ಅಕಾಲಿಕ ಮಳೆ ಅಬ್ಬರ : ಅವಾಂತರ
ಕಡೂರಿನಲ್ಲಿ ಬಿರುಸಿನ ಮಳೆ |ಬಟ್ಟೆ ಅಂಗಡಿಗೆ ಮಳೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ
Team Udayavani, Feb 22, 2021, 6:27 PM IST
ಕಡೂರು: ಭಾನುವಾರ ಮಧ್ಯಾಹ್ನ ಕಡೂರು ಪಟ್ಟಣದಲ್ಲಿ ದಿಢೀರನೆ ಸುರಿದ ಅಕಾಲಿಕ ಮಳೆ ಹಲವು ಆಸ್ತಿಪಾಸ್ತಿಯನ್ನು ಹಾನಿಗೊಳಿಸಿ ಅವಾಂತರಗಳನ್ನು ಸೃಷ್ಟಿಸಿದೆ.
ಮಧ್ಯಾಹ್ನ 1.15 ಕ್ಕೆ ಸಣ್ಣದಾಗಿ ಆರಂಭವಾದ ಮಳೆ ಏಕಾಏಕಿ ಸುರಿಯ ತೊಡಗಿತು. ನೋಡ ನೋಡುತ್ತಿದ್ದಂತೆ ತಗ್ಗು ಪ್ರದೇಶವೆಲ್ಲಾ ಜಲಾವೃತವಾಗಿ ಒಳ ಚರಂಡಿಗಳು, ಕಟ್ಟಡಗಳು, ವಾಸದ ಮನೆಗಳು ಸೇರಿದಂತೆ ಹಲವು ಕಡೆ ನೀರು ಪ್ರವಾಹದ ರೂಪದಲ್ಲಿ ಹರಿಯಿತು.
ಶ್ರೀ ಬಸವೇಶ್ವರ ವೃತ್ತದಲ್ಲಿ ಮಲ್ಲಿಕಾರ್ಜುನ ಕಂಫರ್ಟ್ ಕಟ್ಟಡದಲ್ಲಿರುವ ಮಂಗಲ್ಜೊÂàತಿ ಬಟ್ಟೆ ಅಂಗಡಿ ಮತ್ತು ಎಂಎಸ್ ಟೈಲರ್ ಅಂಗಡಿಗಳಿಗೆ ನುಗ್ಗಿದ ನೀರು ಸುಮಾರು 5-6 ಅಡಿ ಎತ್ತರಕ್ಕೆ ಹರಿದು ಅಂಗಡಿಯಲ್ಲಿರುವ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ತೋಯ್ದು ಹಾಳಾಗಿದೆ. ಪಕ್ಕದ ಟೈಲರ್ ಅಂಗಡಿಯೂ ಕೂಡ ಜಲಾವೃತವಾಗಿ ಗ್ರಾಹಕರು ಹೊಲಿಯಲು ನೀಡಿದ್ದ ಬಟ್ಟೆಯೆಲ್ಲ ನೀರು ಪಾಲಾಗಿದೆ. ಈ ಕಟ್ಟಡದ ಮಗ್ಗುಲಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಒಳ ಚರಂಡಿ ನಿರ್ಮಿಸಲು ಭೂಮಿ ಬಗೆದಿದ್ದು ಇದರಿಂದ ಪಟ್ಟಣದ ಮೇಲ್ಭಾºಗದ ನೀರೆಲ್ಲಾ ಹರಿದು ಚರಂಡಿಗಳ ಮೂಲಕ ಸಾಗಿ ಇಲ್ಲಿ ನೀರು ನುಗ್ಗಿ ಮಂಜಲ್ ಜ್ಯೋತಿ ಅಂಗಡಿ ಮತ್ತು ಟೈಲರ್ ಅಂಗಡಿ ಜಲಾವೃತವಾಗಲು ಕಾರಣವಾಗಿದೆ ಎಂಬ ಮಾಹಿತಿಯನ್ನು ಮಾಲೀಕರು ತಿಳಿಸಿದರು.
ಈ ಹಿಂದೆಯೂ ಸಹ ಇದೇ ರೀತಿ ಮಳೆ ಸುರಿದು ಮಂಗಲ್ಜೊÂàತಿ ಶೋರೂಂಗೆ ನೀರು ನುಗ್ಗಿ ಆಗಲೂ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಹಾಳಾಗಿ ಮಾಲೀಕರಿಗೆ ನಷ್ಟ ಉಂಟಾಗಿತ್ತು.ಇದೀಗ ಎರಡನೇ ಬಾರಿ ಮತ್ತೂಮ್ಮೆ ನಷ್ಟ ಅನುಭವಿಸುವಂತಾಗಿದೆ ಎಂದು ಮಾಲೀಕ ಮಹಾವೀರ ಸುರಾನ ಅಳಲು ತೋಡಿಕೊಂಡರು.
