ಸ್ಮಾರಕ ಅಭಿವೃದ್ಧಿಗೆ ಅಗತ್ಯ ಕ್ರಮ: ಸುರೇಶ್ ಕುಮಾರ್
Team Udayavani, Aug 15, 2020, 12:43 PM IST
ಹನೂರು: ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರಾಣತೆತ್ತ ಸ್ಥಳದಲ್ಲಿ ನಿರ್ಮಿಸಿರುವ ಸ್ಮಾರಕವನ್ನು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದರು.
ತಾಲೂಕಿನ ಮಿಣ್ಯಂ ಸಮೀಪದ ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಹುತಾತ್ಮರ ಸ್ಮಾರಕಕ್ಕೆ ಶುಕ್ರವಾರ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕಾಡುಗಳ್ಳ ವೀರಪ್ಪನ್ ಕಳೆದ 4-5 ದಶಕದ ಹಿಂದೆ ಪೊಲೀಸ್, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದನು. ಈ ದಿಸೆಯಲ್ಲಿ ವೀರಪ್ಪನ್ ಹಿಡಿಯಲು ಪೊಲೀಸ್ ಇಲಾಖೆ ಮುಂದಾಗಿತ್ತು. 1992 ಆ.14ರಂದು ಅಂದಿನ ಮೈಸೂರು ಎಸ್ಐ ಟಿ.ಹರಿಕೃಷ್ಣ, ಪಿಎಸ್ಐ ಶಕೀಲ್ ಆಹಮದ್ ತಂಡ ಮಿಣ್ಯಂ ಸಮೀಪದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಇರುವುದನ್ನು ಖಚಿತಪಡಿಸಿಕೊಂಡು ಬಂಧನಕ್ಕಾಗಿ ಬಲೆ ಬೀಸಿದ್ದರು. ಆದರೆ, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನು ಹತ್ಯೆ ಮಾಡಲಾಯಿತು. ಇದು ಶೋಕನೀಯ ವಿಚಾರ. ಈ ದಿಸೆಯಲ್ಲಿ ಹುತಾತ್ಮರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದರು.
ಶಾಸಕ ಆರ್. ನರೇಂದ್ರ, ಜಿಪಂ ಸದಸ್ಯ ಬಸವರಾಜು, ಎಡಿಎಸ್ಪಿ ಅನಿತಾ ಹದ್ದಣನವರ್, ಎಸಿ ನಿಖೀತಾ ಚಿನ್ನಸ್ವಾಮಿ, ತಹಶೀಲ್ದಾರ್ ಕುನಾಲ್, ಡಿಎಫ್ಒ ಏಡುಕುಂಡಲು, ಬಿಇಒ ಟಿ.ಆರ್ ಸ್ವಾಮಿ ಹಾಜರಿದ್ದರು.