ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಸಂಸ ಧರಣಿ
Team Udayavani, Dec 6, 2019, 1:23 PM IST
ಯಳಂದೂರು: ಗೋ ರಕ್ಷಣೆ ಕುರಿತು ಹಕ್ಕೊತ್ತಾಯದ ಪತ್ರಗಳನ್ನು ಶಾಲಾ ಮಕ್ಕಳಿಗೆ ಹಂಚಿದ ಶಿಕ್ಷಕರ ಮೇಲೆ ಕಾನೂನು ಕ್ರಮಕ್ಕೆ ವಿಳಂಬ ಮಾಡಬಾರದು. ಹಿಂದಿನ ಸಮಾಜ ಕಲ್ಯಾಣಾಧಿಕಾರಿ ಮೇಘಾ ಅವರು ಇಲಾಖೆಯಲ್ಲಿ ನಡೆಸಿರುವ ಭ್ರಷ್ಟಾಚಾರಗಳನ್ನು ತನಿಖೆ ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಗುರುವಾರ ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂಭಾಗ ಧರಣಿ ನಡೆಸಿದರು.
ಈ ವೇಳೆ ದಸಂಸ ಜಿಲ್ಲಾ ಸಂಚಾಲಕ ಸಿ.ರಾಜಣ್ಣ ಮಾತನಾಡಿ, 2017 ಡಿ.27ರಂದು ಗೋ ಸಂರಕ್ಷಣಾ ಕುರಿತು ಹಕ್ಕೊತ್ತಾಯ ಪತ್ರಗಳನ್ನು ಶಾಲಾ ಮಕ್ಕಳಿಗೆ ಹಂಚಿ ಪೋಷಕರಿಂದ ಸಹಿ ಪಡೆಯಲಾಗಿತ್ತು. ಈ ಆರೋಪದ ಮೇಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಶಿಕ್ಷಕರಾದ ಗುರುಮೂರ್ತಿ, ನಂಜುಂಡ ಸ್ವಾಮಿ, ಕಿರಣ್, ಶಿವಕುಮಾರ್, ಸರಸ್ವತಿ ವೀರಭದ್ರ ಸ್ವಾಮಿ, ಫಣೀಶ್ ಅವರ ಮೇಲೆ ತನಿಖೆ ನಡೆಸಿ ಪೂರ್ಣಗೊಂಡಿದ್ದರು ಕ್ರಮವಹಿಸಿಲ್ಲ ಎಂದರು.
11 ತಿಂಗಳಾದರೂ ವರದಿ ನೀಡಿಲ್ಲ: 2018 ಜ.16ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಸಿಇಒ ಮತ್ತು ಶಿಕ್ಷಣ ಇಲಾಖೆಯ ಡಿಡಿಪಿಐ ಹಾಗೂ ಬಿಇಒ ನೇತೃತ್ವದಲ್ಲಿ ದಸಂಸ ಕಾರ್ಯಕರ್ತರ ಸಭೆ ನಡೆಸಿ, ಪೊಲೀಸ್ ಇಲಾಖೆ ಮೂಲಕ ತನಿಖೆ ನಡೆಸಿ ವರದಿ ನೀಡಲು ಒಪ್ಪಲಾಗಿತ್ತು. ಇದರಂತೆ ಮಾ.21ರಂದು ಇವರು ತಪ್ಪಿತಸ್ಥರೆಂದು ವರದಿ ಸಲ್ಲಿಕೆಯಾಗಿದೆ. ಶಿಕ್ಷಣ ಇಲಾಖೆಯಿಂದ ತನಿಖೆ ನಡೆಸುವಂತೆ ಡಯಟ್ ಪ್ರಾಂಶುಪಾಲರನ್ನು ವಿಚಾರಣಾ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಇವರು 11 ತಿಂಗಳಾದರೂ ಇನ್ನೂ ವರದಿಯನ್ನು ನೀಡಿಲ್ಲ ಎಂದು ಹೇಳಿದರು.
ಫಲಾನುಭವಿಗಳಿಗೆ ಹಣ ವಿತರಿಸಿಲ್ಲ: ಹಿಂದಿನ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮೇಘಾ ಅವರ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ಮಂಜೂರು ಮಾಡಿಲ್ಲ. ಸರಳ ವಿವಾಹದ ಫಲಾನುಭವಿಗಳಿಗೆ ಹಣ ವಿತರಿಸಿಲ್ಲ. ಪರಿಹಾರ ಮಾರ್ಗ ತಿಳಿಸದೇ ವಂಚನೆ ಮಾಡಿದ್ದಾರೆ. ಕಳೆದ 6 ತಿಂಗಳ ಅವಧಿಯಲ್ಲಿ 30 ಲಕ್ಷ ರೂ. ಬಿಲ್ ಮಂಜೂರು ಮಾಡಿಸಿಕೊಂಡಿದ್ದಾರೆ. ಎಸ್ಸಿಎಸ್ಟಿ ದೌರ್ಜನ್ಯ ರಡೆ ಕಾಯ್ದೆ ಪ್ರಚಾರ ಸಭೆಗೆ 1 ಲಕ್ಷ ರೂ. ಬಿಲ್ ಪಾವತಿಸಿಕೊಂಡಿದ್ದಾರೆ. ಸ್ವಯಂ ಉದ್ಯೋಗಕ್ಕೆ ಟೆಂಡರ್ ಕರೆಯದೇ ತರಬೇತಿ ನೀಡಿ ವಂಚಿಸಿದ್ದಾರೆ. ಕಚೇರಿಗೆ ಪಿಠೊಪಕರಣ ಖರೀದಿಯಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.
ಸ್ಥಳಕ್ಕೆ ತಹಶೀಲ್ದಾರ್ ವರ್ಷಾ ಹಾಗೂ ತಾಪಂ ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್. ರಾಜು ಭೇಟಿ ನೀಡಿ ದೂರು ಆಲಿಸಿ ಈ ಬಗ್ಗೆ ತನಿಖೆ ಪೂರ್ಣಗೊಳಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ, ಇಲಾಖೆಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ದಸಂಸ ತಾಲೂಕು ಸಂಚಾಲಕ ಎನ್. ಚಂದ್ರಶೇಖರ್, ಕಂದಹಳ್ಳಿ ನಾರಾಯಣ, ಬಳೇಪೇಟೆ ಶಾಂತರಾಜು, ದೊರೆಸ್ವಾಮಿ, ಶಿವಕುಮಾರ್, ಹೊನ್ನೂರು ಸಿದ್ದರಾಜು, ಬಿ.ರವಿತೆಳ್, ಪಿ.ರಂಗಸ್ವಾಮಿ, ಶಂಕರಮೂರ್ತಿ, ಆರ್.ರಾಜೇಂದ್ರ, ಎನ್. ಮಲ್ಲರಾಜು, ಕೆಸ್ತೂರು ಬಸವರಾಜು, ನಂಜುಂಡ ಸ್ವಾಮಿ, ರೇಚಣ್ಣ, ನಿಂಗರಾಜು ಹಾಜರಿದ್ದರು.