ಜ್ಞಾನದ ಜೊತೆಗೆ ಕೌಶಲ್ಯ ಇರಲಿ
Team Udayavani, May 13, 2019, 3:00 AM IST
ಚಿಕ್ಕಬಳ್ಳಾಪುರ: ಶಿಕ್ಷಣದ ಮೂಲಕ ವಿಮಶಾìತ್ಮಕ ಚಿಂತನೆಯ ಜೊತೆಗೆ ಕರುಣೆ ಮತ್ತು ಸಹ ಮಾನವರ ಬಗ್ಗೆ ಸಂವೇದನೆ ಬೆಳೆಸಿಕೊಳ್ಳಬೇಕು. ಜ್ಞಾನದ ಜೊತೆಗೆ ಜೀವನ ಕೌಶಲಗಳನ್ನು ಬೆಳೆಸಿಕೊಳ್ಳಬೇಕೆಂದು ಕಸ್ಟಮ್ ಅಧಿಕಾರಿ ಎನ್.ಮಂಜುನಾಥ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಪೆರೇಸಂದ್ರದ ಶಾಂತಾ ಪದ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಗೆಲುವಿನ ಬಗ್ಗೆ ಭರವಸೆ ಇರಲಿ: ಜೀವನದಲ್ಲಿ ಸಾಧನೆಗಳ ಜೊತೆಗೆ ಸೋಲುಗಳು ಸಹ ಎದುರಾಗುತ್ತವೆ. ಸೋಲನ್ನು ಅರ್ಥಮಾಡಿಕೊಂಡು ಗೆಲ್ಲುವುದನ್ನು ಕಲಿಯಬೇಕು. ಜೀವನದಲ್ಲಿ ಅಗತ್ಯ ಮೌಲ್ಯ ಹಾಗೂ ವರ್ತನೆಗಳನ್ನು ರೂಢಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲಿ ಗೆಲುವಿನ ಬಗ್ಗೆ ಭರವಸೆ ಇರಬೇಕು. ಸೋಲನ್ನು ಒಪ್ಪಿಕೊಳ್ಳುವುದು ಕುತೂಹಲಕಾರಿಯಾಗಿರುತ್ತದೆ.
ಪ್ರಯತ್ನ ಮುಖ್ಯ: ಜವಾಬ್ದಾರಿಯುತ ಚಿಂತನೆ ಮತ್ತು ವರ್ತನೆ ಪ್ರದರ್ಶಿಸುವುದು ಹಾಗೂ ಒಳನೋಟದಿಂದ ವಿಸ್ತೃತ ನೆಲೆಯಲ್ಲಿ ಕಲಿಯುವುದು ಬಹಳ ಮುಖ್ಯ. ಸಮಕಾಲೀನ ಜಗತ್ತು ನಿರಂತರ ಬದಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ನಾವು ಬೆಳೆಯಬೇಕು. ಎಂತಹ ಸಂದರ್ಭದಲ್ಲಿಯೂ ಭರವಸೆ ಕಳೆದುಕೊಳ್ಳಬಾರದು.
ಅಬ್ರಾಹಂ ಲಿಂಕನ್ ನಿರಂತರ ಸೋತರೂ ಭರವಸೆ ಕಳೆದುಕೊಳ್ಳಲಿಲ್ಲ. ಅವಿರತ ಪ್ರಯತ್ನದಿಂದಾಗಿ ಸೋಲನ್ನು ಒಪ್ಪಿಕೊಳ್ಳುತ್ತಲೇ ಅಮೆರಿಕ ದೇಶದ ಶ್ರೇಷ್ಠ ಅಧ್ಯಕ್ಷರಾದರೆಂಬುದನ್ನು ನೆನಪಿಸಿದರು.
ಕನಸಿಲ್ಲದೇ ಸಾಧನೆ ಇಲ್ಲ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಕೋಡಿರಂಗಪ್ಪ ಮಾತನಾಡಿ, ಪರೀಕ್ಷೆಯ ರ್ಯಾಂಕ್ಗಳು ಜೀವನದ ರ್ಯಾಂಕ್ಗಳಾಗಬೇಕು. ಪರೀಕ್ಷೆಯಲ್ಲಿ ಪ್ರಥಮ ದರ್ಜೆ ಪಡೆದ ನಿಮ್ಮಿಂದ ನಾಳೆ ಸಮಾಜಕ್ಕೆ ಶ್ರೇಷ್ಠ ಕೆಲಸ ಆಗಬೇಕು. ಕಲಿಕೆ ಅಂತ್ಯವಲ್ಲದ ಬಹುಮುಖೀ ಕ್ರಿಯೆ.
