ಹಿಂದುಳಿದ ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ: ಮನವಿ
Team Udayavani, May 19, 2020, 12:59 PM IST
ಸಾಂದರ್ಭಿಕ ಚಿತ್ರ
ಚಳ್ಳಕೆರೆ: ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಹಿಂದುಳಿದ ಪ್ರದೇಶಗಳ ವ್ಯಾಪ್ತಿಯಲ್ಲಿದ್ದು, ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶೇಷ ಪ್ಯಾಕೇಜ್ ನೀಡುವಂತೆ ಸರ್ಕಾರವನ್ನು ಒತ್ತಾಯಿಸುವಂತೆ ವಿರೋಧ ಪಕ್ಷದ ನಾಯಕ ಎಸ್.ಸಿದ್ದರಾಮಯ್ಯ ಅವರಿಗೆ ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
ಅವರು, ಬೆಂಗಳೂರಿನ ಅವರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ, ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಕಳೆದ ಹಲವು ವರ್ಷಗಳಿಂದ ಮಳೆ ವೈಪಲ್ಯದಿಂದ ಬಡತನವಿದ್ದು, ಅನೇಕ ಕುಟುಂಬಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಹೆಚ್ಚು ನಷ್ಟ ಅನುಭವಿಸಿವೆ. ರಾಜ್ಯ ಸರ್ಕಾರ ಕೆಲವೊಂದು ರಿಯಾಯ್ತಿ ನೀಡಿವೆ. ಈ ಭಾಗದ ಬಡ ಜನರ ಸಂಕಷ್ಟ ನಿವಾರಣೆಗೆ ಸರ್ಕಾರಕ್ಕೆ ಒತ್ತಡ ಹೇರಿ ವಿಶೇಷ ಪ್ಯಾಕೇಜ್ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.
ವಿಕಲಚೇತರಿಗೆ ಕಿಟ್: ಶಾಸಕ ಟಿ.ರಘುಮೂರ್ತಿ ಅವರು ಕ್ಷೇತ್ರದ 3950 ವಿಕಲಚೇತನರಿಗೆ ತಮ್ಮ ವೈಯಕ್ತಿಕವಾಗಿ ಆಹಾರದ ಕಿಟ್ ನೀಡಲಿದ್ದಾರೆ. ಮೇ 19ರಂದು ಬೆಳಗ್ಗೆ 11ಕ್ಕೆ ಶಾಸಕ ಕಚೇರಿ ಮುಂಭಾಗದಲ್ಲಿ ವಿಕಲಚೇತರಿಗೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ತಿಳಿಸಿದ್ದಾರೆ. ನಗರದ 500ಕ್ಕೂ ಹೆಚ್ಚು ಜನರಿಗೆ ಪ್ರಾರಂಭ ಹಂತದಲ್ಲಿ ಕಿಟ್ ನೀಡಿ ನಂತರ ಕ್ಷೇತ್ರದಾದ್ಯಂತ ಹಂತ, ಹಂತವಾಗಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.