ಪಟ್ಟಣದ ರೈಲ್ವೆ ಮೇಲುಸೇತುವೆ ಬಳಿ ಮಳೆಯ ನೀರು ಬೃಹದಾಕಾರದಲ್ಲಿ ನಿಂತು ಸಣ್ಣ ಹೊಂಡದ ಮಾದರಿಯಲ್ಲಿ ಕಾಣಿಸತೊಡಗಿದ್ದು ಜನ ಸಂಚಾರ ಸಾಧ್ಯವಾಗದ ಸ್ಥಿತಿ ಉಂಟಾಗಿತ್ತು. ಹಲವು ವರ್ಷಗಳಿಂದ ಇದೇ ರೀತಿಯ ಸಮಸ್ಯೆ ಇದೆ. ಸಣ್ಣ ಮಳೆ ಬಂದರೂ ಇಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದರೆ ಪರಿಹಾರ ರೂಪಿಸುವಲ್ಲಿ ವಿಫಲವಾಗಿದೆ. ಈ ಪ್ರದೇಶವು ಯಾರಿಗೆ ಸೇರಿದ್ದೆಂಬ ಗೊಂದಲವೂ ಇದಕ್ಕೆ ಕಾರಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಡಾ| ಬಸವಂತಪ್ಪ ಕ್ಲಿನಿಕ್ ಮಗ್ಗುಲಲ್ಲಿ ವೆಂಕಟೇಶ್ವರ ನಗರಕ್ಕೆ ಸಾಗುವ ರಸ್ತೆಯಲ್ಲಿ ನೀರು ನುಗ್ಗಿದ್ದು ಇಡ್ಲಿ ರವಿ, ಜಯಣ್ಣ ಅವರ ಮನೆಗಳಿಗೆ ನೀರು ನುಗ್ಗಿ ನಷ್ಟ ಸಂಭವಿಸಿದೆ. ಮಂಗಲಜ್ಯೋತಿ ಮುಂದೆ ಸಂಗ್ರಹವಾಗಿರುವ ನೀರನ್ನು ಪುರಸಭೆ ವತಿಯಿಂದ ಮೋಟಾರ್ ಮೂಲಕ ಎತ್ತುವ ಕೆಲಸ ಆರಂಭವಾಗಿದ್ದು. ಸುಮಾರು ಗಂಟೆಗಳೇ ಇದಕ್ಕೆ ತಗುಲಿವೆ. ಶಾಸಕ ಬೆಳ್ಳಿಪ್ರಕಾಶ್ ಖುದ್ದಾಗಿ ಪಟ್ಟಣದ ಅನೇಕ ಭಾಗಗಳಿಗೆ ತೆರಳಿ ಮಳೆಹಾನಿ ವೀಕ್ಷಿಸಿದ್ದಲ್ಲದೆ ಸಂಬಂಧಪಟ್ಟ ಅಧಿಕಾರಿಗಳಿಗೆ ತುರ್ತಾಗಿ ಪರಿಹಾರ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ಮಳೆ ಹಾವಳಿ ಬಳಿಕ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪದೇ ಪದೇ ಸಮಸ್ಯೆ ಉದ್ಭವವಾಗುತ್ತಿರುವುದರಿಂದ ಹೆದ್ದಾರಿ ಪ್ರಾ ಧಿಕಾರದ ಅ ಧಿಕಾರಿಗಳು ಪುರಸಭೆ ಅಧಿ ಕಾರಿಗಳ ಸಭೆ ಕರೆದು ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಿಕೆಗೆ ಮಾಹಿತಿ ನೀಡಿದರು.
ಮಂಗಲ್ ಜ್ಯೋತಿ ಶೋರೂಂ ಮಾಲೀಕ ಮಹಾವೀರ ಸುರಾನ ಮಾತನಾಡಿ, ಮಳೆ ನೀರು ವ್ಯಾಪಕವಾಗಿ ಸಂಗ್ರಹವಾಗುತ್ತಿದ್ದಾಗ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಸಮಸ್ಯೆಯನ್ನು ತೋಡಿಕೊಂಡು ಪರಿಹಾರಕ್ಕಾಗಿ ಕರೆದರೆ ಅಲ್ಲಿನ ಸಿಬ್ಬಂದಿ ತಮಗೆ ಆದೇಶವಿಲ್ಲ ಎಂದು ಕುಂಟು ನೆಪ ಹೇಳಿದ್ದು ಬೇಸರ ತಂದಿದೆ. ಮಳೆಯ ನೀರು ನುಗ್ಗಿರುವುದರಿಂದ ಸುಮಾರು 70 ಲಕ್ಷ ರೂ.ಗೂ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ ಎಂದರು.