Bharamasagara: ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಲಾರಿ; ಡಿಸೇಲ್ ಟ್ಯಾಂಕ್ ಸೋರಿಕೆ
Team Udayavani, Jan 14, 2024, 11:29 AM IST
ಭರಮಸಾಗರ: ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದು ಗುಂಡಿಗೆ ಉರುಳಿದ ಘಟನೆ ಸಮೀಪದ ಬಹದ್ದೂರ್ ಘಟ್ಟ ಬಳಿ ಕ್ರಾಸ್ ನಲ್ಲಿ ನಡೆದಿದೆ.
ತಿಪಟೂರು ಟೌನ್ ಮೂಲದ ಚಾಲಕ ರುದ್ರೇಶ್ ಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಗಳೂರು ತಾಲೂಕಿನ ಹುಲ್ಲಿಕಟ್ಟೆ ಗ್ರಾಮಕ್ಕೆ ಯಡಿಯೂರಿನಿಂದ 342 ಸಿಲಿಂಡರ್ ಗಳನ್ನು ಹೊತ್ತೊಯ್ಯುತ್ತಿದ್ದ ಲಾರಿ ಪಲ್ಟಿಯಾದ ಪರಿಣಾಮ ಚಾಲಕನ ಕೈ-ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ. ಕ್ರಾಸ್ ಬಳಿಯಿದ್ದ 100 ಕೆ.ವಿ. ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ಬಳಿ ಅನಾಹುತ ನಡೆದಿದೆ. ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ.
ಇಲ್ಲಿನ ಬಿಳಿಚೋಡು ರಸ್ತೆ ಕಡೆ ತೆರಳುವ ಸೇತುವೆ ಬಳಿಯ ಕ್ರಾಸ್ ನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿದೆ. ಲಾರಿ ಉರುಳಿದ ರಭಸಕ್ಕೆ ಲಾರಿ ಡಿಸೇಲ್ ಟ್ಯಾಂಕ್ ಸೋರಿಕೆಯಾಗುತ್ತಿದೆ.
ಸ್ಥಳಕ್ಕೆ ಆಗಮಿಸಿರುವ ಸ್ಥಳೀಯ ಪೊಲೀಸರು ಸಾರ್ವಜನಿಕರು ಹತ್ತಿರಕ್ಕೆ ಬಾರದಂತೆ ಕ್ರಮ ಕೈಗೊಂಡಿದ್ದಾರೆ. ಚಿತ್ರದುರ್ಗ ಅಗ್ನಿ ಶಾಮಕ ಠಾಣೆ ಅಧಿಕಾರಿಗಳು ಮತ್ತು ಫೈಯರ್ ಎಂಜಿನ್ ಸ್ಥಳದಲ್ಲೇ ಮೊಕ್ಕಂ ಇದ್ದು ಲಾರಿ ಬೆಂಕಿ ಕೆನ್ನಾಲಿಗೆಗೆ ಒಳಗಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಇಲ್ಲಿನ ರಸ್ತೆ ಸೇತುವೆ ಕಿರಿದಾಗಿದ್ದು ಈ ಹಿಂದೆ ಹಲವಾರು ಅಪಘಾತಗಳು ಸಂಭವಿಸಿವೆ. ಸರ್ಕಾರ ಕೂಡಲೇ ರಸ್ತೆ ಸೇತುವೆ ಅಗಲೀಕರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಬಹದ್ದೂರ್ ಘಟ್ಟ ಗ್ರಾಮಸ್ಥರು ಆಗ್ರಹಿಸಿದ್ದಾರೆ.