ಹೋಬಳಿ ಕೇಂದ್ರಗಳಲ್ಲಿ ಪ್ರತಿವರ್ಷ ಆರೋಗ್ಯ ಶಿಬಿರ
Team Udayavani, Mar 26, 2017, 4:48 PM IST
ಕೊಳ್ಳೇಗಾಲ: ಮುಂದಿನ ವರ್ಷದಿಂದ ಹೋ ಬಳಿ ಕೇಂದ್ರಗಳಲ್ಲಿ ಮಾಜಿ ಸಚಿವ ದಿವಂಗತ ಜಿ.ರಾಜೂಗೌಡರ ಪುಣ್ಯ ತಿಥಿ ಅಂಗವಾಗಿ ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುವುದು ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.
ತಾಲೂಕಿನ ದೊಡ್ಡಿಂದವಾಡಿ ಜಿ.ವಿ.ಗೌಡ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸೊಸೈಟಿ ರೋಟರಿ ಮಿಡ್ ಟೌನ್ ಸಂಸ್ಥೆ ಹಾಗೂ ದಿವಂಗತ ಜಿ.ರಾಜೂಗೌಡ ಅಭಿಮಾನಿ ಬಳಗದ ಸಂಯುಕ್ತ ಆಶ್ರಯದಲ್ಲಿ ದಿ.ಜಿ.ರಾಜೂಗೌಡರ 13ನೇ ವರ್ಷದ ಪುಣ್ಯ ತಿಥಿ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಕಾಪಾಡುವ ಸಲುವಾಗಿ ಮುಂದಿನ ವರ್ಷದಿಂದ ಹೋಬಳಿ ಕೇಂದ್ರಗಳಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಒದಗಿಸಿಕೊಡಲಾಗುವುದು. ಅಲ್ಲದೆ, ಈ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾದ ಫಲಾನುಭವಿಗಳಿಗೆ ಜಿಲ್ಲಾ ಆಸ್ಪತ್ರೆಯಿಂದ ಉಚಿತ ಶಸ್ತ್ರ ಚಿಕಿತ್ಸಾ ಭಾಗ್ಯ ಕೊಡಿಸುವುದಾಗಿ ತಿಳಿಸಿದರು.
ಶಿಬಿರದಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ಶಿಬಿರಾರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡಿದ್ದು ಅದರಲ್ಲಿ 38 ಫಲಾನುಭವಿಗಳನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಗಿದೆ. ಎಲ್ಲರಿಗೂ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು.
ನಂತರ ಜಿಪಂ ಉಪಾಧ್ಯಕ್ಷ ಬಸವರಾಜು ಮಾತನಾಡಿ, ದಿವಂಗತ ಮಾಜಿ ಸಚಿವ ದಿವಂಗತ ಜಿ.ರಾಜೂಗೌಡರ ಪರಿಶ್ರಮವೇ ಚಾ.ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮತ್ತು ಹನೂರನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಸಾಧ್ಯವಾಯಿತೆಂದು ತಿಳಿಸಿದರು. ರಾಜೂಗೌಡರು ಅನಾರೋಗ್ಯದ ನಡುವೆಯೂ ಕ್ಷೇತ್ರ ಮತ್ತು ಜಿಲ್ಲಾ ಅಭಿವೃದ್ಧಿಗೆ ಅಪಾರ ಶ್ರಮವಹಿಸಿದ ಪರಿಣಾಮ ಇಂದು ಜಿಲ್ಲಾ ಕೇಂದ್ರವು ವಿವಿಧ ಇಲಾಖೆಯಿಂದ ಅಭಿವೃದ್ಧಿಯಾಗಿದೆ ಎಂದರು.
ಸಂಘ ಅಸ್ತಿತ್ವಕ್ಕೆ: ದಿವಂಗತ ಜಿ. ರಾಜೂಗೌಡರ 13ನೇ ವರ್ಷದ ಪುಣ್ಯತಿಥಿಯ ಅಂಗವಾಗಿ ತಾಲೂಕು ದಿವಂಗತ ಜಿ.ರಾಜೂಗೌಡ ಅಭಿಮಾನಿ ಬಳಗ ಅಸ್ತಿತ್ವಕ್ಕೆ ಬಂದಿದೆ. ಇದರ ಪ್ರಥಮ ದಿನದಂದೆ 500ಕ್ಕೂ ಹೆಚ್ಚು ಜನರು ಸದಸ್ಯತ್ವ ನೋಂದಾಣಿ ಮಾಡಿಸಿಕೊಂಡಿದ್ದು, ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸದಸ್ಯತ್ವ ನೋಂದಣಿ ಮಾಡಿ ನಂತರ ಸಂಘದ ಪದಾಧಿಕಾರಿಗಳ ಆಯ್ಕೆ ಮಾಡಲಾಗುವುದು ಎಂದು ನರೇಂದ್ರ ಅವರ ಪುತ್ರ ನವನವಿತ್ಗೌಡ ತಿಳಿಸಿದರು.
6 ಹಸುಗಳ ವಿತರಣೆ: ಕಾಮಧೇನು ಯೋಜನಡಿಯಲ್ಲಿ 6 ವಿಧವೆಯರಿಗೆ ಸುಮಾರು 2 ಲಕ್ಷ ರೂ. ವೆಚ್ಚದ 6 ಹಸುಗಳನ್ನು ಬೆಂಗಳೂರಿನ ಹೈಗ್ರೌಂಡ್ ಅಧ್ಯಕ್ಷ ರಾಮಚಂದ್ರ ವಿತರಿಸಿ ಮಾತನಾಡಿ, ಹಸುಗಳು ಕರುಗಳಿಗೆ ಜನ್ಮ ನೀಡಿದಾಗ ಅಂತಹ ಕರುಗಳನ್ನು ಸಂಸ್ಥೆಗೆ ಧಾನವಾಗಿ ನೀಡಿ. ಈ ಕರುಗಳನ್ನು ಬೆಳೆಸಿದ ಬಳಿಕ ಮತ್ತಷ್ಟು ವಿಧವೆಯರಿಗೆ ವಿತರಣೆ ಮಾಡಲಾಗುವುದು. ಇದುವರಗೆ ರಾಜ್ಯಾದ್ಯಂತ 4 ಸಾವಿರ ಹಸುಗಳನ್ನು ವಿಧವೆಯರಿಗೆ ವಿತರಿಸಲಾಗಿದೆ ಎಂದರು.
ಶಿಬಿರದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ಡಾ.ನಾಗಾರ್ಜುನ್ ಬೆಂಗಳೂರಿನ ಹೈಗ್ರೌಂಡ್ ಕಾರ್ಯದರ್ಶಿ ಅರವಿಂದ ನಾಯ್ಡು, ತಾಪಂ ಅಧ್ಯಕ್ಷ ರಾಜು ಜಿಪಂ ಸದಸ್ಯರಾದ ಶಿವಮ್ಮ, ಮರಗದಮಣಿ, ಲೇಖಾ, ದೊಡ್ಡಿಂದವಾಡಿ ಗ್ರಾಪಂ ಅಧ್ಯಕ್ಷ ಲೊಕೇಶ್, ರೋಟರಿ ಮಿಡ್ ಟೌನ್ ಅಧ್ಯಕ್ಷ ಮಹೇಶ್ ಸೇರಿದಂತೆ ಇತರರು ಇದ್ದರು.