ಕೆರೆಗಳ ಅವ್ಯವಸ್ಥೆ ಸರಿಪಡಿಸಲು ಶೀಘ್ರದಲ್ಲೇ ಸಭೆ
Team Udayavani, Sep 13, 2020, 3:04 PM IST
ಯಳಂದೂರು: ತಾಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾ ಉಸ್ತುವಾರಿ ಸುರೇಶ್ಕುಮಾರ್ ಶನಿವಾರ ಭೇಟಿ ನೀಡಿ, ಕೆರೆಗಳನ್ನು ವೀಕ್ಷಿಸಿದರು.
ತಾಲೂಕಿನ ಅಗರ, ಮದ್ದೂರು, ಕೆಸ್ತೂರು, ಯರಿಯೂರು ಹಾಗೂ ಯಳಂದೂರು ಕೆರೆಗಳನ್ನು ಸಚಿವರು ವೀಕ್ಷಿಸುವಾಗರೈತರು ದೂರುಗಳ ಸುರಿಮಳೆಗೈದರು. ಪ್ರತಿ ಗ್ರಾಮದಲ್ಲೂ ಒಂದೊಂದು ಕೆರೆ ಇದೆ. ಆದರೆ, ಕಬಿನಿ ಕಾಲುವೆಯಿಂದ ಎಲ್ಲಾಕೆರೆಗಳಿಗೂ ನೀರು ತುಂಬುವುದಿಲ್ಲ. ಮಳೆ ನೀರು ಹರಿಯುವ ಕಾಲುವೆಗಳು ಮುಚ್ಚಿ ಹೋಗಿವೆ. ಕೆರೆಗಳಲ್ಲಿ ಹೂಳು ಸಂಗ್ರಹವಾಗಿದೆ. ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ ಎಂದು ರೈತರು ಅಳಲು ತೋಡಿಕೊಂಡರು. ಕೆಸ್ತೂರು ಕೆರೆಯಲ್ಲಿ ನೀರು ತುಂಬಿದರೆ ಇದರ ಬಳಿ ಇರುವ ಜಮೀನುಗಳಿಗೆ ನೀರು ನುಗ್ಗುತ್ತದೆ. ಕೆರೆಯ ಏರಿಗಳನ್ನು ಎತ್ತರಿಸಿಲ್ಲ. ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯುವುದಿಲ್ಲ. ಇದರ ಹೂಳು ತೆಗೆದಿಲ್ಲ. ಕೆರೆಯಲ್ಲಿ ನೀರು ಸಂಗ್ರಹಿಸಿದರೆ ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗುವುದರಿಂದ ಹೂಳು ತೆಗೆಯಬೇಕು ಎಂದು ರೈತರು ತಿಳಿಸಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದ ಸಚಿವರು, ಈ ಎಲ್ಲಾ ಸಮಸ್ಯೆಗಳ ಸಂಬಂಧ ಶೀಘ್ರ ಅಧಿಕಾರಿಗಳ ಸಭೆ ನಡೆಸಲಾಗುವುದು. ಕೆರೆ, ಕಾಲುವೆಗಳ ಹೂಳು ತೆಗೆಸಲು ಕ್ರಮ ವಹಿಸಲಾಗುವುದು. ಅಲ್ಲದೇ ಎಲ್ಲಾ ಕೆರೆಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದರು. ಈ ವೇಳೆ ಶಾಸಕ ಎನ್. ಮಹೇಶ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ಜಿಪಂ ಸದಸ್ಯರಾದ ಜೆ. ಯೋಗೇಶ್, ರೈತ ಸಂಘದ ಕಾರ್ಯಕರ್ತರು, ಅಧಿಕಾರಿಗಳು ಹಾಜರಿದ್ದರು.
ಟೆಂಪೋದಲ್ಲಿ ಸಂಚರಿಸಿದ ಸಚಿವ : ಸಚಿವ ಸುರೇಶ್ ಕುಮಾರ್ ತಾಲೂಕಿನ ಗ್ರಾಮಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಪೊಲೀಸ್, ನೀರಾವರಿ, ಕಂದಾಯ, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರ 30ಕ್ಕೂ ಹೆಚ್ಚು ವಾಹನಗಳು ಹಿಂಬಾಲಿಸಿದ್ದರಿಂದ ಗ್ರಾಮೀಣಪ್ರದೇಶದಲ್ಲಿ ವಾಹನ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾಯಿತು. ಸಚಿವರು ಕೆರೆಗಳ ಪರಿಶೀಲನೆ ನಡೆಸಿ ವಾಪಸ್ ಆಗುವತನಕ ಸಾರ್ವಜನಿಕರ ವಾಹನಗಳು, ಎತ್ತಿನಗಾಡಿಗಳು, ಆಟೋಗಳು ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿನಿರ್ಮಾಣ ವಾಗಿತ್ತು. ಯಳಂದೂರು ಸಮೀಪಿಸುತ್ತಿದ್ದಂತೆಯೇ ತಮ್ಮ ಕಾರಿನಿಂದ ಇಳಿದ ಸಚಿವರು ಎಲ್ಲಾವಾಹನಗಳನ್ನು ಹೋಗಲು ಬಿಟ್ಟು ರೈತರು ಇದ್ದ ಟೆಂಪೋದಲ್ಲೇ ಕುಳಿತು ಇವರೊಂದಿಗೆ ಚರ್ಚಿಸುತ್ತ ಕೊಳ್ಳೇಗಾಲದತ್ತ ತಮ್ಮ ಪ್ರಯಾಣವನ್ನು ಬೆಳೆಸಿದರು.