ಮೆಕ್ಕೆ ಜೋಳ ಮಾರಾಟ ಚೇತರಿಕೆ: ನಿಟ್ಟುಸಿರು ಬಿಟ್ಟ ರೈತ
Team Udayavani, Apr 15, 2020, 7:06 PM IST
ಭರಮಸಾಗರ: ಇಲ್ಲಿನ ಬೈಪಾಸ್ ರಸ್ತೆ ಮೂಲಕ ತಮಿಳುನಾಡಿನತ್ತ ಸಂಚರಿಸಲು ಸಿದ್ಧವಾಗಿರುವ ಮೆಕ್ಕೆಜೋಳ ತುಂಬಿದ ಲಾರಿಗಳು.
ಭರಮಸಾಗರ: ಲಾಕ್ಡೌನ್ ನಡುವೆಯೂ ರಾಜ್ಯ ಸರ್ಕಾರ ಕೃಷಿ ಮತ್ತು ಕೋಳಿ ಉದ್ಯಮ ಚಟುವಟಿಕೆಗಳಿಗೆ ನಿಯಮಗಳ ವಿನಾಯ್ತಿ ನೀಡುತ್ತಿದ್ದಂತೆ ಇತ್ತ ತಾಲೂಕಿನ ಹಲವೆಡೆ ಕೃಷಿಕರು ಸಂಗ್ರಹಿಸಿಟ್ಟಿದ್ದ ಮೆಕ್ಕೆಜೋಳ ಮಾರಾಟ ಜೋರು ನಡೆದಿದೆ.
ಕೋಳಿ ಜ್ವರ ಆವರಿಸಿ ಇಡೀ ಕುಕ್ಕುಟ ಉದ್ಯಮ ಪಾತಾಳಕ್ಕೆ ಕುಸಿಯುತ್ತಿದ್ದಂತೆ ಇತ್ತ ಮೆಕ್ಕೆಜೋಳ ದರ ಕೂಡ ಕ್ವಿಂಟಲ್ ಜೋಳ 2000 ರೂ.ಗಳ ಆಸುಪಾಸಿನಿಂದ ದಿಢೀರ್ 1000 ರೂಗೆ ಕುಸಿದಿತ್ತು. ಹೊರ ರಾಜ್ಯಗಳಿಗೆ ರಫ್ತು ಆಗುತ್ತಿದ್ದ ಮೆಕ್ಕೆಜೋಳ ಸ್ಥಗಿತಗೊಂಡಿತ್ತು. ತೀವ್ರ ಸಂಕಷ್ಟಕ್ಕೆ ಒಳಗಾದ ರೈತರ ಬದುಕಿಗೆ ಕಳೆದ ಕೆಲ ದಿನಗಳ ಹಿಂದೆ ರಾಜ್ಯ ಸರ್ಕಾರ ಕರೆ ನೀಡಿದ ಕುಕ್ಕುಟೋದ್ಯಮದ ಪುನರ್ ಆರಂಭ ಸೇರಿದಂತೆ ಕೃಷಿ ಚಟುವಟಿಕೆಗೆ ವಿನಾಯ್ತಿ ದೊರೆಯುತ್ತಿದ್ದಂತೆ ಇತ್ತ ಮೆಕ್ಕೆಜೋಳ ವ್ಯಾಪಾರ ಚೇತರಿಕೆ ಕಂಡಿದೆ.
ಕಳೆದೊಂದು ವಾರದಿಂದ ಕೃಷಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ಮೆಕ್ಕೆಜೋಳ ದರ 1400 ರಿಂದ 1600 ರೂಗಳ ಆಜುಬಾಜಿಗೆ ಜಿಗಿತ ಕಂಡಿದೆ. ಇದರಿಂದ ಹಳ್ಳಿಗಳಲ್ಲಿ ಕಣಗಳಲ್ಲಿ ಸಂಗ್ರಹಿಸಿಟ್ಟ ಮೆಕ್ಕೆಜೋಳವನ್ನು ಮಾರಾಟ ಮಾಡುವ ಕಡೆ ರೈತರು ಎಲ್ಲಾ ಚಟುವಟಿಕೆಗಳನ್ನು ಚುರಕಿನಿಂದ ನಡೆಸುತ್ತಿದ್ದಾರೆ. ಅಲ್ಲದೆ ಕೆಲ ವ್ಯಾಪಾರಸ್ಥರೇ ನೇರ ರೈತನ ಮನೆ ಬಾಗಿಲಿಗೆ ತೆರಳಿ 1500 ರೂಗಳಿಂದ 1600, 1700 ರೂಗಳವರೆಗೆ ಒಂದಷ್ಟು ಸಮಯದ ಷರತ್ತು ವಿಧಿಸಿ ಖರೀದಿಸುವ ಚಟುವಟಿಕೆಗಳಿಂದ ಇದೀಗ ರೈತರು ಒಂದಿಷ್ಟು ಸಮಾಧಾನದ ನಿಟ್ಟುಸಿರು ಬಿಡುವಂತೆ ಆಗಿದೆ.
ಹೀಗಾಗಿ ನಿತ್ಯ ತಮಿಳುನಾಡು ಮೂಲದ ಪೌಲ್ಟ್ರಿ ಫಾರಂಗಳಿಗೆ ತಾಲೂಕಿನ ಹಲವು ಭಾಗಗಳು ಸೇರಿದಂತೆ ದಾವಣಗೆರೆ ಜಿಲ್ಲೆಯ ಹಲವು ಭಾಗಗಳಿಂದ ವ್ಯಾಪಾರಸ್ಥರು ಖರೀದಿಸಿದ ಮೆಕ್ಕೆಜೋಳ ಸಾಗಾಣಿಕೆ ಮಾಡುವ ನೂರಾರು ತಮಿಳುನಾಡು ಮೂಲದ ಲಾರಿಗಳ ಓಡಾಟ ಕಂಡುಬರುತ್ತಿದೆ.