ಜಿಲ್ಲಾದ್ಯಂತ ಕ್ರಿಸ್ಮಸ್ ಸಂಭ್ರಮ
ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಕೆ-ಗಮನ ಸೆಳೆದ ಗೋದಲಿ
Team Udayavani, Dec 26, 2019, 3:48 PM IST
ಚಿತ್ರದುರ್ಗ: ಕ್ರಿಸ್ಮಸ್ ಹಬ್ಬವನ್ನು ಬುಧವಾರ ಕೋಟೆ ನಗರಿಯಲ್ಲಿ ಸಂಭ್ರಮ- ಸಡಗರದಿಂದ ಆಚರಿಸಲಾಯಿತು. ಬೆಳಿಗ್ಗೆ ಕ್ರೈಸ್ತ ಸಮುದಾಯದವರು ಚರ್ಚ್ಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಏಸುಕ್ರಿಸ್ತ ಹಾಗೂ ಮೇರಿ ಅಮ್ಮನಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಕೈಕುಲುಕುವ ಮೂಲಕ ಶುಭಾಷಯ ವಿನಿಮಯ ಮಾಡಿಕೊಂಡರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.
ವಿವಿಧೆಡೆ ಚರ್ಚ್ಗಳಲ್ಲಿ ಧರ್ಮಗುರುಗಳು ಪ್ರವಚನ ನೀಡಿದರು. ನಗರದ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆ ಸಮೀಪದ ಹೋಲಿ ಫ್ಯಾಮಿಲಿ ಕ್ಯಾಥೋಲಿಕ್ ಚರ್ಚ್ ಆವರಣದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿತ್ತು. ಏಸುಕ್ರಿಸ್ತ ಹುಟ್ಟಿದ ಸಂದರ್ಭಗಳನ್ನು ಮರುಸೃಷ್ಟಿ ಮಾಡಲಾಗಿದ್ದ ದೃಶ್ಯಗಳು ವಿಶೇಷ ಆಕರ್ಷಣೆಯಾಗಿದ್ದವು. ಸಂಜೆ ಗಾಯನ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮಕ್ಕಳಿಗೆ ಸಾಂತಾಕ್ಲಾಸ್ ಉಡುಗೆ, ಟೋಪಿ ಹಾಕಿ ಸಂಭ್ರಮಿಸಲಾಯಿತು.
ನಗರದ ವಿವಿಧೆಡೆ ಇರುವ ಪ್ರೊಟೆಸ್ಟೆಂಟ್ ಚರ್ಚ್ಗಳಲ್ಲೂ ಏಸುವನ್ನು ಪ್ರಾರ್ಥಿಸಿದ ದೃಶ್ಯ ಕಂಡು ಬಂತು. ಫಿಲ್ಟರ್ಹೌಸ್ ರಸ್ತೆಯಲ್ಲಿರುವ ಸಿಎಸ್ಐ ಪುನರುತ್ಥಾನ ಮಂದಿರದಲ್ಲೂ ವಿಶೇಷ ಪ್ರಾರ್ಥನೆ ನಡೆಯಿತು. ಮಕ್ಕಳಿಗೆ ಕೇಕ್, ಚಾಕೊಲೇಟ್, ವಯಸ್ಕರು ವಿವಿಧ ರೀತಿಯ ತಿಂಡಿ, ತಿನಿಸುಗಳಿಂದ ಸಿದ್ಧಪಡಿಸಿದ ಆಹಾರ ಸವಿಯುವ ಮೂಲಕ ಕ್ರಿಸ್ಮಸ್ ಆಚರಣೆ ಮಾಡಿದರು.