28ರಿಂದ ಕಾಫಿ ನಾಡಲ್ಲಿ ಟಿಎಸ್ಡಿ ರ್ಯಾಲಿ
40 ಮಂದಿ ಸ್ಪರ್ಧಾಳುಗಳು ಭಾಗಿ ದಿ ಮೋಟರ್ ನ್ಪೋರ್ಟ್ಸ್ ಕ್ಲಬ್ನ ಅಭಿಜಿತ್ ಪೈ ಮಾಹಿತಿ
Team Udayavani, Sep 25, 2019, 1:07 PM IST
ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಸೆ. 28 ರಿಂದ ಎರಡು ದಿನಗಳ ಕಾಲ ರ್ಯಾಲಿ ಆಫ್ ಚಿಕ್ಕಮಗಳೂರ್, ಟಿಎಸ್ಡಿ ರ್ಯಾಲಿ ನಡೆಯಲಿದೆ ಎಂದು ಚಿಕ್ಕಮಗಳೂರು ದಿ ಮೋಟರ್ ನ್ಪೋರ್ಟ್ಸ್ ಕ್ಲಬ್ನ ವ್ಯವಸ್ಥಾಪಕರಾದ ಅಭಿಜಿತ್ ಪೈ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮಟ್ಟದ ಈ ರ್ಯಾಲಿಯಲ್ಲಿ ದೇಶದ ಪ್ರಖ್ಯಾತ ರ್ಯಾಲಿ ಪಟುಗಳು ಪಾಲ್ಗೊಳ್ಳಲಿದ್ದಾರೆ. ರ್ಯಾಲಿಯ ಪ್ರಾಯೋಜಕತ್ವವನ್ನು ಸಿರಿ ನೇಚರ್ ರೂಸ್ಟಸ್ ಮತ್ತು ಸಹ ಪ್ರಾಯೋಜಕತ್ವವನ್ನು ಬ್ಲೂ ಮಿಸ್ಟ್ ಹೋಂ ಸ್ಟೇ ವಹಿಸಿದೆ ಮತ್ತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಕರಿಸಲಿದೆ ಎಂದು ತಿಳಿಸಿದರು.
ಸೆ.29 ರಂದು ರ್ಯಾಲಿಯ 2ನೇ ಹಂತ ನಡೆಯಲಿದ್ದು, ಅಂದು ಚಾಲಕರು 130 ಕಿ.ಮೀ.
ನಷ್ಟು ದೂರ ಕ್ರಮಿಸಲಿದ್ದಾರೆ. ಒಟ್ಟಾರೆ ರ್ಯಾಲಿ 210 ಕಿ.ಮೀ. ದೂರ ನಡೆಯಲಿದೆ. ರ್ಯಾಲಿಯಲ್ಲಿ 40 ಜನ ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದೆ. ರ್ಯಾಲಿಯಲ್ಲಿ ದೇಶದ ಖ್ಯಾತನಾಮರಾದ ಸಂತೋಷ್ ನಾಗರಾಜನ್, ಅಸ್ಗರ್ ಅಲಿ, ಮುಸ್ತಫಾ, ಪ್ರಮೋದ್, ಪ್ರಕಾಶ್, ರವಿ, ಸಾಗರ್, ಮಹಿಳಾ ವಿಭಾಗದಲ್ಲಿ ದೆಹಲಿಯ ಕ್ಷಿಮಿತಾ ಯಾದವ್, ಕೊಲ್ಕತ್ತಾದಿಂದ ದೀಪ್ಶಿಕ ಭಾದುರಿ, ಮುಂಬಯಿಯ ಗೀತಿಕಾ, ಬೆಂಗಳೂರಿನ ಸ್ನಿಗ್ಧಾ ಭಾಗವಹಿಸುವರು. ಸ್ಥಳೀಯರ ವಿಭಾಗದಲ್ಲಿ ಮಂಜು ಜೈನ್, ಜಾಯ್ ಸಲ್ಡಾನ, ಸಮೃದ್ಧ್ ಪೈ, ಸುಹಾಸ್, ಸಂದೀಪ್, ನಿತಿನ್ ಮತ್ತು ಅಭ್ಯುದಯ ಪೈ ಭಾಗವಹಿಸುವರು ಎಂದು ಹೇಳಿದರು.
ಹಿರಿಯ ರ್ಯಾಲಿ ಪಟುಗಳಿಗಾಗಿ ವೆಟರ್ನ್ ಕ್ಯಾಟಗರಿಯನ್ನು 50 ವರ್ಷ ಮೇಲ್ಪಟ್ಟವರಿಗಾಗಿ
ಆಯೋಜಿಸಲಾಗಿದ್ದು, ಈ ವಿಭಾಗದಲ್ಲಿ ಲೆಫ್ಟಿನೆಂಟ್ ಕರ್ನಲ್ ಅಮಿತ್ ಮಾಥೂರ್ ಮತ್ತು
ರಾಜಗೋಪಾಲ್ ಪಾಲ್ಗೊಳ್ಳುವರು ಎಂದರು.
ಶೀಘ್ರ ನಿರ್ಧಾರ: ಮೋಟಾರ್ ನ್ಪೋಟ್ಸ್ ಕ್ಲಬ್ನ ಉಪಾಧ್ಯಕ್ಷ ಫಾರೂಕ್ ಅಹಮದ್ ಮಾತನಾಡಿ, ಪ್ರತಿವರ್ಷ ಕಾಫಿ ನಾಡಿನಲ್ಲಿ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ಶಿಪ್ ನಡೆಯುತ್ತಿತ್ತು. ಈ ವರ್ಷವೂ ಜಿಲ್ಲೆಗೆ ರ್ಯಾಲಿ ಮಂಜೂರಾಗಿದೆ. ಪ್ರತಿವರ್ಷ ರ್ಯಾಲಿಯ ಪ್ರಾಯೋಜಕತ್ವವನ್ನು ಕಾಫಿ ಡೇ ವಹಿಸಿಕೊಳ್ಳುತ್ತಿತ್ತು. ಆದರೆ, 2 ತಿಂಗಳ ಹಿಂದೆ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಹೆಗ್ಡೆ ನಿಧನರಾಗಿದ್ದಾರೆ.
ಅವರ ನಿಧನದ ನಂತರ ಎಬಿಸಿಯವರೊಂದಿಗೆ ರ್ಯಾಲಿ ಕುರಿತು ಚರ್ಚಿಸಿಲ್ಲ. ಶೀಘ್ರವೇ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ರ್ಯಾಲಿ ನಡೆಸುವ ಕುರಿತು ತೀರ್ಮಾನಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಚಯ್ಯ, ದಿಲೀಪ್, ಸುರೇಶ್ ಇತರರು ಉಪಸ್ಥಿತರಿದ್ದರು.