ಅದ್ಧೂರಿ ಬಸವಜಯಂತಿ ಆಚರಣೆಗೆ ತೀರ್ಮಾನ
Team Udayavani, Apr 21, 2019, 3:00 AM IST
ಚಾಮರಾಜನಗರ: ಹರವೆ ಹೋಬಳಿ ವ್ಯಾಪ್ತಿಯಲ್ಲಿ ಅದ್ಧೂರಿಯಾಗಿ ಗ್ರಾಮಾಂತರ ಬಸವ ಜಯಂತಿಯನ್ನು ಆಚರಣೆ ಮಾಡಲು ನಡೆದ ವೀರಶೈವ ಲಿಂಗಾಯತ ಮಹಾಸಭಾ ಹೋಬಳಿ ಘಟಕದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.
ತಾಲೂಕಿನ ಹರವೆ ಕೇತಹಳ್ಳಿ ರಸ್ತೆ ಮಾರ್ಗದಲ್ಲಿರುವ ವಿರಕ್ತ ಮಠದ ಆಶ್ರಮದಲ್ಲಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಯಿತು. ವೀರಶೈವ -ಲಿಂಗಾಯತ ಮಹಾಸಭಾದ ನೂತನ ತಾಲೂಕು ಘಟಕದ ಪದಾಧಿಕಾರಿಗಳನ್ನು ಶ್ರೀಮಠದ ಅಧ್ಯಕ್ಷ ಶ್ರೀ ಸರ್ಪಭೂಷಣಸ್ವಾಮೀಜಿಗಳ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಲೆಕ್ಕ ಪತ್ರ ಮಂಡನೆ: ಬಳಿಕ ನಡೆದ ಸಭೆಯಲ್ಲಿ ಮಹಾಸಭಾದ ಖಜಾಂಚಿ ನಾಗೇಂದ್ರ ಪ್ರಸಾದ್ ಹೋಬಳಿ ಘಟಕದ ಖರ್ಚು ವೆಚ್ಚಗಳ ಲೆಕ್ಕ ಪತ್ರವನ್ನು ಸಭೆಗೆ ಮಂಡಿಸಿದರು. 2 ಲಕ್ಷಕ್ಕೂ ಹೆಚ್ಚು ಹಣ ಉಳಿತಾಯ ಖಾತೆಯಲ್ಲಿದ್ದು, ಠೇವಣಿ ಇಡಲಾಗಿದೆ ಎಂದರು.
ಮುಖಂಡರ ಸಭೆ: ಶ್ರೀ ಸರ್ಪಭೂಷಣಸ್ವಾಮಿ ಮಾತನಾಡಿ, ಹರವೆ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ವೀರಶೈವ ಲಿಂಗಾಯತ ಮುಖಂಡರನ್ನು ಸಂಘಟನೆ ಮಾಡಲು ಹೋಬಳಿ ಘಟಕ ಶ್ರಮಿಸುತ್ತಿದೆ.
ಪ್ರತಿ ವರ್ಷದ ಬಸವ ಜಯಂತಿಯನ್ನು ಗ್ರಾಮಾಂತರ ಪ್ರದೇಶಗಳಲ್ಲಿ ಆಚರಣೆ ಮಾಡುವ ಮೂಲಕ ಜಾಗೃತಿ ಮೂಡಿಸುವುದು ಹಾಗೂ ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶ ಹೊಂದಲಾಗಿದೆ. ಅದರಂತೆ ಈ ಬಾರಿಯು ಅದ್ಧೂರಿಯಾಗಿ ಜಯಂತಿ ಮಾಡುವ ಸಲುವಾಗಿ ಈ ಜಿಲ್ಲೆಯ ವ್ಯಾಪ್ತಿಯ ಮುಖಂಡರ ಸಭೆ ಕರೆಯಲಾಗಿದೆ ಎಂದು ಹೇಳಿದರು.
ಸಲಹೆ, ಸೂಚನೆ ನೀಡಿ: ನಿಮ್ಮ ಸಲಹೆ ಸೂಚನೆಗಳ ಆಧಾರದಲ್ಲಿ ಸಮಾವೇಶವನ್ನು ಸಂಘಟಿಸಲಾಗುವುದು. ಅಲ್ಲದೇ ಬಸವ ಜಯಂತಿ ಆಚರಣೆ ಸಮಿತಿಯನ್ನು ಅಸ್ತಿತ್ವಕ್ಕೆ ತಂದು ಸಕ್ರಿಯವಾಗಿ ಕಾರ್ಯಕ್ರಮದ ಯಶಸ್ವಿಗೆ ದುಡಿಯುವುದು ನಮ್ಮೆಲ್ಲರ ಉದ್ದೇಶವಾಗಿದೆ ಎಂದರು.
