ಕಾಂಗ್ರೆಸ್ ಮಾನಸಿಕತೆಯಿಂದ ದೇಶದ ಸಮಗ್ರತೆಗೆ ಧಕ್ಕೆ: ಸಿ.ಟಿ.ರವಿ
ಉಡುಪಿ ವಿಡಿಯೋ ಪ್ರಕರಣ ಸರಕಾರದ ನಡವಳಿಕೆಗೆ ಸಾಕ್ಷಿ
Team Udayavani, Jul 26, 2023, 4:43 PM IST
ಚಿಕ್ಕಮಗಳೂರು: ಆರೋಪಿಗಳನ್ನ ಅಮಾಯಕರು ಅನ್ನುವ ಸ್ಥಿತಿಗೆ ಬಂದಿರುವುದು ನಿಜಕ್ಕೂ ಅಪಾಯಕಾರಿ,ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಆರೋಪಿಗಳನ್ನು ಅಮಾಯಕರು ಅನ್ನುವುದು ಖಂಡನೀಯ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ದೇಶದ ಸಮಗ್ರತೆಗೆ ಧಕ್ಕೆಯಾಗುವಂತಹ ಕಾಂಗ್ರೆಸ್ ಮಾನಸಿಕತೆಯನ್ನು ಖಂಡಿಸುತ್ತೇನೆ. ಕಾನೂನು ಹೋರಾಟವನ್ನು ನಾವು ಮುಂದುವರೆಸುತ್ತೇವೆ. ಉಗ್ರ ಚಟುವಟಿಕೆ ಯಲ್ಲಿ ತೊಡಗಿರುವ ಆರೋಪಿಗಳನ್ನು ರಕ್ಷಣೆ ಮಾಡುವುದು ಸರಿಯಲ್ಲ.
ಒಳ್ಳೆಯರು ಯಾರು, ಕೆಟ್ಟವರು ಯಾರು ಎಂಬುದು ತಿಳಿದುಕೊಳ್ಳದಿದ್ದರೆ ರಾಜ್ಯದ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿದರು.
ಉಡುಪಿ ಕಾಲೇಜ್ ನಲ್ಲಿ ವಿಡಿಯೋ ಪ್ರಕರಣದಲ್ಲಿ ಪೊಲೀಸರು ತಡವಾಗಿ ಎಫ್ ಐ ಆರ್ ದಾಖಲಿಸಿದ್ದಾರೆ. ದೂರು ನೀಡಿದ ತಕ್ಷಣವೇ ಎಫ್ ಐ ಆರ್ ದಾಖಲಿಸಬೇಕಾಗಿತ್ತು. ವಿಳಂಬ ನೀತಿ ಸರಿಯಲ್ಲ. ಈ ಬಗ್ಗೆ ಸಮಗ್ರ ತನಿಖೆ ನಡೆದಾಗ ಮಾತ್ರ ಸತ್ಯಾಂಶ ಹೊರಬರಲಿದೆ.ಟ್ವೀಟ್ ಮಾಡಿದ ಅವರನ್ನು ವಿಚಾರಣೆಗೆ ಒಳಪಡಿಸಿರುವುದು ಸರಿಯಲ್ಲ. ಈ ಸರಕಾರ ಹೇಗೆ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ ಎಂದರು.