ಮನೆ ಬಾಗಿಲಿಗೆ ಪಿಂಚಣಿ ಆದೇಶ ಪತ್ರ
Team Udayavani, Dec 27, 2019, 12:38 PM IST
ಚಿಂತಾಮಣಿ: ಗ್ರಾಮಾಂತರ ಪ್ರದೇಶದ ಜನತೆಗೆ ಪಿಂಚಣಿ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಆರ್ಹ ಪಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಬೇಕೆಂಬ ಉದ್ದೇಶದಿಂದ ಪಿಂಚಣಿ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಗ್ರಾಮಗಳಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದರು.
ತಾಲೂಕಿನ ಮುರುಗಮಲ್ಲ ಹೋಬಳಿ ಕೊತ್ತಹುಡ್ಯ ಗ್ರಾಮದಲ್ಲಿ ಮುರುಗಮಲ್ಲ ನಾಡ ಕಚೇರಿಯ ಕಂದಾಯ ಅಧಿಕಾರಿ ಗಳಿಂದ ಹಮ್ಮಿ ಕೊಂಡಿದ್ದ ಪಿಂಚಣಿ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ, ಜನರಿಗೆ ಪಿಂಚಣಿ, ವಿಧವಾ ವೇತನ, ದಿವ್ಯಾಂಗ, ಸಂಧ್ಯಾಸುರಕ್ಷಾ, ವೃದ್ಧಾಪ್ಯ ವೇತನದ ಆದೇಶ ಪ್ರತಿಗಳನ್ನು ಅರ್ಹ ಪಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಜನರು ಪಿಂಚಣಿ ಸೇರಿದಂತೆ ಸರ್ಕಾರದ ಯೊಜನೆಗಳನ್ನು ಪಡೆಯಲು ಮಧ್ಯವರ್ತಿಗಳನ್ನು ಅವಲಂಬಿಸಿ ಸಾವಿರಾರು ರೂ. ನೀಡುತ್ತಾರೆ, ಇದನ್ನು ತಪ್ಪಿಸಲು ಗ್ರಾಮಾಂತರ ಪ್ರದೇಶದ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಎಲ್ಲಾ ಕಂದಾಯ ಸಿಬ್ಬಂದಿಯೊಂದಿಗೆ ಸಭೆ ನಡೆಸಿ ಹೋಬಳಿಯ ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಅರ್ಹ ಫಲಾನುಭವಿಗಳಿಂದ ಅರ್ಜಿ ಪಡೆದು, ಸ್ಥಳದಲ್ಲಿಯೇ ಕಡತ ತಯಾರಿಸಿ ಆದೇಶ ಪ್ರತಿ ನೀಡುವುದರ ಮೂಲಕ ಪಿಂಚಣಿ ಮುಕ್ತ ಗ್ರಾಮಗಳನ್ನಾಗಿ ಮಾಡುತ್ತಿದ್ದೇವೆ ಎಂದರು.
ಕಂದಾಯ ನಿರೀಕ್ಷಕ ಹಾಗೂ ಪ್ರಭಾರ ಉಪ ತಹಶೀಲ್ದಾರ್ ಸುಬ್ರಹ್ಮಣ್ಯಂ, ಗ್ರಾಮ ಲೆಕ್ಕಾಧಿಕಾರಿ ಚಂದ್ರು, ಯಗವಕೋಟೆ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಎಲ್ಲಾ ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರು ಉಪಸ್ಥಿತಿರಿದ್ದರು.