ಕೆಸರು ಗದ್ದೆಯಲ್ಲಿ ಸಚಿವ ಸಿ.ಟಿ.ರವಿ ಓಟ! ಎದ್ದು ಬಿದ್ದು ಗುರಿ ತಲುಪಿದ ಸಚಿವರು
ಜಿಲ್ಲಾ ಉತ್ಸವದ ಹಿನ್ನೆಲೆಯಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೆ ಚಾಲನೆ
Team Udayavani, Feb 23, 2020, 7:45 PM IST
ಚಿಕ್ಕಮಗಳೂರು: ಜಿಲ್ಲಾ ಉತ್ಸವದ ಅಂಗವಾಗಿ ನಡೆದ ಕೆಸರುಗದ್ದೆ ಓಟದಲ್ಲಿ ಸಚಿವ ಸಿ.ಟಿ.ರವಿ ಎದ್ದು ಬಿದ್ದು ಓಡಿ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು.
ಜಿಲ್ಲಾ ಉತ್ಸವದ ಪ್ರಯುಕ್ತ ಗ್ರಾಮೀಣ ಕ್ರೀಡೆ ಕೆಸರುಗದ್ದೆ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರದ ಹೊರವಲಯದ ನಲ್ಲೂರು ಗೇಟ್ ಬಳಿ ಸ್ಪರ್ಧೆಗೆ ಚಾಲನೆ ನೀಡಿದ ಸಿ.ಟಿ.ರವಿ, ಜನಪ್ರತಿನಿ ಧಿಗಳ ತಂಡದೊಂದಿಗೆ ಕೆಸರು ಗದ್ದೆಯಲ್ಲಿ ಓಡಿದರು. ಪ್ರಾರಂಭದಲ್ಲಿ ಉತ್ತಮವಾಗಿ ಮುನ್ನುಗ್ಗಿದ ಅವರು, ಗುರಿ ಮುಟ್ಟಬೇಕೆನ್ನುವಷ್ಟರಲ್ಲಿ ಮುಗ್ಗರಿಸಿ ಬಿದ್ದರು. ತಕ್ಷಣ ಎದ್ದು ಚೇತರಿಸಿಕೊಂಡು ಮತ್ತೆ ಓಡಿ ಗುರಿಮುಟ್ಟಬೇಕು ಎನ್ನುವಷ್ಟರಲ್ಲೇ ಕಾಲು ಜಾರಿ ಬಿದ್ದರು. ಒಟ್ಟು ಮೂರು ಬಾರಿ ಗದ್ದೆಯಲ್ಲಿ ಬಿದ್ದರೂ ಛಲ ಬಿಡದೇ ಕೊನೆಗೂ ಗುರಿಮುಟ್ಟುವಲ್ಲಿ ಯಶಸ್ವಿಯಾದರು.
ಸಚಿವರು ಗದ್ದೆಯಲ್ಲಿ ಓಡಲು ಪ್ರಾರಂಭಿಸುತ್ತಿದ್ದಂತೆ ನೆರೆದಿದ್ದ ಜನ ಸಚಿವರನ್ನು ಹುರಿದುಂಬಿಸಿದರು. ಸಿಳ್ಳೆ, ಕೇಕೆ ಚಪ್ಪಾಳೆ ಹಾಕಿ ಪ್ರೋತ್ಸಾಹಿಸಿದರು. ಮೂರು ಬಾರಿ ಕೆಸರು ಗದ್ದೆಯಲ್ಲಿ ಬಿದ್ದ ಸಚಿವರು ಮೈಯೆಲ್ಲಾ ಕೆಸರು ಮಾಡಿಕೊಂಡು ಗ್ರಾಮೀಣ ಕ್ರೀಡೆಯನ್ನು ಎಂಜಾಯ್ ಮಾಡಿದರು.