ಭಾರತ್ ಬಂದ್ ಗೆ ಚಾಮರಾಜನಗರದಲ್ಲಿ ಉತ್ತಮ ಪ್ರತಿಕ್ರಿಯೆ: ಬಸ್ ತಡೆದ ರೈತರು
Team Udayavani, Dec 8, 2020, 11:41 AM IST
ಚಾಮರಾಜನಗರ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಅಂಗಡಿ ಮುಂಗಟ್ಟುಗಳು ಹೊಟೇಲ್ ಗಳು ಬಂದ್ ಆಗಿದೆ. ಬೆಳಿಗ್ಗೆ ತೆರೆದಿದ್ದ ಕೆಲವು ಅಂಗಡಿ ಮುಂಗಟ್ಟುಗಳನ್ನು ರೈತರು ಮುಚ್ಚಿಸಿದರು. ಬಸ್ ನಿಲ್ದಾಣದ ಮುಂದೆ ರಸ್ತೆಯಲ್ಲೇ ಕುಳಿತ ರೈತರು ಬಸ್ ಸಂಚಾರಕ್ಕೆ ತಡೆಯೊಡ್ಡಿದರು. ಕೆಎಸ್ಆರ್ ಟಿಸಿ ಹಾಗು ಖಾಸಗಿ ಬಸ್ ಸಂಚಾರ ಸ್ಥಗಿತವಾಗಿದೆ. ಸೋಮವಾರಪೇಟೆ ಬಳಿ ಟೈರ್ ಗೆ ಬೆಂಕಿ ಹಚ್ಚಿ ಹೆದ್ದಾರಿ ತಡೆ ಮಾಡಲಾಯಿತು.
ಚಾಮರಾಜನಗರದಲ್ಲಿ ಸಂಚಾರಕ್ಕೆ ಮುಂದಾದ ಕೆಎಸ್ಆರ್ ಟಿಸಿ ಬಸ್ ನ್ನು ರೈತರು ತಡೆದರು. ಕೊಯಮತ್ತೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಬಸ್ ನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಬಸ್ ಕೆಎಸ್ಆರ್ ಟಿಸಿ ನಿಲ್ದಾಣಕ್ಕೆ ವಾಪಸ್ ತೆರಳಬೇಕಾಯಿತು.
ಇದನ್ನೂ ಓದಿ:ಭಾರತ್ ಬಂದ್ : ಹಾವೇರಿ, ರಾಮನಗರ, ದಾವಣಗೆರೆಯಲ್ಲಿ ನೀರಸ ಪ್ರತಿಕ್ರೀಯೆ
ಬಸ್ ಸಂಚಾರಕ್ಕೆ ರೈತರಿಂದ ತಡೆಯಾದ ಹಿನ್ನಲೆಯಲ್ಲಿ ಪ್ರಯಾಣಿಕರ ಪರದಾಟ ನಡೆಸುವಂತಾಯಿತು. ಮೈಸೂರಿನ ಜಯದೇವ ಆಸ್ಪತ್ರೆಗೆ ಹೋಗಲು ಬಂದ ರೋಗಿಯನ್ನು ಪೊಲೀಸರು ತಮ್ಮ ಜೀಪ್ ನಲ್ಲಿ ಕರೆದೊಯ್ದ ಘಟನೆ ನಡೆಯಿತು. ಬಂದ್ ವೇಳೆ ಮಾನವೀಯತೆ ಮೆರೆದ ಪಟ್ಟಣ ಠಾಣೆ ಪೊಲೀಸರ ಕ್ರಮಕ್ಕೆ ಶ್ಲಾಘನೆ ವ್ಯಕ್ತವಾಗಿದೆ.