ಮೊಟ್ಟೆ ಎಸೆತ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ
Team Udayavani, Aug 21, 2022, 2:51 PM IST
ಗುಂಡ್ಲುಪೇಟೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವ ಕ್ರಮ ಖಂಡಿಸಿ ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಿಂದ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ ಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಜಾಥಾ ಹೊರಟ ಕಾಂಗ್ರೆಸ್ ಕಾರ್ಯಕರ್ತರು ಎಂಡಿಸಿಸಿ ಬ್ಯಾಂಕ್ ಮುಂಭಾಗ ಮಾನವ ಸರಪಳಿ ನಿರ್ಮಿಸಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ ನಂತರ ತಾಲೂಕು ಕಚೇರಿ ಬಳಿ ಪ್ರತಿಭಟನಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಎಚ್. ಎಂ.ಗಣೇಶಪ್ರಸಾದ್ ಮಾತನಾಡಿ, ಗೃಹ ಸಚಿವರ ಮನೆಗೆ ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದ್ದಾರೆ. ಸಚಿವರಿಗೆ ಭದ್ರತೆ ಇಲ್ಲದ ಮೇಲೆ ಇನ್ನು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯಗೆ ಭದ್ರತೆ ಕೊಡಲು ಹೇಗೆ ಸಾಧ್ಯ. ಹೀನಾಯ ಪರಿಸ್ಥಿತಿಯಲ್ಲಿ ಸರ್ಕಾರವಿದ್ದು, ನ್ಯಾಯ ಯಾರನ್ನ ಕೇಳಬೇಕು ಎಂಬ ಪ್ರಶ್ನೆ ಎದ್ದಿದೆ.
ಬಿಜೆಪಿಯಿಂದ ಕೀಳುಮಟ್ಟದ ರಾಜಕೀಯ: ದಾವಣಗೆರೆಯಲ್ಲಿ ಸಿದ್ದರಾಮೋತ್ಸದಲ್ಲಿ ಸೇರಿದ ಜನರನ್ನು ನೋಡಿ ಬಿಜೆಪಿಯವರಿಗೆ ನೀರಿನಿಂದ ತೆಗೆದ ಮೀನಿನ ಪರಿಸ್ಥಿತಿಯಾಗಿದೆ. ಇದರಿಂದ ಸಾಯಲು ಆಗದೆ ಬದುಕಲು ಸಾಧ್ಯವಿಲ್ಲದಂತಾಗಿರುವ ಕಾರಣ ಅಸೂಯೆಯಿಂದ ಸಿದ್ದರಾಮಯ್ಯ ಮೇಲೆ ಕಾರ್ಯ ಕರ್ತರನ್ನು ಬಿಟ್ಟು ದಾಳಿ ನಡೆಸಲು ಮುಂದಾಗಿದ್ದಾರೆ. ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಗ್ಗುವುದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರಲ್ಲಿ ಪ್ರಮುಖರಾದ ಗಾಂಧಿಜೀಯವರನ್ನು ಬಿಟ್ಟು ಸಾರ್ವಕರ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಜೆಪಿಯವರು ಬಿಂಬಿಸುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಬೆದರಿಕೆಗಳಿಗೆ ಕಾಂಗ್ರೆಸ್ ಬಗಲ್ಲ: ಸಿದ್ದರಾಮಯ್ಯ ಜನಪ್ರಿಯತೆ ಸಹಿಸಲಾಗದೆ ಬಿಜೆಪಿಯಲ್ಲಿ ಮೂಲೆ ಗುಂಪು ಮಾಡಿದ್ದ ಬಿ.ಎಸ್.