Chikkaballapur: ನಿಗಮ ಮಂಡಳಿ ನನಗೆ ಬೇಡ ಎಂದ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ
ಸಚಿವ ಸ್ಥಾನದ ಆಕಾಂಕ್ಷಿ ಆಗಿರುವ ಸುಬ್ಬಾರೆಡ್ಡಿಗೆ ಬೀಜ ನಿಗಮ ಮಂಡಳಿ ವಹಿಸಿರುವ ಸರ್ಕಾರ
Team Udayavani, Jan 26, 2024, 8:18 PM IST
ಚಿಕ್ಕಬಳ್ಳಾಪುರ: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಜಿಲ್ಲೆಯ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಮಗೆ ವಹಿಸಿರುವ ನಿಗಮ, ಮಂಡಳಿ ಕಾರ್ಯ ಭಾರ ಸ್ಪೀಕರಿಸುವುದಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಶುಕ್ರವಾರ ರಾಜ್ಯ ಸರ್ಕಾರ ಹಲವು ಹಿರಿಯ ಶಾಸಕರಿಗೆ ನಿಗಮ ಮಂಡಳಿಗೆ ನೇಮಕ ಮಾಡಿ ಪಟ್ಟಿ ಬಿಡುಗಡೆಗೊಳಿಸಿದೆ. ಇದರ ಬೆನ್ನಲೇ ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಮ್ಮ ಮೊಬೈಲ್ ಸ್ವಿಚ್ಆಪ್ ಮಾಡಿಕೊಂಡಿದ್ದಾರೆ.
ಜೊತೆಗೆ ತಮ್ಮ ಆಪ್ತ ಸಹಾಯಕರ ಮೂಲಕ ಮಾಹಿತಿ ನೀಡಿರುವ ಶಾಸಕ ಸುಬ್ಬಾರೆಡ್ಡಿ, ತಾನು ನಿಗಮ ಮಂಡಳಿಗೆ ಆಕಾಂಕ್ಷಿ ಇಲ್ಲದೇ ಇರುವ ಕಾರಣ ಕರ್ನಾಟಕ ಬೀಜ ನಿಗಮದ ಅಧ್ಯಕ್ಷರ ಹುದ್ದೆಯನ್ನು ನಿರಾಕರಿಸಿದ್ದು ಕಾರ್ಯ ವರದಿ ಮಾಡಿಕೊಳ್ಳುವುದಿಲ್ಲ ಎಂದು ತಮ್ಮ ಅಪ್ತ ಸಹಾಯಕರಾದ ಮೋಹನ್ ಎಂಬುವರ ಮೂಲಕ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಸಚಿವ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಆಗಿರುವ ಸುಬ್ಬಾರೆಡ್ಡಿ ಸರ್ಕಾರ ವಹಿಸಿರುವ ನಿಗಮ ಮಂಡಳಿಯನ್ನು ನಿರಾಕರಿಸುವ ಮೂಲಕ ಅವರ ನಡೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಮೂರು ಬಾರಿ ಶಾಸಕರಾಗಿರುವ ಎಸ್.ಎನ್.ಸುಬ್ಬಾರೆಡ್ಡಿ, ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಪ್ರಬಲ ಆಕಾಂಕ್ಷಿಯನ್ನು ಹೊಂದಿದ್ದರು. ಈ ಹಿಂದೆಯು ಕೂಡ ಅವರು ನನಗೆ ಸಚಿವ ಸ್ಥಾನ ಕೊಟ್ಟರೆ ಕೊಡಿ ಇಲ್ಲದೇ ಹೋದರೆ ನನಗೆ ಯಾವುದೇ ನಿಗಮ ಮಂಡಳಿ ಬೇಡ ಅಂತ ಕಡ್ಡಿ ಮುರಿದಂತೆ ಹೇಳಿದ್ದರು. ಇದೀಗ ಅವರಿಗೆ ಸಿಕ್ಕಿರುವ ಬೀಜ ನಿಗಮದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ನಿರಾಕರಿಸಿದ್ದಾರೆ.