ಆಲೆಮನೆಗಳ ಆಧುನೀಕರಣಕ್ಕೆ ಕ್ರಮ
Team Udayavani, Jun 4, 2020, 5:42 AM IST
ಚಾಮರಾಜನಗರ: ಜಿಲ್ಲೆಯಲ್ಲಿರುವ ಆಲೆಮನೆಗಳ ಸ್ಥಿತಿಗತಿ ಪರಿಶೀಲಿಸಿ, ಅವುಗಳ ಸುಧಾರಣೆ, ಮಾರುಕಟ್ಟೆಗೆ ಅನುಕೂಲ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಿ ತಿಂಗಳೊಳಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ. ಆರ್.ರವಿ ಸೂಚಿಸಿದರು.
ನಗರದಲ್ಲಿ ಜಿಲ್ಲೆಯ ಆಲೆಮನೆಗಳ ಬಲವರ್ಧನೆ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಆಲೆಮನೆಗಳು ಕಾರ್ಯ ನಿರ್ವಹಿಸುತ್ತಿವೆ. ಇವು ಪಾರಂಪರಿಕ ಪದತಿ ಅನುಸರಿಸುತ್ತಿವೆ. ಪ್ರಸ್ತುತ ಆಲೆಮನೆಗಳನ್ನು ತಾಂತ್ರಿಕವಾಗಿ ಆಧುನೀಕರಿಸಲು ಕ್ರಮ ಕೈಗೊಳ್ಳುವುದು ಅಗತ್ಯ.ಈ ನಿಟ್ಟಿನಲ್ಲಿ ಅವಶ್ಯಕ ರೂಪುರೇಷೆಗಳನ್ನು ಸಿದ್ದಪಡಿಸಲು ಸಮಿತಿ ರಚಿಸಿ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದರು.
ಪರಿಶೀಲಿಸಿ: ತಹಶೀಲ್ದಾರರು, ಕೃಷಿ ಇಲಾಖೆ ಅಧಿಕಾರಿಗಳು, ಸಾವಯವ ಕೃಷಿ ಕೈಗೊಂಡಿರುವ ರೈತ ಪ್ರತಿನಿಧಿಗಳು, ಸಹಕಾರ, ಕೃಷಿ ಮಾರುಕಟ್ಟೆ ಸಮಿತಿ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಬೇಕು ಎಂದರು.
ಆಲೆಮನೆ ಸದೃಢಗೊಳಿಸಲು ಸಾಲ ಸೌಲಭ್ಯಗಳನ್ನು ಬ್ಯಾಂಕುಗಳು ಒದಗಿಸಬೇಕು ಎಂದು ಜಿಲ್ಲಾಧಿಕಾರಿಸೂಚನೆ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಆನಂದ್, ಎಸಿ ನಿಖೀತಾ, ತಹಶೀಲ್ದಾರ್ ಮಹೇಶ್ ಕುನಾಲ್, ನಂಜುಂಡಯ್ಯ ಇದ್ದರು.