ಉರ್ದು ಭವನಕ್ಕೆ 20 ಲಕ್ಷ ರೂ. ಅನುದಾನ
Team Udayavani, Mar 5, 2019, 7:45 AM IST
ಶಿಡ್ಲಘಟ್ಟ: ತಾಲೂಕಿನಲ್ಲಿ ಉರ್ದು ಭಾಷೆಯ ಅಭಿವೃದ್ಧಿಗಾಗಿ ಉರ್ದು ಭವನ ನಿರ್ಮಿಸಲು 20 ಲಕ್ಷ ರೂ. ಮಂಜೂರು ಮಾಡುವುದಾಗಿ ಶಾಸಕ ವಿ.ಮುನಿಯಪ್ಪ ತಿಳಿಸಿದರು. ನಗರದ ಮುಬಾರಕ್ ಶಾದಿಮಹಲ್ನಲ್ಲಿ ಉರ್ದು ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಉರ್ದು ಶೈಕ್ಷಣಿಕ ಸಮ್ಮೇಳನ ಮತ್ತು ಕವಿ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಉರ್ದು ಶಾಲೆಗಳ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಸರ್ಕಾರಿ ಉರ್ದು ಶಾಲೆಯಲ್ಲಿ ಶಿಕ್ಷಕರ ಕೊರತೆ, ಶಿಥಿಲ ವ್ಯವಸ್ಥೆಯಲ್ಲಿರುವ ಶಾಲಾ ಕೊಠಡಿಗಳನ್ನು ದುರಸ್ತಿಗೊಳಿಸಿ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸಲು ಸಹಕಾರ ನೀಡುವುದಾಗಿ ವಾಗ್ಧಾನ ಮಾಡಿದರು.
ಶಿಡ್ಲಘಟ್ಟದಲ್ಲಿ ಉರ್ದು ಭವನ ನಿರ್ಮಿಸಲು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ 10 ಲಕ್ಷ ಮತ್ತು ನಗರಸಭೆಯಿಂದ 10 ಲಕ್ಷ ರೂ.ಮಂಜೂರು ಮಾಡಿಸುವುದಾಗಿ ಭರವಸೆ ನೀಡಿದರು. ವಿದ್ಯಾರ್ಥಿಗಳು ಉರ್ದು ಭಾಷೆಯ ಜೊತೆಗೆ ಕನ್ನಡ ಭಾಷೆ ಕಲಿಯಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ಉಜ್ವಲಗೊಳಿಸಬೇಕೆಂದರು.
ರಾಜ್ಯ ಉರ್ದು ಅಕಾಡೆಮಿಯ ಅಧ್ಯಕ್ಷ ಮುನೀನ್ ಮುನಾವರ್ ಮಾತನಾಡಿ, ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ಉರ್ದು ಕಲಿಕಾ ಕೇಂದ್ರ ತೆರೆಯಲಾಗುತ್ತದೆ. ಸರ್ಕಾರ ಶಿಕ್ಷಕರ ಕೊರತೆಯನ್ನು ನೀಗಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರಸಭಾಧ್ಯಕ್ಷ ಬಿ.ಅಫರ್ ಪಾಷ, ರಾಜ್ಯ ಉರ್ದು ಅಕಾಡೆಮಿಯ ಸದಸ್ಯ ಶೇಖ್ ಫಯಾಜುದ್ದೀನ್, ಜಾಮೀಯಾ ಮಸೀದಿಯ ಅಧ್ಯಕ್ಷ ತಾಜ್ಪಾಷ, ಉಪಾಧ್ಯಕ್ಷ ಅಮೀರ್ಜಾನ್, ಜಾಮೀಯಾ ಮಸೀದಿಯ ಧರ್ಮಗುರು ಮೌಲಾನಾ ನಝರ್ ಸಲಾಮಿ, ಮದೀನಾ ಮಸೀದಿಯ ಅಧ್ಯಕ್ಷ ಎಚ್.ಎಸ್.ಫಯಾಜ್ ಉಪಸ್ಥಿತರಿದ್ದರು.