ಯಡಿಯೂರಪ್ಪ ಅವರಿಗೆ ಇದೀಗ ಕೇಂದ್ರೀಯ ಸ್ಥಾನಮಾನ ನೀಡಿದ್ದಾರೆ. ಇದು ಕೇವಲ ಅಧಿಕಾರದ ದಾಹಕ್ಕಾಗಿಯೇ ಹೊರತು ಜನರ ಶ್ರೇಯೋಭಿವೃದ್ಧಿಗಲ್ಲ. ಈಗಾಗಲೆ ಬಿಜೆಪಿ ಪಕ್ಷ ಹೀನಾಯ ಪರಿಸ್ಥಿತಿ ತಲಿಪಿದ್ದು, 2023ರಲ್ಲಿ ಸೋಲು ಖಚಿತ ಎಂಬುದನ್ನು ಮನಗಂಡು ವಿವಿಧ ರೀತಿಯ ಕಾರ್ಯತಂತ್ರಗಳನ್ನು ರೂಪಿಸಿ ಅದರಲ್ಲೂ ವಿಫಲರಾಗುತ್ತಿದ್ದಾರೆ. ಶಾಸಕ ಬೊಪ್ಪಯ್ಯ ಕೊಡಗಿಗೆ ಕಾಂಗ್ರೆಸ್ನವರು ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಇಂಥ ಬೆದರಿಗಳಿಗೆ ಬಗುವುದಿಲ್ಲ ಎಂದು ಟಾಂಗ್ ನೀಡಿದರು. ಮಾಜಿ ಸಂಸದ ಎ.ಸಿದ್ದರಾಜು ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಹರಾಜಕತೆ ಉತ್ಪತ್ತಿಯಾಗಿದ್ದು, ಕೊಡಗಿನಲ್ಲಿ ಬಿಜೆಪಿ ಹಾಗು ಆರ್ಎಸ್ಎಸ್ ಕಾರ್ಯಕರ್ತರು ಗುಂಡಾತನ ತೋರಿದ್ದಾರೆ. ಇದು ಹೇಡಿತನದ ಲಕ್ಷಣವಾಗಿದೆ. ಕಾಂಗ್ರೆಸ್ ಕೇವಲ ಅಧಿಕಾರ ಅನುಭವಿಸಲು ಬಂದ ಪಕ್ಷವಲ್ಲ. ಸ್ವಾತಂತ್ರ್ಯಕ್ಕೆ ಹೋರಾಟಕ್ಕೆ ತನ್ನದೆಯಾದ ಶ್ರಮಿಸಿದ್ದಾರೆ. ನೆಹರು ದೇಶದ ಪ್ರಥಮ ಪ್ರಧಾನ ಮಂತ್ರಿಯಾಗಿ ದೇಶಕ್ಕೆ ಅಡಿಗಲ್ಲು ಹಾಕಿ, ಪಂಚವಾರ್ಷಿಕ ಯೋಜನೆ ಮೂಲಕ ದೇಶದ ಅಭಿವೃದ್ಧಿಯ ದಿಕ್ಕು ಬದಲಾಯಿಸಿದ್ದಾರೆ ಎಂದರು.
ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ನಂಜುಂಡಪ್ರಸಾದ್, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್, ಪುರಸಭೆ ಸದಸ್ಯರಾದ ಎನ್.ಕುಮಾರ್, ಶ್ರೀನಿವಾ ಸದ ಕಣ್ಣಪ್ಪ, ಮಹಮ್ಮದ್ ಇಲಿಯಾಸ್, ಅಣ್ಣಯ್ಯಸ್ವಾಮಿ, ಎಪಿಎಂಸಿ ನಿರ್ದೇಶಕ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್, ಮುನಿರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಶಿವನಾಗಪ್ಪ, ತಾಪಂ ಮಾಜಿ ಅಧ್ಯಕ್ಷ ನಟೇಶ್, ಕೆಂಪರಾಜು, ಎಚ್.ಎಂ.ಬಸವರಾಜು, ಬಂಗಾರನಾಯಕ, ಕುಮಾರಸ್ವಾಮಿ, ರಾಜಶೇಖರ್ ಜತ್ತಿ, ಕಾಂಗ್ರೆಸ್ ಮಾಧ್ಯಮ ವಕ್ತಾರರ ಹಾಗೂ ಭೀಮನಬೀಡು ಗ್ರಾಪಂ ಅಧ್ಯಕ್ಷ ಬಿ.ಜಿ.ಶಿವಕುಮಾರ್, ಗೋಪಾಲಪುರ ಲೋಕೇಶ್, ಕಾರ್ಗಳ್ಳಿ ಸುರೇಶ್, ಜಯಂತಿ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್, ಯೂತ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್, ಟೌನ್ ಅಧ್ಯಕ್ಷ ಅರುಣ್, ಗುರುವಿನಪುರ ಚಂದ್ರು, ಅಂಕಹಳ್ಳಿ ಮಹೇಂದ್ರ, ಬಿ.ಎಂ.ಮಂಜಪ್ಪ, ಸುನಿಲ್ ಇದ್ದರು.