ಹುಲಿ ಸೆರೆಗೆ ಎರಡು ಬೋನ್ ಅಳವಡಿಕೆ
Team Udayavani, Feb 14, 2018, 3:53 PM IST
ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ಹುಲಿಯೋಜನೆ ವ್ಯಾಪ್ತಿಯ ಓಂಕಾರ್ ಅರಣ್ಯ ವಲಯದಂಚಿನ ಕುರುಬರಹುಂಡಿ ಹಾಗೂ ನಾಗರತ್ನಮ್ಮ ಕಾಲೋನಿಯ ಬಳಿ ಹುಲಿ ಸೆರೆಗೆ ಬೋನು ಇಡಲಾಗಿದೆ.
ವಾರದಿಂದ ನಡೆದ ಹುಲಿಯು ದಾಳಿಯಲ್ಲಿ ಜಮೀನಿನಲ್ಲಿ ಮೇಯುತ್ತಿದ್ದ ಮೂರು ಹಸುಗಳು ಸಾವಿಗೀಡಾಗಿದ್ದವು. ಇದರಿಂದ ಭೀತಿಗೊಂಡ ರೈತರು ಜಮೀನಿಗೆ ತೆರಳಲು ಹಿಂಜರಿಯುತ್ತಿದ್ದರು. ಹುಲಿ ಸೆರೆ ಹಿಡಿದು ಕಾಡಿಗೆ ಬಿಡುವಂತೆ ಅರಣ್ಯ ಇಲಾಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ಗ್ರಾಮಗಳ ಬಳಿ ಪ್ರತ್ಯೇಕ ಎರಡು ಬೋನು ಇರಿಸಲಾಗಿದೆ.
ಹುಲಿಯೋಜನೆಯಲ್ಲಿ ಕ್ಯಾಮೆರಾ ಟ್ರ್ಯಾಪಿಂಗ್ ಮೂಲಕ ಹುಲಿಗಣತಿ ನಡೆಯುತ್ತಿದ್ದು, ಎಲ್ಲಾ ಕ್ಯಾಮೆರಾಗಳನ್ನು ಅದಕ್ಕಾಗಿ ಬಳಸಿಕೊಳ್ಳಲಾಗಿದೆ. ಈ ಹುಲಿಯು ಹಲವು ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ನಿಖರವಾದ ಜಾಡು ಪತ್ತೆಯಾಗಿಲ್ಲ. ಆದರೂ ಸಂಭಾವ್ಯ ಅನಾಹುತ ತಪ್ಪಿಸುವ ಸಲುವಾಗಿ ಹುಲಿದಾಳಿ ಹಾಗೂ ಸಂಚರಿಸಿದ ಹೆಜ್ಜೆಗುರುತು ಕಂಡುಬಂದ ಸ್ಥಳದಲ್ಲಿ ಎರಡು ಬೋನು ಅಳವಡಿಸಲಾಗಿದೆ ಎಂದು ಓಂಕಾರ್ ವಲಯದ ಆರ್ ಎಫ್ಒ ನವೀನ್ ಕುಮಾರ್ ತಿಳಿಸಿದರು.