ಶಿಕ್ಷಣ ಅಭಿವೃದ್ಧಿ ಅಸ್ತ್ರವಾಗಲಿ: ಇಮ್ಮಡಿ ಸಿದ್ಧರಾಮೇಶ್ವರ ಶ್ರೀ
Team Udayavani, Jul 19, 2021, 6:32 PM IST
ಚಿತ್ರದುರ್ಗ: ಭೋವಿ ಸಮುದಾಯ ರಸ್ತೆ, ಕಟ್ಟಡ, ಕೂಲಿಗಾಗಿ ಊರೂರು ತಿರುಗುವ ಅಲೆಮಾರಿಗಳಾಗಿದ್ದಾರೆ. ಈ ಸಮುದಾಯಕ್ಕೆ ಶಿಕ್ಷಣ ದೊಡ್ಡ ಅಸ್ತ್ರವಾಗಬೇಕು. ಮಕ್ಕಳಿಗೆ ಏನನ್ನಾದರೂ ಕೊಡಬೇಕು ಅನ್ನಿಸಿದರೆ ಅದು ಶಿಕ್ಷಣವೇ ಆಗಿರಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಭೋವಿ ಗುರುಪೀಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 36ನೇ ವಸಂತೋತ್ಸವ, 22ನೇ ಸಮಾಜ ಸೇವಾ ದೀಕ್ಷೆ, 11ನೇ ಪಟ್ಟಾ ಧಿಕಾರ ಹಾಗೂ ಭೋವಿ ಜನೋತ್ಸವದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಶ್ರಮಿಕ ಸಮಾಜ ಶಿಕ್ಷಣ ಪಡೆಯುವ ಸಾಧನೆ ಮಾಡಿದರೆ ಸದೃಢ ಸಮಾಜ ಕಟ್ಟಲು ಸಾಧ್ಯ. ಶಿಕ್ಷಣ ಪಡೆದವರು ಸರ್ಕಾರಿ ಉದ್ಯೋಗದ ಕಡೆ ಮುಖ ಮಾಡಬಾರದು. ಸ್ವಉದ್ಯೋಗದ ಕಡೆ ಗಮನ ಹರಿಸಿದರೆ ಔದ್ಯೋಗಿಕ ಕ್ರಾಂತಿ ಮಾಡಬಹುದು. ವಿದ್ಯೆ ಪಡೆದ ಉದ್ಯೋಗ ಅರಸುವ ಬದಲು ಉದ್ಯೋಗ ಸೃಷ್ಟಿಸಬೇಕು ಆಗ ಮಾತ್ರ ಸಮುದಾಯದ ಅಭಿವೃದ್ಧಿಯಾಗುತ್ತದೆ. ಅಂಬೇಡ್ಕರ್ ಹೇಳಿದಂತೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಸಮಾನತೆಗೆ ಶಿಕ್ಷಣವೇ ಮದ್ದು ಎಂದರು.
ಕಂದಾಚಾರ, ಮೂಢನಂಬಿಕೆ ಬಿಟ್ಟು ವೈಚಾರಿಕ ಧರ್ಮ ಪಾಲಿಸಬೇಕು. ಯಾರು ವೈಚಾರಿಕ ಧರ್ಮ ಪಾಲಿಸುತ್ತಾರೋ ಅವರು ರಾಷ್ಟ್ರ ಆಳಬಹುದು. ರಾಷ್ಟ್ರ ಆಳಲು ಜ್ಞಾನ-ವಿಜ್ಞಾನ, ವೈಚಾರಿಕತೆ ಬಹಳ ಮುಖ್ಯ. ಸ್ವಪ್ರತಿಷ್ಠೆ ಬಿಟ್ಟು ಸಂಘಟಿಸಿದರೆ ಮಾತ್ರ ಸೌಹಾರ್ದ ವಾತಾವರಣ ನಿರ್ಮಾಣ ಮಾಡಲು ಮತ್ತು ಸದೃಢ ಸಮಾಜ ಕಟ್ಟಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ| ಶಾಂತವೀರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ವಚನಾನಂದ ಸ್ವಾಮೀಜಿ, ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ, ಶ್ರೀ ಬಸವಪ್ರಭು ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮೀಜಿ, ಶಿರಸಿ ಬಣ್ಣದ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಬಸವ ಕಿರಣ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಶ್ರೀ ಬಸವ ಪ್ರಸಾದ ಸ್ವಾಮೀಜಿ, ಶ್ರೀ ಮಡಿವಾಳ ಮಾಚಿದೇವ ಸ್ವಾಮೀಜಿ, ಶ್ರೀ ರೇಣುಕಾನಂದ ಸ್ವಾಮೀಜಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಜಿಲ್ಲಾ ಭೋವಿ ಸಂಘದ ಕಾಯರ್ದರ್ಶಿ ಲಕ್ಷ್ಮಣ, ಮಂಜುನಾಥ್, ಕೃಷ್ಣಮೂರ್ತಿ, ಚಂದ್ರಶೇಖರ್, ಡಿ.ಸಿ. ಮೊಹನ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ತಿಮ್ಮಣ್ಣ, ಹನುಮಂತಪ್ಪ ಮೊದಲಾದವರು ಪಾಲ್ಗೊಂಡಿದ್ದರು.