ನಿಮ್ಮ ವಿಫಲತೆಗಳನ್ನು ಎದುರಿಸಿ, ಸೋಲುಗಳಿಗೆ ಯಾರನ್ನೂ ದೂಷಿಸದೇ ನಿಮ್ಮನ್ನು ನೀವು ಸರಿಪಡಿಸಿಕೊಳ್ಳುತ್ತಾ ಬದುಕಿಗೆ ದಾರಿದೀಪಗಳಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಧ್ಯಯನಶೀಲತೆ, ಪುಸ್ತಕ ಪ್ರೇಮ, ಸ್ವತಂತ್ರ ಚಿಂತನೆ ಹಾಗೂ ತರ್ಕಬದ್ಧ ಅಭಿವ್ಯಕ್ತಿಯನ್ನು ಕಲಿಯುತ್ತಾ ಸಾಗಬೇಕು. ದೂರದೃಷ್ಠಿ ಹಾಗೂ ದೊಡ್ಡ ಕನಸನ್ನು ಕಟ್ಟಿಕೊಂಡು ಮುನ್ನಡೆಯಬೇಕು. ಏಕೆಂದರೆ, ಕನಸು ಕಟ್ಟಿಕೊಳ್ಳದೇ ಏನನ್ನೂ ಸಾಧಿಸಲಾರೆವು ಎಂದರು.
ಕರ್ನಾಟಕ ಜನಕಲಾರಂಗದ ನಿರ್ದೇಶಕ ಎ.ವಿ.ವೆಂಕಟರಾಮ್ ಮಾತನಾಡಿ, ಕಲೆಗಾಗಿ ಕಲೆಯಲ್ಲ. ಜೀವನಕ್ಕಾಗಿ ಕಲೆ, ಜ್ಞಾನಕ್ಕಾಗಿ ಜ್ಞಾನವಲ್ಲ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮಾನವರ ಅಭಿವೃದ್ಧಿಗೆ ಜ್ಞಾನ ಬಳಕೆಯಾಗಬೇಕು. ಶಿಕ್ಷಣದ ಜೊತೆಗೆ ಕಲೆ, ಸಂಸ್ಕೃತಿಗಳನ್ನು ಬೆಳೆಸಿಕೊಂಡರೆ ಆಗ ಅವು ಉದಾತ್ಮ ಜೀವನಕ್ಕೆ ನೆರವಾಗುತ್ತವೆ ಎಂದು ಶಾಲೆಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥ ಪೊ›.ಹನುಮಂತರೆಡ್ಡಿ ಮಾತನಾಡಿ, ಎಲ್ಲರಲ್ಲೂ ಪ್ರತಿಭೆ ಇರುತ್ತದೆ. ಪ್ರತಿಭಾವಂತರು ಸಮಾಜಕ್ಕೆ ಕೊಡುಗೆ ನೀಡುವತ್ತಾ ಯೋಚಿಸಬೇಕು ಹಾಗೂ ಕಲಿಕೆ ಜೀವನ ವಿಧಾನವಾಗಬೇಕೆಂದು ಹೇಳಿದರು.
ಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಂತಾ ಶಿಕ್ಷಣ ಸಂಸ್ಥೆಗಳ ಟ್ರಸ್ಟಿ ಶಾಸಕ ಡಾ.ಕೆ.ಸುಧಾಕರ್ ಮುಂದಿನ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಅಗತ್ಯ ನೆರವು ನೀಡುವುದಾಗಿ ಪ್ರಕಟಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಂತಾ ಕಾಲೇಜಿನ ಉಪಪ್ರಾಂಶುಪಾಲ ನಾಗರಾಜ್, ಶಾಂತಾ ಸಂಸ್ಥೆಗಳ ಮಾನವ ಸಂಪನ್ಮೂಲ ಅಧಿಕಾರಿ ದೀಪಕ್ ಮ್ಯಾಥ್ಯೂ ಮತ್ತು ಶ್ವೇತಾ, ಸ್ಮಿತಾ, ಗಾಯತ್ರಿ, ವಂದನಾ, ಹರೀಶ್, ಲೋಕೇಶ್, ಶಶಿಕುಮಾರ್, ಬೈರೇಶ್, ವಿಜಯ ವೆಂಕಟೇಶ್, ಸುಮಯಾ, ಅಧ್ಯಾಪಕರು ಉಪಸ್ಥಿತರಿದ್ದರು.
ಅಂಕಗಳ ಜೊತೆಗೆ ಅಂತರಂಗ ವಿಕಾಸವಾಗದಿದ್ದರೆ ಪ್ರಯೋಜನವಿಲ್ಲ. ಪರೀಕ್ಷೆಯೇ ಶಿಕ್ಷಣ ಎಂದು ಭಾವಿಸಿರುವ ಕೆಲವು ಶಿಕ್ಷಣ ಸಂಸ್ಥೆಗಳು ಶಿಕ್ಷಣದ ನಿಜ ಆಶಯಗಳನ್ನು ಮರೆಯುತ್ತಿರುವುದು ಇತ್ತೀಚಿನ ದಿನಗಳಲ್ಲಿ ವಿಷಾದಕರ ಸಂಗತಿ. ಮಗುವಿನ ಹುಟ್ಟಿನೊಂದಿಗೆ ಕಲಿಕೆ ಆರಂಭಗೊಳ್ಳುತ್ತದೆ. ಶಾಲಾ ಕಲಿಕೆಯು ಮಕ್ಕಳಿಗೆ ಅನುಭವಗಳನ್ನು ಮತ್ತು ಆಲೋಚನೆಗಳನ್ನು ಕಟ್ಟಿಕೊಡುವ ಮೂಲಕ ಅರಿವಿನ ದಾರಿ ಕಲಿಸಬೇಕು.
-ಡಾ.ಕೋಡಿರಂಗಪ್ಪ, ಶಿಕ್ಷಣ ತಜ್ಞರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
Hot meal: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