ಸತತ ಮಳೆಯಿಂದ ಕೊಳೆಯುತ್ತಿರುವ ಸಾಂಬರ್ ಈರುಳ್ಳಿ
ಕೂಲಿಗೆ ಹೋಗಿದ್ದರು ಸಹ ಒಂದಿಷ್ಟು ಹಣ ಸಂಪಾದನೆ ಆಗುತ್ತಿತ್ತು
Team Udayavani, Jul 14, 2022, 3:46 PM IST
ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ 10 ದಿನದಿಂದಲೂ ಸತತವಾಗಿ ಮಳೆಯಾಗುತ್ತಿರುವ ಕಾರಣ ರೈತರು ಬೆಳೆದ ಸಾಂಬರ್ ಈರುಳ್ಳಿ ಜಮೀನಲ್ಲೆ ಕೊಳೆಯುವ ಪರಿಸ್ಥಿತಿ ಬಂದೊದಗಿದೆ. ಇದು ರೈತ ಕಣ್ಣಲ್ಲಿ ಕಣ್ಣೀರು ತರಿಸಿದೆ.
ಪೂರ್ವ ಮುಂಗಾರಿಗೂ ಮುಂಚೆ ಬೆಳೆದ ಈರುಳ್ಳಿ ಬೆಲದ ಇಲ್ಲದೆ ಅನೇಕ ರೈತರು ಈರುಳ್ಳಿಯನ್ನು ಕೀಳದೆ ಭೂಮಿಯಲ್ಲಿಯೇ ಬಿಟ್ಟರು. ಇದೀಗ ಮತ್ತೆ ಮುಂದೆ ಬೆಲೆ
ಸಿಗಬಹುದು ಎಂದು ಮುಂಗಾರು ಆರಂಭವಾ ಗುತ್ತಿದ್ದಂತೆ ಈರುಳ್ಳಿಯನ್ನು ಬಿತ್ತನೆ ಮಾಡಿದ್ದ ರೈತರಿಗೆ ಬೆಳೆ ಬರುವ ಹಂತದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ದೇವರಹಳ್ಳಿ, ಹಂಗಳ, ಗೋಪಾಲಪುರ ಮೊದಲಾದ ಗ್ರಾಮದಲ್ಲಿ ಈರುಳ್ಳಿ ಬೆಳೆ ಕೊಳೆತಿದೆ.
ಆತಂಕದಲ್ಲಿ ರೈತರು: ಈರುಳ್ಳಿ ಬಿತ್ತನೆ ಮಾಡುವ ಸಮಯದಲ್ಲಿ ಕ್ವಿಂಟಲ್ಗೆ ಸುಮಾರು 2500 ರಿಂದ 3000 ರೂ. ಹಣವನ್ನು ಕೊಟ್ಟು ಬಿತ್ತನೆ ತಂದಿದ್ದಾರೆ. ಜೊತೆಗೆ ಒಂದು ಎಕರೆಗೆ ಸುಮಾರು 70 ರಿಂದ 80 ಸಾವಿರ ರೂಪಾಯಿ ವರೆಗೂ ಖರ್ಚಾಗಿದೆ. ಇದೀಗ ಬೆಳೆ ಕೊಳೆಯುವ ಹಂತದಲ್ಲಿರುವುದು ರೈತರನ್ನು ಆತಂಕ್ಕೀಡು ಮಾಡಿದೆ.
ಮಳೆಯಿಂದ ಬೆಲೆ ಕುಸಿತ: ಆರಂಭದಲ್ಲಿ ಕ್ವಿಂಟಲ್ ಈರುಳ್ಳಿಗೆ 4 ಸಾವಿರವಿತ್ತು. ಇದೀಗ ಸತತವಾಗಿ ಮಳೆಯಾಗುತ್ತಿರುವ ಕಾರಣ ಕೇಳುವವರು, ಕೊಳ್ಳುವವರು ಇಲ್ಲದ ಕಾರಣ 800ರಿಂದ 1000 ರೂ.ಗೆ ಇಳಿಕೆ ಕಂಡಿದೆ. ಇದರಿಂದ ಹಾಕಿದ ಬಂಡವಾಳವನ್ನು ಸಹ ತೆಗೆಯಲು ಆಗುವುದಿಲ್ಲ. ದುಡಿದ ಕೂಲಿ ಹಣವು ಆಗುವುದಿಲ್ಲ. ಕೂಲಿಗೆ ಹೋಗಿದ್ದರು ಸಹ ಒಂದಿಷ್ಟು ಹಣ ಸಂಪಾದನೆ ಆಗುತ್ತಿತ್ತು ಎಂದು ರೈತರೊಬ್ಬರು ಅಳಲು ತೋಡಿಕೊಂಡರು.