ಮಹಾಸಭಾದ ರಾಜ್ಯ ಸಮಿತಿ ನಿರ್ದೇಶಕ ಹೆಗ್ಗವಾಡಿ ಮಹದೇವಸ್ವಾಮಿ ಮಾತನಾಡಿ, ಆಯಾ ಹೋಬಳಿಗಳಲ್ಲಿ ಬಸವ ಜಯಂತಿಯನ್ನು ಆಚರಣೆ ಮಾಡಿ ಗ್ರಾಮ ಮಟ್ಟಗಳಲ್ಲಿ ವೀರಶೈವ-ಲಿಂಗಾಯತರು ಸಂಘಟನೆಯಾಗಬೇಕಾಗಿದೆ. ನಮ್ಮ ರಾಜಕೀಯ ಪ್ರಾತಿನಿಧ್ಯ ಹಾಗೂ ಸಾಮಾಜಿಕ ಭದ್ರತೆಗಾಗಿ ಸಂಘಟನೆ ಪ್ರಬಲವಾಗುವ ಅವಶ್ಯಕತೆ ಬಹಳ ಇದೆ ಎಂದರು.
ಸಹಕಾರ ನೀಡಿ: ವೀರಶೈವ-ಲಿಂಗಾಯತ ಮಹಾಸಭಾ ರಾಜಕೀಯೇತರ ಮಹತ್ತರವಾದ ಸಂಘಟನೆಯಾಗಿದೆ. ಇದರ ತಳಹದಿಯಲ್ಲಿ ಸಮಾಜವನ್ನು ಸಂಘಟನೆ ಮಾಡುವ ದಿಕ್ಕಿನಲ್ಲಿ ಪ್ರತಿಯೊಬ್ಬರು ಮಹಾಸಭಾದ ಸದಸ್ಯತ್ವವನ್ನು ಪಡೆದು ಜಿಲ್ಲಾ, ತಾಲೂಕು ಹಾಗೂ ಹೋಬಳಿ, ಗ್ರಾಮ ಮಟ್ಟಗಳಲ್ಲಿ ಶಾಖೆಗಳನ್ನು ಹೊಂದಬೇಕು.
ಮುಂದಿನ ದಿನಗಳಲ್ಲಿ ಇದೇ ನಮಗೆ ಅಸ್ತ್ರವಾಗಲಿದೆ. ಒಂದು ಸರ್ಕಾರವನ್ನು ಸ್ಥಾಪನೆ ಮಾಡುವ ತಾಕತ್ತು ನಮಗೆ ಬರುತ್ತ ದೆ. ಈ ನಿಟ್ಟಿನಲ್ಲಿ ಸಮಾಜವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರು ಸಣ್ಣಪಟ್ಟ ಭಿನ್ನಾಪ್ರಾಯಗಳನ್ನು ಬದಿಗೊತ್ತಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಹೋಬಳಿ ಘಟಕ ರಚನೆ: ಮಹಾಸಭಾದ ತಾಲೂಕು ಅಧ್ಯಕ್ಷ ಹೊಸೂರು ನಟೇಶ್ ಮಾತನಾಡಿ, ವೀರಶೈವ ಮಹಾಸಭಾದ ತಾಲೂಕು ಘಟಕವನ್ನು ಅಸ್ತಿತ್ವಕ್ಕೆ ತರಲಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಘಟಕಗಳನ್ನು ರಚನೆ ಮಾಡಲಾಗುತ್ತದೆ. ಸಮಾಜ ಬಂಧುಗಳು ಮಹಾಸಭಾದ ಆಶಯದಂತೆ ಒಗ್ಗಟ್ಟು ಪ್ರದರ್ಶನ ಮಾಡಬೇಕಾಗಿದೆ.
ಇತ್ತೀಚಿನ ದಿನಗಳಲ್ಲಿ ಸಮಾಜದ ಸಂಘಟನೆಯನ್ನು ನಾನಾ ಕಾರಣಗಳಿಂದ ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಇದನ್ನು ಸಮಾಜದ ಬಂಧುಗಳು ಅರ್ಥ ಮಾಡಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಪೂಜ್ಯ ಶ್ರೀಗಳ ನೇತೃತ್ವದಲ್ಲಿ ಸಂಘಟನೆಯನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಅನೇಕ ಮುಖಂಡರು ಮಾತನಾಡಿ, ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ನೀಡಿದರು. ಹರವೆ ಹೋಬಳಿ ಘಟಕದ ಅಧ್ಯಕ್ಷ ಕೇತಹಳ್ಳಿ ಶಿವಪಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಮುಖಂಡರು, ತಾಲೂಕು ಹಾಗೂ ಹೋಬಳಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.