ಮೂಡಿಗೆರೆ ಅಭಿವೃದ್ಧಿಗೆ 130 ಕೋಟಿ ರೂ.
Team Udayavani, Jan 31, 2020, 6:25 PM IST
ಆಲ್ದೂರು: ಮೊದಲು ನಾನು ನೆಪ ಮಾತ್ರಕ್ಕೆ ಶಾಸಕನಾಗಿದ್ದೆ. ಆದರೆ, ಈಗ ನಿಜವಾದ ಶಾಸಕನಾಗಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು 130
ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಆಲ್ದೂರಿನ ಪೇಟೆ ಕಾಲೋನಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 14ನೇ ಹಣಕಾಸಿನಲ್ಲಿ
ನಿರ್ಮಾಣ ಮಾಡಿರುವ ಜೈ ಭೀಮ್ ಸಮುದಾಯ ಭವನವನ್ನು ಉದ್ಘಾಟಿಸಿ ಮಾತನಾಡಿದರು. ನಾನು ಈ ಹಿಂದೆ ಹೆಸರಿಗೆ ಮಾತ್ರ ಶಾಸಕನಾಗಿದ್ದೆ. ಆದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ನಿಜವಾದ ಶಾಸಕನಾಗಿದ್ದೇನೆ. ಇನ್ನು ಮುಂದೆ ಯಾವ ರಸ್ತೆಗಳು ಡಾಂಬರೀಕರಣವಾಗದೆ ಉಳಿಯುವುದಿಲ್ಲ. ಸಂಪೂರ್ಣವಾಗಿ ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು
ಭರವಸೆ ನೀಡಿದರು. ಆಲ್ದೂರು ಸುತ್ತಮುತ್ತಲಿನ ರಸ್ತೆಗಳ ಅಭಿವೃದ್ಧಿಗೆ 12 ಕೋಟಿ ರೂ. ಅನುದಾನ ನೀಡಿದ್ದು, ಮುಂದಿನ ದಿನಗಳಲ್ಲಿ ಬಾಕಿ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬಡವರಿಗೆ, ವಸತಿ ರಹಿತರಿಗೆ ನಿವೇಶನ ನೀಡಲು ಡೀಮ್ಡ್ ಫಾರೆಸ್ಟ್ ಅಡ್ಡಿ ಬರುತ್ತಿದೆ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ತಿದ್ದುಪಡಿಯಾಗಬೇಕಿದೆ. ಹೌಸಿಂಗ್ ಕಾರ್ಪೋರೇಷನ್ ಅಡಿ ಮನೆ ನಿರ್ಮಿಸಿಕೊಡಲಾಗುವುದು. ಅದಕ್ಕೆ ಜಾಗದ ಕೊರತೆಯಿದ್ದು, ಈ ಪೇಟೆ ಕಾಲೋನಿಯ ಈ ಗ್ರಾಮವನ್ನು ಮುಂದಿನ ದಿನಗಳಲ್ಲಿ ಬೇರೆ ಜಾಗಕ್ಕೆ ಸ್ಥಳಾಂತರ ಮಾಡಲು ಪ್ರಯತ್ನಿಸಲಾಗುವುದು ಎಂದರು.
ಆಲ್ದೂರು ಪಟ್ಟಣದ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸಬೆಕೆಂಬ
ದೃಷ್ಟಿಯಿಂದ ಕುಡಿಯುವ ನೀರಿನ ಕಾಮಗಾರಿಗೆ 1.5 ಕೋಟಿ ರೂ. ಅನುದಾನ ಮಂಜೂರಾತಿಗೆ ಮನವಿ ಸಲ್ಲಿಸಿದ್ದು, ಮಂಜೂರಾದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಸಮುದಾಯ ಭವನದಲ್ಲಿ ಮದುವೆ ಸಮಾರಂಭ ಮಾಡಲು ಈ ಕಟ್ಟಡದ ಮೇಲೆ ಮತ್ತೂಂದು
ಕಟ್ಟಡ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದು, ಏಪ್ರಿಲ್ ಅಂತ್ಯದೊಳಗೆ ಕಟ್ಟಡ ನಿರ್ಮಿಸಿಕೊಡುವ ಭರವಸೆ ನೀಡಿದರು. ಜಿಪಂ ಸದಸ್ಯ ನಿಖೀಲ್ ಚಕ್ರವರ್ತಿ, ತಾ.ಪಂ. ಉಪಾಧ್ಯಕ್ಷೆ ದೀಪಾ ನಾಗೇಶ್, ಸದಸ್ಯೆ ಭವ್ಯಾ, ಆಲ್ದೂರು ಗ್ರಾ.ಪಂ. ಅಧ್ಯಕ್ಷೆ ಪ್ರತಿಭಾ ನವೀನ್, ಉಪಾಧ್ಯಕ್ಷೆ ಪವಿತ್ರ
ಧನಂಜಯ್, ಎಪಿಎಂಸಿ ಸದಸ್ಯ ಕವೀಶ್, ಬಿಜೆಪಿ ಮುಖಂಡ ನಾರಾಯಣ ಆಚಾರ್ಯ, ಪ್ರಧಾನ ಕಾರ್ಯದರ್ಶಿ ನವೀನ್, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.