ಚಾ.ನಗರ ಅಭಿವೃದ್ಧಿಗೆ ಸೋಮಣ್ಣ ಬೆಂಬಲಿಸಿ
Team Udayavani, Apr 29, 2023, 2:58 PM IST
ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕ ವಾತಾವರಣವಿದ್ದು, ಪಕ್ಷದ ಅಭ್ಯರ್ಥಿ ವಿ.ಸೋಮಣ್ಣ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕ್ಷೇತ್ರದ ಚುನಾವಣಾ ಉಸ್ತುವಾರಿ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಕೋಟೆ ಎಂ.ಶಿವಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಲಿದ್ದು, ವಿ. ಸೋಮಣ್ಣ ಅವರು ವರುಣಾ ಚಾ.ನಗರ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾದ ಕಾರಣ ಎರಡು ಜಿಲ್ಲೆಗಳಲ್ಲಿ ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಿದೆ ಎಂದರು.
ವಿ ಸೋಮಣ್ಣ ಅಲೆ: ಚಾ.ನಗರ ಕ್ಷೇತ್ರದಲ್ಲಿ ವಿ ಸೋಮಣ್ಣ ಅವರ ಪರ ಅಲೆ ಇದ್ದು, ಹೆಚ್ಚಿನ ಬಹುಮತದಲ್ಲಿ ಅವರು ಗೆಲುವು ಸಾಧಿಸುವ ಜೊತೆಗೆ ಇನ್ನುಳಿದ ಮೂರು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿ ಸುವ ವಿಶ್ವಾಸ ವಿದೆ. ರಾಜ್ಯದಲ್ಲಿಯೂ ಸಹ ಬಿಜೆಪಿಗೆ ಉತ್ತಮ ವಾತಾವರಣ ಇದ್ದು, 140ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆದ್ದು ಸ್ವಶಕ್ತಿಯಿಂದ ಅಧಿಕಾರ ರಚನೆ ಮಾಡಲಿದೆ ಎಂದು ತಿಳಿಸಿದರು.
ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ವಿ. ಸೋಮಣ್ಣ ಅವರು ಗೆಲುವು ಖಚಿತವಾಗುತ್ತಿದ್ದಂತೆ ಹತಾಶೆ ಗೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಪ್ರಚಾರಕ್ಕೆ ಅಡ್ಡಿ ಪಡಿಸುವ ಜೊತೆಗೆ ಹಲ್ಲೆಮಾಡಿರುವುದು ತೀವ್ರ ಖಂಡನೀಯ. ಇದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರು ಚುನಾ ವಣೆಗೆ ಸ್ಪರ್ಧೆ ಮಾಡಿ ಮತಯಾಚನೆ ಮಾಡುವ ಹಕ್ಕು ಇದೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಅವರ ಅಣ್ಣನ ಮನೆ ಮುಂದೆ ವಿ.ಸೋಮಣ್ಣ ಅವರಿಗೆ ಕಲ್ಲು ಎಸೆದಿರುವುದು ಅತ್ಯಂತ ಖಂಡನೀಯ, ಭಯದ ವಾತಾವರಣ ನಿರ್ಮಾಣ ಮಾಡುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕೂಡಲೇ ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಳ ಮೀಸಲಾತಿ ಜಾರಿಯಿಂದ ಎಲ್ಲಾ ವರ್ಗದವರಿಗೆ ನ್ಯಾಯ: ಬಿಜೆಪಿ ಸರ್ಕಾರವು ಬಹಳ ವರ್ಷಗಳ ಬೇಡಿಕೆ ಯಾಗಿದ್ದ ಒಳ ಮೀಸಲಾತಿ ಜಾರಿ ಮಾಡಿ, ಎಲ್ಲಾ ವರ್ಗ ದ ಜನರಿಗೆ ನ್ಯಾಯ ಕಲ್ಪಿಸಿದಂತಾಗಿದೆ. ಮಾದಿಗ ಸಮಾ ಜದ ಬಹು ದಿನಗಳ ಬೇಡಿಕೆಯಾಗಿದ್ದ ಜನಸಂಖ್ಯಾ ವಾರು ಒಳ ಮೀಸಲಾತಿ ಜಾರಿ ಹೋರಾಟಕ್ಕೆ ಜಯ ಲಭಿಸಿದ್ದು, ರಾಜ್ಯ ಬಿಜೆಪಿ ಸರ್ಕಾರ ಸಮುದಾಯದ 20 ವರ್ಷಗಳ ಹೋರಾಟಕ್ಕೆ ಬೆಲೆ ನೀಡಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದೇ ಗ್ಯಾರಂಟಿ ಇಲ್ಲ ಇನ್ನು ಗ್ಯಾರಂಟಿ ಕಾರ್ಡ್ ಉಪಯೋಗಕ್ಕೆ ಬರುತ್ತಾ? ಗ್ಯಾರಂಟಿ ಕಾರ್ಡ್ ನಲ್ಲಿರುವ ಯೋಜನೆಗಳ ಲೆಕ್ಕಾಚಾರ ನೋಡಿದರೆ ಬಜೆಟ್ ಗಾತ್ರಕ್ಕೂ ಹೆಚ್ಚಾಗುತ್ತದೆ. ಇಷ್ಟು ಪ್ರಮಾಣದ ಯೋಜನೆಗಳನ್ನು ಕೊಡಲು ಅನುದಾನ ಎಲ್ಲಿಂದ ಕ್ರೋಡೀಕರಣ ಮಾಡುತ್ತಾರೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ. ರಾಜ್ಯದಲ್ಲೂ ಈ ಚುನಾವಣೆಯ ಬಳಿಕ ಕಾಂಗ್ರೆಸ್ ಉಳಿಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದ್ದು ರಾಜ್ಯದಲ್ಲಿ 130ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ, ವರುಣಾ, ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ವಿ.ಸೋಮಣ್ಣ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಆರ್. ಮಲ್ಲಿಕಾರ್ಜುನಪ್ಪ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಆರ್. ಸುಂದರ್, ಜಿಲ್ಲಾ ಉಪಾಧ್ಯಕ್ಷ, ಆರ್, ಬಾಲರಾಜು, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಎ. ಆರ್. ಬಾಬು, ಮಂಡಲ ಅಧ್ಯಕ್ಷ ಬಸವಣ್ಣ, ಮುಖಂಡ ಬಸವಪುರ ರಾಜಶೇಖರ್ ಇದ್ದರು.