲ್ಲಿ ಇರುವ ತಂದೆ-ಮಕ್ಕಳು, ಅಣ್ಣ- ತಮ್ಮಂದಿರ ಮಧ್ಯೆ ಸಣ್ಣ ಪುಟ್ಟ ವ್ಯತ್ಯಾಸ ಇರುವುದು ಸಹಜ. ಇದೀಗ ನಮ್ಮ ಮಧ್ಯೆ ಅಂಥ ವ್ಯತ್ಯಾಸ ಏನೂ ಇಲ್ಲ ಎಂದು ಸಚಿವ ಸೋಮಣ್ಣ ಅವರನ್ನು ಹೊಗಳಿದರು.