Revenge Story; ರೆಸಾರ್ಟ್ ಗೆ ಪ್ರಿಯಕರನ ಕರೆಸಿ 20 ಲಕ್ಷ ದೋಚಿದ್ದ ಯುವತಿ ಸೆರೆ
Team Udayavani, Jun 30, 2023, 3:24 PM IST
ಚಿಕ್ಕಬಳ್ಳಾಪುರ: ಹಲವು ದಿನಗಳ ಹಿಂದೆ ನಂದಿ ಸಮೀಪದ ರೆರ್ಸಾಟ್ ಗೆ ಪ್ರಿಯಕರನನ್ನು ಕರೆಸಿಕೊಂಡು ಆತನ ಮೇಲೆ ಹಲ್ಲೆ ನಡೆಸಿ 20 ಲಕ್ಷ ರೂ.ಗೂ ಅಧಿಕ ಹಣ ದೋಚಿ ಪರಾರಿಯಾಗಿದ್ದ ಆಂಧ್ರ ಮೂಲದ ಯುವತಿಯನ್ನು ಹಾಗೂ ಆಕೆಯ ಸಹೋದರನನ್ನು ನಂದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಯುವತಿಯನ್ನು ಭಾವನಾ ಹಾಗೂ ಆಕೆಯ ಸಹೋದರ ಪುಲ್ಲಾರೆಡ್ಡಿ ಎಂದು ಗುರುತಿಸಲಾಗಿದೆ. ನಂದಿ ಠಾಣೆ ಪೊಲೀಸರು ಅವರನ್ನು ಬಂಧಿಸಿ ಗುರುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಏನಿದು ಘಟನೆ: ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಉದ್ಯೋಗಿಯಾಗಿದ್ದ ವಿಜಯ್ ಸಿಂಗ್ ಎಂಬಾತ ಭಾವನಾಳನ್ನು ಪ್ರೀತಿಸುತ್ತಿದ್ದು, ಹಲವು ದಿನಗಳ ಹಿಂದೆ ಆಕೆಯನ್ನು ಬಿಟ್ಟು ಮತ್ತೂಬ್ಬ ಯುವತಿ ಜತೆಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಭಾವನಾ, ನಂದಿ ಸಮೀಪ ಇರುವ ರೆಸಾರ್ಟ್ಗೆ ವಿಜಯ್ ಸಿಂಗ್ ನನ್ನು ಕರೆದುಕೊಂಡಿದ್ದಳು. ಬಳಿಕ ಆಕೆಯ ಸಹೋದರ ಹಾಗೂ ಆಕೆ ವಿಜಯ್ ಸಿಂಗ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಆತನ ಬಳಿ ಇದ್ದ 20 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದರು.
ಇದನ್ನೂ ಓದಿ:Ambati Rayudu: ಆಂಧ್ರ ಪ್ರದೇಶ ರಾಜಕೀಯಕ್ಕೆ ಎಂಟ್ರಿಕೊಟ್ಟ ಕ್ರಿಕೆಟಿಗ ಅಂಬಟಿ ರಾಯುಡು
ಈ ಕುರಿತು ವಿಜಯ್ ಸಿಂಗ್ ನಂದಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆಂಧ್ರ ಪೊಲೀಸರ ನೆರವಿನೊಂದಿಗೆ ನಂದಿ ಠಾಣೆ ಪೊಲೀಸರು ಭಾವನಾರೆಡ್ಡಿ ಹಾಗೂ ಆಕೆಯ ಸಹೋದರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.