ಸೇನೆ ಸೇರ ಬಯಸುವ ಯುವಜನತೆಗೆ ಉಚಿತ ತರಬೇತಿ
ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ.
Team Udayavani, Jul 28, 2022, 6:17 PM IST
ಪಿರಿಯಾಪಟ್ಟಣ: ಭಾರತೀಯ ಸೇನೆ ಹಾಗೂ ಪೊಲೀಸ್ ಇಲಾಖೆಗೆ ಸೇರ ಬಯಸುವ ನಿರುದ್ಯೋಗಿ ಯುವಕರಿಗೆ ಉಚಿತವಾಗಿ ತರಬೇತಿ ನೀಡುವ ಕಾರ್ಯದಲ್ಲಿ ಭುತನಹಳ್ಳಿ ಗ್ರಾಮದ ಮಾಜಿ ಸೈನಿಕ ಬಿ.ಸಿ.ತಮ್ಮಣೇಗೌಡ ಹಾಗೂ ರಾವಂದೂರು ಶಿವು ತಾಲೂಕಿಗೆ ಮಾದರಿಯಾಗಿದ್ದಾರೆ.
ಬಿ.ಸಿ.ತಮ್ಮಣೇಗೌಡ ಹಾಗೂ ರಾವಂದೂರು ಶಿವು ಮಾಜಿ ಸೈನಿಕರಾಗಿದ್ದು, ಇವರು ಸುಮಾರು 17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ತಮ್ಮ ಖಾಸಗಿ ಬದುಕಿನ ಒತ್ತಡದ ನಡುವೆಯೂ ತಮ್ಮ ವಿಶಿಷ್ಟ ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಆ ಮೂಲಕ ಭಾರತೀಯ ಸೇನೆ ಹಾಗೂ ಪೋಲಿಸ್ ಇಲಾಖೆಗೆ ಸೇರಬಯಸುವ ತಾಲೂಕಿನ ಯುವಕರಿಗೆ ತರಬೇತಿ ನೀಡುವ ಮೂಲಕ ಯುವಕರ ಪಾಲಿಗೆ ಆದರ್ಶಪ್ರಾಯವಾಗಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ನೂರಾರು ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಪಿರಿಯಾಪಟ್ಟಣ ಹರವೆ ಮಲ್ಲರಾಜಪಟ್ಟಣದಲ್ಲಿರುವ ತಾಲೂಕು ಕ್ರೀಡಾಂಗಣ, ರಾವಂದೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ, ಬೆಟ್ಟದಪುರದ ಶಾಲಾ-ಕಾಲೇಜು ಆವರಣ
ಗಳಲ್ಲಿ ಯುವಕರಿಗೆ ಉಚಿತವಾಗಿ ಸೇನೆ ಮತ್ತು ಪೊಲೀಸ್ ಇಲಾಖೆಗೆ ಸೇರ ಬಯಸುವ ಅಭ್ಯರ್ಥಿಗಳಿಗೆ ಉಚಿತವಾಗಿ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ.
ರಾವಂ ದೂರಿ ನಲ್ಲಿ ಈಗಾಗಲೇ ಆರು ತಿಂಗಳಿನಿಂದ ಸುಮಾರು 60 ರಿಂದ 70 ಯುವಕ ಹಾಗೂ ಯುವತಿಯರು ಈ ತರಬೇತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೊತೆಗೆ ಇವರು ಪಿರಿಯಾಪಟ್ಟಣ ಹಾಗೂ ಬೆಟ್ಟದಪುರ ಎರಡು ಕೇಂದ್ರಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಮಾರು 17 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದೇನೆ. ಈಗಲೂ ದೇಶ ಸೇವೆಯನ್ನು ನಾನು ನಿಲ್ಲಿಸುವುದಿಲ್ಲ. ಸೇನೆಗೆ ಸೇರ ಬಯಸುವ ಆಸಕ್ತ ಯುವಕರಿಗೆ ತರಬೇತಿ ನೀಡುತ್ತಿದ್ದೇನೆ. ನಮಗೆ ಸಾರ್ವಜನಿಕರು ಬೆನ್ನೆಲುಬಾಗಿ ನಿಂತರೆ ನಮ್ಮ ತಾಲೂಕಿನ ಯುವಜನತೆ ಎಷ್ಟೇ ಪ್ರಮಾಣದಲ್ಲಿ ತರಬೇತಿಗೆ ಬಂದರೂ ಅವರಿಗೆ ತರಬೇತಿಯನ್ನು ನೀಡುವ ಮೂಲಕ ಅವರನ್ನು ದೇಶ ಸೇವೆಗೆ ಪ್ರೇರೇಪಿಸುತ್ತೇವೆ.
● ರಾವಂದೂರು ಶಿವು, ಮಾಜಿ ಸೈನಿಕ
ಪಿರಿಯಾಪಟ್ಟಣದ ತಾಲೂಕು ಆಡಳಿತ, ಜನಪ್ರತಿನಿಧಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ತಾಲೂಕಿನಲ್ಲಿರುವ ನಿರುದ್ಯೋಗಿ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮೊಡನೆ ಸಹಕರಿಸಿದರೆ ತಾಲೂಕಿನ ನಿರುದ್ಯೋಗಿ ಯುವಕ, ಯುವತಿಯರಿಗೆ ಸೇನೆ ಸೇನೆ ಹಾಗೂ ಪೊಲೀಸ್ ಇಲಾಖೆ ಸೇರಲು ಅಗತ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ಸದಾ ಸಿದ್ಧರಿದ್ದೇವೆ.
● ಬಿ.ಸಿ.ತಮ್ಮಣ್ಣೇಗೌಡ, ಮಾಜಿ ಸೈನಿಕ, ಭೂತನಹಳ್ಳಿ
ಪಿ.ಎನ್.ದೇವೇಗೌಡ ಪಿರಿಯಾಪಟ್ಟಣ