ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರೇ ಅಪಮಾನ ಮಾಡುತ್ತಿದ್ದಾರೆ : ಸುಧಾಕರ್ ವ್ಯಂಗ್ಯ
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಕ್ಷ ನೆಲೆ ಕಚ್ಚಿ ಶೂನ್ಯವಾಗಿದೆ
Team Udayavani, Jul 24, 2022, 10:33 PM IST
ಚಿಕ್ಕಬಳ್ಳಾಪುರ : ಕರ್ನಾಟಕ ರಾಜ್ಯದಲ್ಲಿ ಸರಿಸುಮಾರು 40 ವರ್ಷಗಳ ರಾಜಕಾರಣ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತನ್ನದೇ ಕ್ಷೇತ್ರವಿದೆ ಆದರೂ ಕಾಂಗ್ರೆಸ್ ಶಾಸಕರು ಅವರನ್ನು ವಿವಿಧ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಮಂತ್ರಣ ಮಾಡಿ ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದರು.
ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಾಗೇಪಲ್ಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಸಿದ್ದರಾಮಯ್ಯ ಅವರಿಗೆ ನಾನು ಮನವಿ ಮಾಡಿದ್ದೇನೆ ಎಂದು ಶಾಸಕ ಸುಬ್ಬಾರೆಡ್ಡಿ ಹೇಳಿದ್ದರು ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ನಾಯಕರಾಗಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಶಾಸಕರು ಅಪಮಾನ ಮಾಡ್ತಿದ್ದಾರೆ. ಅವರನ್ನ ಎಲ್ಲರೂ ಕ್ಷೇತ್ರಕ್ಕೆ ಬನ್ನಿ ಬನ್ನಿ ಅಂತ ಕರೆದರೆ ಅವರಿಗೆ ಕ್ಷೇತ್ರ ಗತಿ ಇಲ್ವಾ? ಅವರು 40 ವರ್ಷ ರಾಜಕಾರಣದಲ್ಲಿದ್ದಾರೆ, ಅವರದ್ದೂ ಕ್ಷೇತ್ರವಿದೆ. ಈ ರೀತಿ ಕರೆದು ಅವರಿಗೆ ಯಾಕೆ ಅವಮಾನ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ದೊಡ್ಡಬಳ್ಳಾಪುರದಲ್ಲಿ ನಡೆಯುವ ಸಾಧನ ಸಮಾವೇಶದ ಕುರಿತು ಮಾತನಾಡಿದ ಸುಧಾಕರ್, ಇದು ಸಾಧನ ಸಮಾವೇಶ ಅಲ್ಲ ಜನೋತ್ಸವ. ನಮ್ಮದು ಜನಸಾಮಾನ್ಯರ ಸರ್ಕಾರ. ಜನರ ಉತ್ಸವ ಮಾಡಲು ಹೊರಟಿದೆ. ಜನರೇ ಸ್ವಯಂಪ್ರೇರಿತರಾಗಿ ಕೇಂದ್ರ, ರಾಜ್ಯ ಸರ್ಕಾರಗಳ ಆಡಳಿತ ನೋಡಿ ಜನೋತ್ಸವ ಯಶಸ್ವಿ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಶೂನ್ಯ: ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ ಜನೋತ್ಸವವನ್ನು ಕಾಂಗ್ರೆಸ್ ನಾಯಕರು ಶೂನ್ಯ ಸಮಾವೇಶವೆಂದು ಟೀಕಿಸುತ್ತಿರುವುದಕ್ಕೆ ಕೆಂಡಮಂಡಲವಾದ ಆರೋಗ್ಯ ಸಚಿವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಪಕ್ಷ ನೆಲೆ ಕಚ್ಚಿ ಶೂನ್ಯವಾಗಿದೆ ಹೀಗಾಗಿ ಅದನ್ನು ನೆನಪು ಮಾಡಿಕೊಂಡು ಅವರು ಹಾಗೆ ಹೇಳಿದ್ದಾರೆ ಅನಿಸುತ್ತದೆ ಎಂದು ಲೇವಡಿ ಮಾಡಿದರು.