ಚಿಕ್ಕಮಗಳೂರು: ನೀರಿನ ಟ್ಯಾಂಕರ್, ಬೈಕ್ ಮುಖಾಮುಖಿ ಡಿಕ್ಕಿ; ಅಣ್ಣ, ತಂಗಿ ಸಾವು
Team Udayavani, Jun 24, 2019, 12:42 PM IST
ಚಿಕ್ಕಮಗಳೂರು:ನೀರಿನ ಟ್ಯಾಂಕರ್ ಲಾರಿ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಅಣ್ಣ, ತಂಗಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಹಳೆ ಲಕ್ಯಾ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಎಸ್.ಬಿದರೆಯಿಂದ ಚಿಕ್ಕಮಗಳೂರಿಗೆ ಬೈಕ್ ನಲ್ಲಿ ಅಣ್ಣ, ತಂಗಿ ಹಾಗೂ ಮಗು ತೆರಳುತ್ತಿದ್ದ ಸಂದರ್ಭದಲ್ಲಿ ನೀರಿನ ಟ್ಯಾಂಕರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಲ್ಲಿ ಲತಾಮಣಿ (25ವರ್ಷ), ಅಶೋಕ್ (30ವರ್ಷ) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇವರು ಎಸ್.ಬಿದರೆ ಗ್ರಾಮದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಕೂಡಲೇ ಟ್ಯಾಂಕರ್ ಲಾರಿ ಚಾಲಕ ಮಗುವನ್ನು ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.