ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
Team Udayavani, Sep 27, 2019, 3:35 PM IST
ಗುಂಡ್ಲುಪೇಟೆ: ಮಕ್ಕಳ ಆರೋಗ್ಯದ ವಿಚಾರದಲ್ಲಿ ಪೋಷಕರು ಹೆಚ್ಚಿನ ಕಾಳಜಿವಹಿಸಬೇಕು ಎಂದು ಸೇಂಟ್ ಜಾನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್ ಹೇಳಿದರು.
ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ ಪಟ್ಟಣದ ಸೇಂಟ್ ಜಾನ್ಸ್ ಶಾಲೆಯ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಾಶಕ ಮಾತ್ರೆಗಳನ್ನು ವಿತರಿಸಿ ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಒಂದು ವರ್ಷ ಮಕ್ಕಳಿಂದ 19 ವರ್ಷದ ಮಕ್ಕಳವರೆಗೆ ಜಂತು ಹುಳು ನಾಶಕ ಮಾತ್ರೆಗಳನ್ನು ನೀಡಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಆರೋಗ್ಯ ವೃದ್ಧಿಸಲು ಸಹಕಾರಿಯಾಗಿದೆ
ಎಂದರು. ಆರೋಗ್ಯ ಇಲಾಖೆಯ ಶುಶ್ರೂಷಕಿ ಗೀತಾ ಮಾತನಾಡಿ, ಜಂತುಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳಾಗಿರುತ್ತಾರೆ. ಜಂತುಹುಳುವಿನಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತ ಹೀನತೆಯುಂಟಾಗುತ್ತದೆ. ಇದರಿಂದಾಗಿ ಮಕ್ಕಳಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಈ ಕಾರಣಕ್ಕಾಗಿ ತಪ್ಪದೇ ಮಕ್ಕಳಿಗೆ ಜಂತು ಹುಳು ನಾಶಕ ಮಾತ್ರೆ ಕೊಡಲಾಗುತ್ತದೆ ಎಂದರು. ಆರೋಗ್ಯ ಇಲಾಖೆಯ ಚಂದ್ರು, ದಯಾಶಂಕರ್, ಶಾಲಾ ಶಿಕ್ಷಕರಾದ ಬಸವೇಗೌಡ, ಗುರುಪ್ರಸಾದ್,ಬಸವಣ್ಣ, ಪ್ರಕಾಶ್, ವೇಲು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಪೋಷಕರು ಇದ್ದರು.