ಕೃಷಿಯನ್ನೆ ನಂಬಿ ಜೀವನ ಮಾಡುವ ರೈತರ ಬದುಕು ಚಿಂತಾಜನಕವಾಗುವಂತಾಗಿದೆ. ಬೆಳೆದ ಬೆಳೆದ ಬೆಲೆಯು ಸಿಗುತ್ತಿಲ್ಲ, ಜೊತೆಗೆ ವಾತಾವರಣದ ಏರುಪೇರಿನಿಂದಾಗಿ ಬೆಳೆ ಕೊಳೆಯುತ್ತಿದೆ. ಪರಿಸರ ವಿಕೋಪದಿಂದ ಬೆಳೆ ನಾಶವಾಗಿದೆ ಎಂದು ಪರಿಗಣಿಸಿ ಬೆಳೆ ರೈತರಿಗೆ ಇಲಾಖೆಯ ವತಿಯಿಂದ ಸೂಕ್ತ ಪರಿಹಾರ ಕೊಡಬೇಕು ಎಂದು ದೇವರಹಳ್ಳಿ ಗ್ರಾಮದ ಪ್ರಕಾಶ್ ಒತ್ತಾಯಿಸಿದರು.
ಸಾಲ ಮಾಡಿ ಈರುಳ್ಳಿ ಬೆಳೆ ಬೆಳೆಯಲಾಗಿತ್ತು. ಇದೀಗ ನಿರಂತರ ಮಳೆಯಾಗುತ್ತಿರುವ ಕಾರಣ ಜಮೀನಿನಲ್ಲೆ ಕೊಳೆಯುತ್ತಿದೆ. ಇದರಿಂದ ನಷ್ಟದ ಭೀತಿ ಎದುರಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಬೇಕಾಗುತ್ತದೆ.
● ಮಂಜುನಾಥ್, ಈರುಳ್ಳಿ ಬೆಳೆದ ರೈತ
ಕೇಂದ್ರ ಸರ್ಕಾರದ ಎಸ್ಡಿಆರ್ಎಫ್ ಹಾಗೂ ಎನ್ಡಿಆರ್ಎಫ್ ಅಡಿಯಲ್ಲಿ ಪರಿಹಾರಕ್ಕೆ ಅವಕಾಶವಿದ್ದು, ಕಂದಾಯ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಜಂಟಿಯಾಗಿ ಪರಿಶೀಲನೆ ಮಾಡಿ ವರದಿ ಸಲ್ಲಿಸಿದರೆ ಒಂದು ಎಕರೆಗೆ 5400 ರೂ. ಪರಿಹಾರ ನೀಡಬಹುದು. ಗುರುವಾರದಿಂದಲೇ ರೈತ ಜಮೀನುಗಳಲ್ಲಿ ಸ್ಥಳ ಪರಿಶೀಲನೆ ಮಾಡಿ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು.
● ರಾಜು, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಗುಂಡ್ಲುಪೇಟೆ
●ಬಸವರಾಜು ಎಸ್.ಹಂಗಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap ಗುಂಡ್ಲುಪೇಟೆ: ಅಪರಿಚಿತ ವಾಹನ ಡಿಕ್ಕಿ; ಬೈಕ್ ಸವಾರ ಸಾವು
ಮತಗಟ್ಟೆ ಧ್ವಂಸ: ಕಾಡಲ್ಲಿ ಅವಿತಿದ್ದವರಿಗೆ ಧೈರ್ಯ ತುಂಬಿ ಗ್ರಾಮಕ್ಕೆ ಕರೆತಂದ ಅಧಿಕಾರಿಗಳು
ಮಕ್ಕಳಿಗೆ ಲಸಿಕೆ: ಚಿಕ್ಕಬಳ್ಳಾಪುರ ಪ್ರಥಮ, ಚಾಮರಾಜನಗರ ದ್ವಿತೀಯ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