ಕಡಿಮೆಯಾದ ಮಳೆ: ಕಾಫಿ ಬೆಳೆಗಾರರ ನಿಟ್ಟುಸಿರು
ಮಳೆ ಮುಂದುವರಿದರೆ ಬೆಳೆ ಕೊಚ್ಚಿ ಹೋಗುವ ಆತಂಕ ಪರಿಹಾರಕ್ಕೆ ಬೆಳೆಗಾರರ ಆಗ್ರಹ
Team Udayavani, Feb 24, 2021, 7:37 PM IST
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಅಕಾಲಿಕ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ. ಸೋಮವಾರ ರಾತ್ರಿ ಕೆಲವು ಸಮಯ ಮಳೆಯಾಗಿದ್ದು ಕಾಫಿ ಬೆಳೆಗಾರರ ಆತಂಕ ಹೆಚ್ಚಿಸಿತ್ತು. ಮಂಗಳವಾರ ಮಳೆ ಬಿಡುವು ನೀಡಿರುವುದರಿಂದ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ.
ಹವಾಮಾನ ವೈಪರೀತ್ಯದಿಂದ ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕು ವ್ಯಾಪ್ತಿಯಲ್ಲಿ ಹಾಗೂ ಬಯಲುಸೀಮೆ ಭಾಗವಾದ ಕಡೂರು ತರೀಕೆರೆ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕೈದು ದಿನಗಳಿಂದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.
ಅಕಾಲಿಕ ಮಳೆಯಿಂದ ಮಲೆನಾಡು ಭಾಗದಲ್ಲಿ ಕಾಫಿ, ಕಾಳು ಮೆಣಸು ಕಟಾವು ನಡೆಯುತ್ತಿರುವುದರಿಂದ ಕಾಫಿ ಬೆಳೆಗಾರರ ಕಣ್ಣಲ್ಲಿ ಕಣ್ಣೀರು ತರಿಸಿದೆ. ಕಟಾವು ಮಾಡಿ ಒಣಸಿದ ಕಾಫಿಬೀಜ ಮಳೆನೀರಿನಲ್ಲಿ ಕೊಚ್ಚಿ ಹೋಗಿದೆ. ರೊಬೊಸ್ಟಾ ಕಾಫಿ ಇನ್ನು ಕೊಯ್ಲು ನಡೆಯುತ್ತಿದ್ದು, ಗಿಡದಲ್ಲಿರುವ ಕಾಫಿ ಹಣ್ಣು ಮಣ್ಣು ಪಾಲಾಗಿದೆ. ಮಂಗಳವಾರ ಜಿಲ್ಲಾದ್ಯಂತ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಸಂಜೆ ವೇಳೆ ಭಾರೀ ಮಳೆಯಾಗುವ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ಜಿಲ್ಲಾದ್ಯಂತ ತುಂತುರು ಮಳೆಯಾದ ಬಗ್ಗೆ ವರದಿಯಾಗಿದೆ. ಮಂಗಳವಾರ ಹಗಲು ಮಳೆ ಬಿಡುವು ನೀಡಿತ್ತು. ಮತ್ತೆ ಮಳೆ ಮುಂದುವರಿದರೆ ಈಗಾಗಲೇ ಅಕಾಲಿಕ ಮಳೆಯಿಂದ ಸಂಕಷ್ಟಕ್ಕೆ ತುತ್ತಾಗಿರುವ ಕಾಫಿ ಬೆಳೆಗಾರರು ಮತ್ತಷ್ಟು ತೊಂದರೆಗೆ ಸಿಲುಕಲಿದ್ದಾರೆ. ಮಳೆ ನಿಂತರೆ ಸಾಕು ಎನ್ನುವಂತಾಗಿದೆ ಬೆಳೆಗಾರರ ಪಾಡು.