ಕೃಷಿ ಹೊಂಡಕ್ಕೆ ಬಿದ್ದ ಬಾಲಕ ಬಚಾವ್: ರಕ್ಷಣೆಗೆ ಇಳಿದ ತಂದೆ, ತಾತ ಮೃತ್ಯು
ಚಿಂತಾಮಣಿಯ ಅಂಕಾಲಮಡಗು ಗ್ರಾಮದಲ್ಲಿ ಹೃದಯ ವಿದ್ರಾವಿಕ ಘಟನೆ
Team Udayavani, Jun 29, 2023, 7:46 PM IST
ಚಿಂತಾಮಣಿ(ಚಿಕ್ಕಬಳ್ಳಾಪುರ): ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದ ಬಾಲಕನೊಬ್ಬ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದರೂ ಆತನ ರಕ್ಷಣೆಗೆಂದು ಕೃಷಿ ಹೊಂಡಕ್ಕೆ ಇಳಿದ ತಂದೆ ಹಾಗೂ ತಾತ ಕೃಷಿ ಹೊಂಡದಲ್ಲಿ ಸಿಲುಕಿ ಹೊರ ಬಾರಲಾಗದೇ ಅಸುನೀಗಿರುವ ಹೃದಯ ವಿದ್ರಾವಿಕ ಘಟನೆಯೊಂದು ಗುರುವಾರ ತಾಲೂಕಿನ ಅಂಕಾಲಮಡಗು ಗ್ರಾಮದಲ್ಲಿ ನಡೆದಿದೆ.
ಕೃಷಿ ಹೊಂಡಕ್ಕೆ ಕಾಲು ಜಾರಿ ಬಿದ್ದು ಬಚಾವ್ ಆದ ಬಾಲಕನನ್ನು ಗ್ರಾಮದ ಸಂಜಯ್ ರೆಡ್ಡಿ ಬಿನ್ ಚೌಡರೆಡ್ಡಿ (14) ಎಂದು ಗುರುತಿಸಲಾಗಿದ್ದು ಬಾಲಕನ ರಕ್ಷಣೆಗೆಂದು ಕೃಷಿ ಹೊಂಡಕ್ಕೆ ಇಳಿದು ವಿಧಿಯಾಟಕ್ಕೆ ಬಲಿಯಾದವರನ್ನು ಗ್ರಾಮದ ವೆಂಕಟರೆಡ್ಡಿ (70) ಹಾಗೂ ಅವರ ಪುತ್ರ ಚೌಡರೆಡ್ಡಿ (45) ಎನ್ನುವವರಾಗಿದ್ದಾರೆ.
ಪೊಲೀಸರ ಭೇಟಿ
ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕೆಂಚಾರ್ಲಹಳ್ಳಿ ಗ್ರಾಮಾಂತರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕ ಪುರುಷೋತ್ತಮ್ ಹಾಗೂ ಬಟ್ಲಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಪುನೀತ್ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಮೃತದೇಹಗಳನ್ನು ಕೃಷಿ ಹೊಂಡದಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.