ದುಶಾಲ್.ಆರ್.ಶ್ರೀಹರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ
Team Udayavani, Apr 26, 2022, 2:56 PM IST
ಯಳಂದೂರು: ಕನ್ನಡ, ಇಂಗ್ಲೀಷ್, ವರ್ಣಮಾಲೆಯನ್ನು ಪಟಪಟನೆ ತನ್ನ ತೊದಲು ನುಡಿಯಲ್ಲೇ ನುಡಿಯುವ, ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರನ್ನು ತಪ್ಪಿಲ್ಲದಂತೆ ಹೇಳುವ, ವಾರದ ದಿನಗಳು, ಪದ್ಯಗಳು, ಕನ್ನಡ, ಇಂಗ್ಲಿಷ್, ಹಿಂದಿ ಅಂಕಿಗಳನ್ನು ತಪ್ಪಿಲ್ಲದೆ ಓದುವ ಎರಡು ವರ್ಷ ನಾಲ್ಕು ತಿಂಗಳ ಪೋರನಿಗೆ ಈ ಬಾರಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಗೌರವ ಲಭಿಸಿದೆ.
ದುಶಾಲ್ ಆರ್. ಶ್ರೀಹರಿ ಇರಸವಾಡಿ ಗ್ರಾಮದ ಆರ್.ರಂಗಸ್ವಾಮಿ ಹಾಗೂ ಎಂ.ಪಿ. ಪೂಜಾಂಕ ಅವರ ಪುತ್ರ. ಈತ ವಾರದ ದಿನಗಳು, 7 ಪದ್ಯಗಳು, ಆಂಗ್ಲ ಹಾಗೂ ಕನ್ನಡ ಭಾಷೆಯಲ್ಲಿ 8 ಗ್ರಹಗಳ ಹೆಸರು, ಕನ್ನಡ, ಹಿಂದಿ, ಇಂಗ್ಲಿಷ್ನಲ್ಲಿ ಸಂಖ್ಯೆಗಳು, ಜ್ಞಾನ ಪೀಠ ಪುಸರಸ್ಕೃತ ಕವಿಗಳ ಹೆಸರುಗಳು, ತಿಂಗಳುಗಳ ಹೆಸರು, ಕನ್ನಡ, ಇಂಗ್ಲೀಷ್ ವರ್ಣಮಾಲೆ, 11 ಹೂವುಗಳ ಹೆಸರು, 11 ಬಣ್ಣಗಳು, 11 ಪಕ್ಷಿಗಳು, 21 ವಾಹನಗಳ ಹೆಸರು 72 ಸಾಮಾನ್ಯ ವಸ್ತುಗಳ ಹೆಸರು, 29 ದೇಹದ ವಿವಿಧ ಭಾಗಗಳನ್ನು ಗುರುತಿಸಿ ಅದರ ಹೆಸರನ್ನು ಪಟಪಟನೆ ಈತ ತಪ್ಪಿಲ್ಲದೆ ಹೇಳುವ ಪ್ರತಿಭೆಯನ್ನು ಹೊಂದಿದ್ದಾನೆ.
ಈತನ ಅಸಾಧಾರಣ ಪ್ರತಿಭೆಯನ್ನು ಗುರತಿಸಿರುವ ಐಬಿಆರ್ನವರು ಈತನಿಗೆ ಮಾರ್ಚ್ ತಿಂಗಳಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಈತನ ಹೆಸರನ್ನು ಸೇರಿಸಿದ್ದಾರೆ.