ಬೆಳೆ ಸಂಸ್ಕರಣೆಗೆ ಸರಿಯಾದ ಮಾರ್ಗಗಳಿಲ್ಲ
Team Udayavani, Mar 16, 2021, 12:57 PM IST
ಚಿಂತಾಮಣಿ: ಪ್ರೊಟೀನ್ಯುಕ್ತ ಆಹಾರ ಸಿರಿಧಾನ್ಯದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜನರು ಹೆಚ್ಚು ಜಾಗೃತಗೊಳ್ಳುತ್ತಿರುವುದು ಸಂತೋಷದ ಸಂಗತಿ. ಆದರೆ, ಬೆಳೆ ಬೆಳೆದ ಬಳಿಕ ಸಂಸ್ಕರಣೆ ಮಾಡಲು ಸರಿಯಾದ ಮಾರ್ಗಗಳಿಲ್ಲ ಎಂದು ಜನಪರ ಫೌಂಡೇಷನ್ ಸಂಸ್ಥೆಯ ಸದಸ್ಯ ದ್ವಿಜಿಗುರು ಅಭಿಪ್ರಾಯ ಪಟ್ಟಿದ್ದಾರೆ.
ತಾಲೂಕಿನ ಬಂಡಕೋಟೆ ಗ್ರಾಮದಲ್ಲಿ ಜನಪರ ಫೌಂಡೇಷನ್ ಚಿಂತಾಮಣಿ, ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆ ಚಿಂತಾಮಣಿ ಹಾಗೂ ಕಾವೇರಿ ಮಹಿಳಾ ಸ್ವ ಸಹಾಯ ಸಂಘ, ಬಂಡಕೋಟೆ ಆಶ್ರಯದಲ್ಲಿ ಆಯೋಜಿಸಿದ್ದ ನೆಲದ ಮಾತು-ಸಿರಿಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಮಾನ್ಯ ಜನರಿಗೆ ಕೈಗೆಟುವಂತೆ ಸಿರಿಧಾನ್ಯಗಳ ಸಂಸ್ಕರಣೆ ಮಾಡುವ ಯಂತ್ರಗಳ ಅಗತ್ಯವಿದೆ ಎಂದು ಹೇಳಿದರು.
ಜನಪರ ಫೌಂಡೇಷನ್ನ ಕಾರ್ಯ ಕರ್ತ ಶಶಿರಾಜ್ ಹರತಲೆ ಮಾತನಾಡಿ, ಕೃಷಿ ಹಾಗೂ ಕೃಷಿ ಸುತ್ತಮುತ್ತಲಿನ ವಿಚಾರಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲು, ಮಣ್ಣು ಹಾಗೂ ಪರಿಸರದ ವಿಷಯಗಳ ಬಗ್ಗೆ ಚರ್ಚೆ ನಡೆಸುವ ವೇದಿಕೆಯಾಗಿ ನೆಲದ ಮಾತು ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕಾಗಿದೆ ಎಂದು ಹೇಳಿದರು.
ಸಾವಯವ ಕೃಷಿಕ ಪ್ರಭಾಕರ್, ಕೃಷಿಕ ಮಹಿಳೆಯರಾದ ಗಾಯತ್ರಮ್ಮ, ಲಕ್ಷ್ಮಮ್ಮ, ರತ್ನಮ್ಮ ಹಾಗೂ ಏಕಾಂಗಿ ಹೋರಾಟಗಾರ ನಾಗರಾಜ್ ಅವರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಜನಪರ ಫೌಂಡೇಷನ್ನ ವತ್ಸಲಾ, ಗ್ರಾಪಂ ಸದಸ್ಯ ಶಿವಾರೆಡ್ಡಿ ಉಪಸ್ಥಿತರಿದ್ದರು.