ಗುರುವಿನ ಕಾರ್ಯ ಸ್ಮರಣೀಯ
Team Udayavani, Jan 6, 2020, 4:47 PM IST
ಚಡಚಣ: ಮಕ್ಕಳು ಮೂಲ ಸೌಕರ್ಯಗಳನ್ನು ದಿನಂಪ್ರತಿ ಮೆಲುಕು ಹಾಕುತ್ತ ಚೆನ್ನಾಗಿ ಓದಬೇಕು. ಶಾಲೆಯನ್ನು, ಗುರುಗಳನ್ನು ಪ್ರೀತಿಸಬೇಕು. ಕಲಿತ ಶಾಲೆ ಬಗ್ಗೆ ಅಭಿಮಾನವಿದ್ದರೆ, ನಿಮಗೆ ಜೀವನದಲ್ಲಿ ಒಳ್ಳೆಯ ಫಲ ನೀಡುವುದು ಎಂದು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.
ದೇಗಿನಾಳ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಸುವರ್ಣ ಮಹೋತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಅಜ್ಞಾನದಿಂದ ಸುಜ್ಞಾನದೆಡೆಗೆ ಒಯ್ಯುವುದು ಗುರುವಿನ ಕಾರ್ಯ ಪವಿತ್ರ. 50 ವರ್ಷ ಜ್ಞಾನದ ದೀಪ ಬೆಳಗಿಸಿ ಮಕ್ಕಳನ್ನು ಉದ್ಧರಿಸಿದ ಜ್ಞಾನ ದೇಗುಲವಿದು. ಇಲ್ಲಿ ಶಿಕ್ಷಕರ ಪರಿಶ್ರಮ ಸಫಲವಾಗಿದೆ. ಒಂದು ಮಾವಿನ ಗಿಡವು ಎಲ್ಲರಿಗೂ ಸಿಹಿ ಹಣ್ಣು ಕೊಡುವಂತೆ ಶಾಲೆ ಜ್ಞಾನದ ವೃಕ್ಷವಾಗಿದೆ. ಜ್ಞಾನದ ಉತ್ತಮ ಫಲಗಳು ಇನ್ನೂ ಹೆಚ್ಚಿನ ಮಕ್ಕಳಿಗೆ ನೀಡಲಿ ಎಂದರು.
ಮಕ್ಕಳ ಕನಸು ನನಸಾಗಬೇಕಾದರೆ ಪ್ರಾಥಮಿಕ ಶಾಲೆ ಶಿಕ್ಷಣವೇ ಅಡಿಪಾಯ.
ಪ್ರಾಥಮಿಕ ಶಾಲೆಗಳು ಮುಚ್ಚಿದರೆ ಜಗವೆಲ್ಲ ಕತ್ತಲೆಯಾಗುತ್ತದೆ. ನಿಮ್ಮ ಮಕ್ಕಳು ಜಗತ್ತನ್ನು ಬೆಳಗಬೇಕಾದರೆ ಪ್ರಾಥಮಿಕ ಶಾಲೆಗಳು ಅವಶ್ಯಕ. ಹೀಗೆ ಇನ್ನೂ ಹೆಚ್ಚಿನ
ಜಾಣ ವಿದ್ಯಾರ್ಥಿಗಳನ್ನು ಈ ಪ್ರಪಂಚಕ್ಕೆ ಕೊಡುವಂತಾಗಲಿ ಎಂದು ಹಾರೈಸಿದರು.
ಅತಿಥಿಯಾಗಿ ಆಗಮಿಸಿದ್ದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ
ಮಾತನಾಡಿ, ಈ ಶಾಲೆ ನಿಸರ್ಗದ ಮಡಿಲಲ್ಲಿದ್ದು ಉತ್ತಮ ಶಿಕ್ಷಣ ನೀಡಿ ಜಾಣ
ವಿದ್ಯಾರ್ಥಿಗಳನ್ನು ತಯಾರಿಸುವ ಶಕ್ತಿ ಕೇಂದ್ರವಾಗಿದೆ ಎಂದು ಹೇಳಿದರು.
ತಿಕೋಟಾ ವಿರಕ್ತ ಮಠದ ಶಾಂತಲಿಂಗೇಶ್ವರ ಸ್ವಾಮಿಗಳು ಆಶೀರ್ವಚನ ನೀಡಿ, ಬಾ ಮರಳಿ ಶಾಲೆಗೆ ಕಂದಾ ಎಂಬ ನುಡಿಯಲ್ಲಿ ಪಾಲಕರು ಎಲ್ಲ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸದೇ ಸರಕಾರಿ ಶಾಲೆಗಳಿಗೆ ಕಳುಹಿಸಿದರೆ ನಿಮ್ಮ ಆಸೆಗಳನ್ನು ಈಡೇರಿಸುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ ಹಾದಿಮನಿ, ಜಿಪಂ ಸದಸ್ಯ ಮಹಾದೇವ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷ ಚಂದ್ರೋಬಾ ಬಿರಾದಾರ, ಸಂಭಾಜಿರಾವ್ ಮಿಸಾಳೆ, ದಯಾಸಾಗರ ಪಾಟೀಲ, ಶ್ರೀಮಂತ ಇಂಡಿ, ಅರ್ಜುನ ಬಿರಾದಾರ, ರಮೇಶ ಜಾಧವ, ಬಸವರಾಜ ಸಾಹುಕಾರ, ಎಸ್.ಬಿ. ಬೊಳೇಗಾಂವ, ಶಿಕ್ಷಕರಾದ ಎಂ.ಎಸ್. ಹಿರೇಮಾಳ, ಎಸ್.ಡಿ. ಪಾಟೀಲ, ವೈ.ಡಿ. ಬಸನಾಳ, ಆರ್.ಸಿ. ಚವ್ಹಾಣ, ಪಿ.ಎನ್. ಗೋಕಾವಿ, ಅನುಪಮಾ ಕೆ.ಎಂ, ಎನ್.ಡಿ. ಮಸಳಿ, ರಮೇಶಗೌಡ ಬಿರಾದಾರ, ರವಿ ಹಿರೇಮಠ ಇದ್ದರು.