ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ
ದುಡಿಯುವ ಸಮುದಾಯ ಆರೋಗ್ಯದ ಕಡೆ ಗಮನ ಹರಿಸಲಿ: ಭೋವಿ ಶ್ರೀ
Team Udayavani, Apr 16, 2020, 11:47 AM IST
ಚಿತ್ರದುರ್ಗ: ಲಕ್ಕೀಹಳ್ಳಿ ಅರಣ್ಯ ಪ್ರದೇಶದಲ್ಲಿ ಭದ್ರಾ ಕಾಮಗಾರಿಗಾಗಿ ಬಂದಿರುವ ವಲಸೆ ಕುಟುಂಬಗಳಿಗೆ ಭೋವಿ ಗುರುಪೀಠದ ಶ್ರೀಗಳು ಆಹಾರ ಸಾಮಗ್ರಿ ವಿತರಿಸಿದರು.
ಚಿತ್ರದುರ್ಗ: ಹೊಟ್ಟೆ ಪಾಡಿಗಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಬಂದು ನೆಲೆಸಿರುವ ವಲಸೆ ಕಾರ್ಮಿಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಭದ್ರಾ ಮೇಲ್ದಂಡೆ ಕಾಮಗಾರಿಗಾಗಿ ಹೊಸದುರ್ಗ ತಾಲೂಕು ಲಕ್ಕಿಹಳ್ಳಿ ಮೀಸಲು ಅರಣ್ಯದ ಬಳಿ ನೆಲೆಸಿರುವ ತೆಲಂಗಾಣದ ಮೆಹಬೂಬ್ ನಗರ ಜಿಲ್ಲೆ, ರಾಮಾನಂದಪುರಂ ಗ್ರಾಮದ ಕಾರ್ಮಿಕರಿಗೆ ಅಗತ್ಯ ದಿನಸಿ ವಿತರಿಸಿ ಅವರು ಮಾತನಾಡಿದರು. ತೆಲಂಗಾಣದ 30 ಕುಟುಂಬ ಹಾಗೂ ಮಹಾರಾಷ್ಟ್ರದ 5 ಕುಟುಂಬಗಳಿಗೆ ಅಕ್ಕಿ, ಗೋಧಿ ಹಿಟ್ಟು, ರಾಗಿ ಹಿಟ್ಟು, ಮೆಣಸಿಕ ಕಾಯಿ, ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿ, ಸೋಪು, ಪೇಸ್ಟ್, ಬ್ರೆಷ್, ಕಾರದ ಪುಡಿ, ಬೆಳೆ, ಎಣ್ಣೆ, ತೆಂಗಿನ ಕಾಯಿ ಸೇರಿದಂತೆ ನಿತ್ಯ ಆಹಾರಕ್ಕೆ ತಯಾರಿಕೆಗೆ ಅಗತ್ಯವಿರುವ ಸಾಮಗ್ರಿ ವಿತರಿಸಿದರು.
ದುಡಿಯುವವರಿಗೆ ಆರೋಗ್ಯ ತುಂಬಾ ಅಗತ್ಯವಿರುತ್ತದೆ. ಇಡೀ ಕುಟುಂಬ ಅವರನ್ನು ಅವಲಂಬಿಸಿರುತ್ತದೆ. ದುಡಿಯುವವರು ಬೀದಿಗೆ ಬಿದ್ದರೆ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಅಷ್ಟೇ ಮುಖ್ಯವಾಗಿ ವಲಸೆ ಬಂದವರು ಮಕ್ಕಳಿಗೆ ಶಿಕ್ಷಣವನ್ನು ಕಡ್ಡಾಯವಾಗಿ ನೀಡಬೇಕು.
ವರ್ಷಪೂರ್ತಿ ವಲಸೆಯಲ್ಲಿಯೇ ಕಳೆಯುವ ಕುಟುಂಬಗಳು ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಸರ್ಕಾರದ ವಸತಿ ನಿಲಯಗಳು ಇಲ್ಲವೇ ವಿವಿಧ ಸಂಘ ಸಂಸ್ಥೆಗಳು ನಡೆಯುವ ವಸತಿ ನಿಲಯಗಳಲ್ಲಿ ಶಿಕ್ಷಣ ಕೊಡಿಸಲು ಪೋಷಕರು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಡಾ| ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಬಡ ಸಮುದಾಯಗಳಿಗೆ ಉಚಿತ ಆರೋಗ್ಯ ಶಿಕ್ಷಣ ಸಿಗುವಂತ ಸಂದರ್ಭದಲ್ಲಿ ಜನತೆ ಸದುಪಯೋಗ ಪಡೆಸುಕೊಳ್ಳಬೇಕು. ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ ದುಡಿಯುವ ಸಮುದಾಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು. ಕೊರೊನಾಕ್ಕೆ ಸಂಬಂಧಿಸಿದಂತೆ ಸರ್ಕಾರ ಸೂಚಿಸುವಂತಹ ನಿಯಮಗಳನ್ನು ತಪ್ಪದೆ ಪಾಲಿಸಿ ಕೊರೊನಾ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಲಕ್ಷ್ಮಣ, ಭೋವಿ ಗುರುಪೀಠದ ಸಿಇಒ ಗೌನಹಳ್ಳಿ ಗೋವಿಂದಪ್ಪ, ಮುಖಂಡರಾದ ಮೂಡಲಗಿರಿಯಪ್ಪ, ಕೃಷ್ಣಪ್ಪ, ಶ್ರೀನಿವಾಸ್ ಇದ್ದರು.