ಸಿದ್ದುಗೆ ಮನಸ್ಸು ಇಲ್ಲ ಮಾರ್ಗವೂ ಇಲ್ಲ : ಸಿಎಂ ಬಸವರಾಜ ಬೊಮ್ಮಾಯಿ
Team Udayavani, Nov 15, 2022, 2:44 PM IST
ಕಡೂರು: ಸಿದ್ದುಗೆ ಮನಸ್ಸು ಇಲ್ಲ ಮಾರ್ಗವೂ ಇಲ್ಲ. ಕಡೂರು ನನ್ನ ಹೃದಯಕ್ಕೆ ಹತ್ತಿರವಿದೆ. ಇದು ಬಿಜೆಪಿ ಭದ್ರಕೊಟೆ, ಯಾರೂ ಏನು ಮಾಡಲು ಆಗಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ನಾನು ಸಿಎಂ ಆಗಬೇಕೆಂದರೆ ಕಾಂಗ್ರೆಸ್ ಗೆ ಮತ ಹಾಕಿಯೆಂದು ಸಿದ್ದರಾಮಣ್ಣ, ಮೈಸೂರಿನಲ್ಲಿ ಹೇಳೀದ್ದಾರೆ. ಆದರೆ ಜನ ಬೆಂಬಲ ಆಮೇಲೆ, ಮೊದಲು ಡಿಕೆಶಿ ಬೆಂಬಲ ತಗೋಳ್ಳಿ. ನಿಮಗೆ ಅದೇ ಇಲ್ಲ, ಜನ ಬೆಂಬಲ ಹೇಗೆ ಕೇಳ್ತೀಯಪ್ಪಾ ಸಿದ್ದರಾಮಣ್ಣ ಎಂದು ವ್ಯಂಗ್ಯವಾಡಿದರು.
2013ರಲ್ಲಿ ಇದೇ ರೀತಿ ಕೇಳಿ ನೀವು ಸಿಎಂ ಆದಿರಿ. ಜನ ಆಶೀರ್ವಾದ ಮಾಡಿದರು, ಆದರೆ ನೀವು ಕೊಟ್ಟಿದ್ದು ಏನು? ಜನ ಇವರನ್ನು ಆರಿಸಿದ್ದೇ ದೌರ್ಭಾಗ್ಯ ಎಂದು ಸೋಲಿಸಿದರು. ನಿಮ್ಮ ಕಾಲದಲ್ಲಿ ಅನ್ನಕ್ಕೆ ಕನ್ನ ಹಾಕಿದ್ದನ್ನು ಜನ ಮರೆತಿಲ್ಲ. ಸಣ್ಣ ನೀರಾವರಿಯಲ್ಲಿ 100 ಪರ್ಸೆಂಟ್ ಹೊಡೆದಿರುವುದನ್ನು ಮರೆತಿಲ್ಲ. ಹಾಸಿಗೆ-ದಿಂಬು ದುಡ್ಡು ಹೊಡೆದಿದ್ದು ಮರೆತಿಲ್ಲ. ನೀವು ಧರ್ಮ ಒಡೆಯುವ ಪ್ರಯತ್ನ ಮಾಡಿದಿರಿ ಅದನ್ನೂ ಮರೆತಿಲ್ಲ. 20ಕ್ಕೂ ಹೆಚ್ಚು ಹಿಂದೂ ಕೊಲೆ ಮಾಡಿದ್ದನ್ನೂ ಮರೆತಿಲ್ಲ. ಯಾವ ಸುಖಕ್ಕೆ ನಿಮ್ಮನ್ನ ಸಿಎಂ ಮಾಡಬೇಕು, ನೀವೇ ಹೇಳಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಇದನ್ನೂ ಓದಿ:‘ಮುಂಬೈ ವಿರುದ್ಧ ಆಡಲಾರೆ…’: ಐಪಿಎಲ್ ತೊರೆದ ಕೈರನ್ ಪೊಲಾರ್ಡ್
ರಾಜ್ಯದಲ್ಲಿ ಬಿಜೆಪಿಯ ಸುನಾಮಿ ಎದ್ದಿದೆ. ರಾಜ್ಯದಲ್ಲಿ ನಿಮ್ಮೆಲ್ಲರ ಆಶೀರ್ವಾದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜನಸ್ಪಂದನೆ ಸರ್ಕಾರ ಬರಲು ನಿಮ್ಮ ಸಹಕಾರ ಬೇಕು. ನೀವೆಲ್ಲಾ ನಮಗೆ ಆನೆ ಬಲ ಕೊಟ್ಟಿದ್ದೀರಿ, 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಎಂದು ಸಂಕಲ್ಪ ಮಾಡಿದ್ದೀರಿ. ನಿಮ್ಮ ಸಂಕಲ್ಪವೇ ನಮ್ಮ ಸಂಕಲ್ಪ ಎಂದರು.